ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್ ಸಲಹೆ
ಪ್ರತಿನಿಧಿ ವರದಿ ಶ್ರೀರಂಗಪಟ್ಟಣ
ಧೂಮಪಾನ ಹಾಗೂ ಮದ್ಯಪಾನ ಮಾಡುವವರಿಗೆ ಸಾಮಾನ್ಯರಿಗಿಂತ ಕ್ಷಯರೋಗ ಮೂರು ಪಟ್ಟು ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ಅದರಿಂದ ದೂರ ಇರುವ ಮೂಲಕ ರೋಗನಿಯಂತ್ರಣ ಮಾಡಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಬಲ್ಲೆನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮೈಸೂರ್ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಎನ್ಎಸ್ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಶಿಬಿರದಲ್ಲಿ ಭಾಗವಹಿಸಿ “ವಿಶ್ವ ಕ್ಷಯರೋಗ ದಿನ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪ್ರತಿ ವರ್ಷ ಮಾರ್ಚ್ 24 ರಂದು ವಿಶ್ವ ಕ್ಷಯರೋಗ ದಿನ ಆಚರಿಸುತ್ತೇವೆ. ನಾವು ಕ್ಷಯ ರೋಗವನ್ನು ಕೊನೆಗಾಣಿಸಬಹುದು ಈ ವರ್ಷದ ಘೋಷ ವಾಕ್ಯವಾಗಿದೆ ಕ್ಷಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಯುವಕರು ದುಶ್ಚಟದಿಂದ ದೂರ ಇರಬೇಕು. ಕ್ಷಯದ ಬಗ್ಗೆ ತಿಳಿದುಕೊಂಡು ಇತರರಿಗೆ ತಿಳಿಸುವಂತಾಗಬೇಕು. ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು, ವಾರಕ್ಕಿಂತ ಹೆಚ್ಚು ಕಫ ಸಹಿತ ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರುವಿಕೆ, ತೂಕ ಇಳಿಕೆ, ಹಸಿವಾಗದಿರುವುದು ಕ್ಷಯದ ಮುಖ್ಯ ಲಕ್ಷಣಗಳಾಗಿದೆ.
ಇಂತಹ ಲಕ್ಷಣ ಹೊಂದಿದವರು ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ಕ್ಷಯ ಎಂದು ದೃಢಪಟ್ಟಲ್ಲಿ ನಿಯಮಿತ ಔಷಧಿ ಪಡೆದು ಗುಣ ಹೊಂದಬೇಕು ಎಂದರು. ಎನ್ಎಸ್ಎಸ್ ಘಟಕದ ಅಧಿಕಾರಿಗಳಾದ ಡಾ. ವಾದಿರಾಜ, ಡಾ.ಚೇತನ್, ಡಾ.ಸುಷ್ಮಾ ಹಾಜರಿದ್ದರು.