- ಸುಮಲತಾ ಅಂಬರೀಶ್ ವಿರುದ್ಧ ಸ್ಥಳೀಯರ ಆಕ್ರೋಶ
ಕರ್ಪೂರವಳ್ಳಿ ಮಹದೇವ್ ಸಾಲಿಗ್ರಾಮ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಐದು ವರ್ಷದ ಅಧಿಕಾರಾವಧಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ತಾಲೂಕು ಕೇಂದ್ರವೂ ಆದ ಸಾಲಿಗ್ರಾಮ ಪಟ್ಟಣಕ್ಕೆ ಭೇಟಿ ನೀಡಿರುವುದು ಕೇವಲ ಒಂದೇ ಬಾರಿ!
ಹೌದು, ಸಾಲಿಗ್ರಾಮ ತಾಲೂಕು ಕೇಂದ್ರವಾಗಿ ಘೋಷಣೆಗೊಂಡು ಐದು ವರ್ಷ ಹಾಗೂ ಅಧಿಕೃತವಾಗಿ ಕಾರ್ಯಾರಂಭಗೊಂಡು ಎರಡು ವರ್ಷ ಕಳೆದರೂ ಲೋಕಸಭಾ ಸದಸ್ಯರಾಗಿ ಸುಮಲತಾ ಅವರು ಇಲ್ಲಿಗೆ ಬಂದುಹೋಗಿದ್ದು ಒಂದು ಸಲ ಮಾತ್ರ. ಪಕ್ಷಾತೀತವಾಗಿ ಮತ ನೀಡಿ ಹರಸಿದ್ದ ಸಾಲಿಗ್ರಾಮದ ಜನತೆಯನ್ನು ತಮ್ಮ ಅಧಿಕಾರಾವಧಿಯಲ್ಲಿ ಮರೆತಿದ್ದಕ್ಕೆ ಸುಮಲತಾ ಅಂಬರೀಶ್ ಅವರ ಬಗ್ಗೆ ಇಲ್ಲಿನ ನಾಗರಿಕರಿಗೆ ಬೇಸರವಿದೆ.
ಸಂಸದೆಯಾಗಿ ಕೆ.ಆರ್.ನಗರ ಪಟ್ಟಣಕ್ಕೆ ಹಲವು ಬಾರಿ ಭೇಟಿ ನೀಡಿದ್ದರೂ ಹತ್ತಿರದಲ್ಲೇ ಇರುವ ಮತ್ತೊಂದು ತಾಲೂಕು ಕೇಂದ್ರ ಸಾಲಿಗ್ರಾಮ ಪಟ್ಟಣಕ್ಕೆ ಬಂದು ಒಂದೇ ಒಂದು ಬಾರಿಯೂ ಅಧಿಕಾರಿಗಳ ಸಭೆ ನಡೆಸಲಿಲ್ಲ. ಜನಸ್ಪಂದನ ಕಾರ್ಯಕ್ರಮ ಮಾಡಲಿಲ್ಲ. ಅಧಿಕಾರಿಗಳ ಸಭೆ ನಡೆಸುವುದಿರಲಿ, ಇಲ್ಲಿನ ತಹಸೀಲ್ದಾರ್ ಕಚೇರಿಗಾಗಲಿ, ತಾಲೂಕು ಪಂಚಾಯಿತಿ ಕಚೇರಿಗಾಗಲಿ ಭೇಟಿ ನೀಡಿ ಮೂಲ ಸೌಲಭ್ಯಗಳ ಬಗ್ಗೆ ಚರ್ಚಿಸಿ, ಸಮಸ್ಯೆಗಳನ್ನು ಆಲಿಸಲಿಲ್ಲ ಎಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ದೂರು ನೀಡಲು ಬಂದಿದ್ದರು: ಸಾಲಿಗ್ರಾಮಕ್ಕೆ ಎಲೆಕ್ಷನ್ಗೂ ಮುನ್ನ ಮತ ಕೇಳಲು ಒಂದು ಬಾರಿ ಬಂದಿದ್ದ ಸುಮಲತಾ ಅವರು ಸಂಸದರಾಗಿಯೂ ಬಂದಿದ್ದು ಒಂದು ಬಾರಿ ಮಾತ್ರ. ಸಂಸದರಾಗಿ ಆಯ್ಕೆಯಾದ ಬಳಿಕ ಎರಡು ವರ್ಷದ ಹಿಂದೆ ೨೦೨೨ ಮಾರ್ಚ್ ೯ರಂದು ತಾಲೂಕಿನ ಮುಂಜನಹಳ್ಳಿಯಲ್ಲಿ ನೀರಾವರಿ ಇಲಾಖೆಯ ಕಾಮಗಾರಿಯೊಂದಕ್ಕೆ ಭೂಮಿಪೂಜೆ ನೆರವೇರಿಸುವ ವೇಳೆ ಘರ್ಷಣೆ ನಡೆದಿತ್ತು. ಆ ವೇಳೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ದೂರು ನೀಡಲು ಸಾಲಿಗ್ರಾಮ ಪೊಲೀಸ್ ಠಾಣೆಗೆ ಬೆಂಬಲಿಗರೊಂದಿಗೆ ಬಂದಿದ್ದರು. ರಾತ್ರಿ ಸಮಯವಾದರೂ ಅಂದು ಪೊಲೀಸ್ ಠಾಣೆಯಲ್ಲೇ ಸುಮಾರು ಎರಡು ಗಂಟೆ ಕಾಲ ಇದ್ದು, ಎಫ್ಐಆರ್ ಮಾಡಿಸಿಯೇ ವಾಪಸ್ ತೆರಳಿದ್ದು ಬಿಟ್ಟರೆ ಇದುವರೆಗೆ ಒಂದು ಸಲವೂ ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆರೋಪ.
(ಕೋಟ್)
ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿ ಹಾಕದ ಕಾರಣ ನಾವು ಬಿಜೆಪಿ ಕಾರ್ಯಕರ್ತರಾಗಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರಿಗೆ ಸಂಪೂರ್ಣ ಬೆಂಬಲ ನೀಡಿ ಮತ ಹಾಕಿಸಲು ಶ್ರಮಿಸಿದ್ದೆವು. ಪಕ್ಷಾತೀತವಾಗಿ ಸಾಲಿಗ್ರಾಮದ ಜನತೆ ಸುಮಲತಾ ಅವರಿಗೆ ಸಾಕಷ್ಟು ಮತಗಳನ್ನು ನೀಡಿ ಗೆಲ್ಲಲು ಸಹಕಾರ ನೀಡಿದ್ದರು. ಆದರೂ ಸುಮಲತಾ ಅವರು ಕೃತಜ್ಞತೆ ಹೇಳುವುದಿರಲಿ, ಐದು ವರ್ಷದಲ್ಲಿ ಒಂದು ಬಾರಿಯೂ ಸಾಲಿಗ್ರಾಮಕ್ಕೆ ಭೇಟಿ ನೀಡಿ ಜನರ ಕಷ್ಟಸುಖ ಕೇಳಲಿಲ್ಲ.
-ಎಸ್.ಎಸ್.ನಟರಾಜ್, ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ, ಸಾಲಿಗ್ರಾಮ
ಎಸ್.ಎಸ್.ನಟರಾಜ್ ಅವರ ಪೋಟೊ ಇದೆ.
(ಸುಮಲತಾ ಅವರ ಪೋಟೋ ಬಳಿಸಿ)