ಪ್ರತಿನಿಧಿ ವರದಿ ತಲಕಾಡು
ಅಕ್ರಂಪಾಷ ತಲಕಾಡು
ಹೋಬಳಿ ಭಾಗದ ನಾಲೆಗಳು ಬೇಸಿಗೆ ರಣ ಬಿಸಿಲಿಗೆ ನೀರಿಲ್ಲದೆ ಭಣಗುಡುತ್ತಿದ್ದು, ತನ್ನೊಡಲೊಳಗೆ ಮುಚ್ಚಿಟ್ಟುಕೊಂಡಿದ್ದ ಕಾಮಗಾರಿಯ ಹುಳುಕು ಸ್ಥಿತಿ ಬಯಲಾಗಿದೆ. ನಾಲೆಗಳ ಅಭಿವೃದ್ದಿಗೆ ಸರ್ಕಾರ ಕೋಟಿಗಳ ಲೆಕ್ಕದಲ್ಲಿ ವೆಚ್ಚ ಮಾಡುತ್ತಿದ್ದರೂ ಮತ್ತೆ ಮತ್ತೆ ದುಸ್ಥಿತಿಗೆ ತಲುಪಿದ್ದಕ್ಕೆ ರೈತರು ವ್ಯಥೆಪಡುತ್ತಿದ್ದಾರೆ.
ಹೋಬಳಿ ರೈತರ ಜೀವನಾಡಿ ಮಾಧವಮಂತ್ರಿ, ರಾಮಸ್ವಾಮಿ ನಾಲೆಗಳಲ್ಲಿಅಲ್ಲಲ್ಲಿ ಕಾಂಕ್ರೀಟ್ ತಡೆಗೋಡೆಗಳು, ಅಡ್ಡ ಸೇತುವೆ ತೂಬುಗಳು ದುರಸ್ತಿಗೆ ಒಳಪಟ್ಟಿವೆ. ಎರಡೂ ನಾಲೆಗಳ ಪುನಶ್ಚೇತನಕ್ಕೆ ಮುಂಗಾರು ಮುನ್ನ ಸರ್ಕಾರ ಮತ್ತೆ ವೆಚ್ಚ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆ ಅಭಾವದಿಂದ ಮುಂಗಾರು ಬೆಳೆಯವರೆಗೆ ಇಲ್ಲಿನ ನಾಲೆಗಳಲ್ಲಿ ನೀರು ಹರಿಯುವ ಯಾವುದೇ ಲಕ್ಷಣ ಇಲ್ಲದ್ದರಿಂದ ನಾಲಾ ಅಭಿವೃದ್ದಿ ಕಾಮಗಾರಿ ಕೈಗೆತ್ತಿಗೊಳ್ಳಲು ಬೇಸಿಗೆ ಸಮಯ ಪ್ರಶಸ್ತವಾಗಿದೆ. ಈಗಾಗಲೇ ದುಸ್ಥಿತಿಯಲ್ಲಿರುವ ಇಲ್ಲಿನ ನಾಲೆಗಳ ಅಭಿವೃದ್ದಿ ಕೈಗೊಳ್ಳಲು ಬನ್ನೂರು ನಾಲಾ ಅಧಿಕಾರಿಗಳು ಸರ್ಕಾರಕ್ಕೆ ಕ್ರಿಯಾಯೋಜನೆಯ ಅಂದಾಜು ಪಟ್ಟಿ ಸಲ್ಲಿಸಿದ್ದಾರೆ.
ಹಿಂದೆ ನಡೆದಿದ್ದ ನಾಲಾ ಕಾಮಗಾರಿ
ಗುಣಮಟ್ಟದಿಂದ ರಸ್ತೆ ಕಾಮಗಾರಿ ನಡೆದಿಲ್ಲ ಎಂಬುದಕ್ಕೆ ಅಲ್ಲಲ್ಲಿ ಕುಸಿದು ಬಿದ್ದಿರುವ ನಾನಾ ಕಾಂಕ್ರೀಟ್ ತಡೆಗೋಡೆ, ಅಡ್ಡ ಸೇತುವೆ ತೂಬುಗಳೇ ಸಾಕ್ಷಿಯಾಗಿವೆ. ಬೆಳೆ ಕಾಲಕ್ಕೆ ನೀರು ಬಿಡುವ ಸಮಯ ಹತ್ತಿರವಾದಂತೆ ತರಾತುರಿಯಲ್ಲಿ ನಾಲಾ ಸ್ವಚ್ಛತೆ ನಡೆಸಿ, ನೀರು ಬಿಡುತ್ತಿದ್ದರಿಂದ ನಾಲೆಯಲ್ಲಿ ನಡೆದಿದ್ದ ಹುಳುಕು ಕಾಮಗಾರಿ ನೀರಿನಲ್ಲಿ ಮುಚ್ಚಿ ಹೋಗುತಿತ್ತು. ಒಮ್ಮೆ ನಾಲೆಯಲ್ಲಿ ನೀರು ಹರಿಸಿದರೆ ಫಸಲು ರೈತರ ಕೈ ಸೇರಿದ ಮೇಲೆ ನೀರು ನಿಲ್ಲಿಸುವುದು, ಮತ್ತೆ ಬೇಸಿಗೆ ಬೆಳೆಗೆ ನೀರು ಹರಿಸುತ್ತಿದ್ದರಿಂದ ನಾಲೆಗಳಲ್ಲಿ ನಡೆದಿದ್ದ ಕಾಮಗಾರಿಯ ಬಹುತೇಕ ಹುಳುಕು ಹೊರ ಜಗತ್ತಿಗೆ ಕಾಣದೆ ಮುಚ್ಚಿ ಹೋಗುತ್ತಿತ್ತು.
ಆದರೆ ಈ ಬಾರಿ ಬೇಸಿಗೆಯಲ್ಲಿ ಇಲ್ಲಿನ ನಾಲೆಗಳಲ್ಲಿ ಮಳೆ ಅಭಾವ, ಅಣೆಕಟ್ಟೆಗಳಲ್ಲಿ ನೀರಿಲ್ಲದ ಪರಿಣಾಮ, ಹಿಂದೆ ನಾಲೆಗಳಲ್ಲಿ ನಡೆದಿದ್ದ ಕಾಮಗಾರಿಗಳ ಹುಳುಕು ಬಯಲಾಗಿದೆ.
ಸರ್ಕಾರ ತಾನೆ ಎಷ್ಟು ಅಂತ ವೆಚ್ಚ ಮಾಡುತ್ತದೆ? ಸರ್ಕಾರ ನಾಲೆಗಳ ಅಭಿವೃದ್ದಿಗೆ ಬಿಡುಗಡೆ ಮಾಡಿದ ಮೊತ್ತವನ್ನು ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ಹಾಗೂ ಗುಣಮಟ್ಟದ ಕಾಮಗಾರಿ ನಡೆಸಲು ದಕ್ಷತೆ ತೋರಿದಾಗ, ಸರ್ಕಾರ ಮತ್ತೆ ಮತ್ತೆ ವ್ಯರ್ಥವಾಗಿ ಅದದೇ ಜಾಗಕ್ಕೆ ವ್ಯಯ ಮಾಡುವ ಹೊರೆ ತಪ್ಪಲಿದೆ.
ಅಚ್ಚುಕಟ್ಟು ರೈತರ ಆಗ್ರಹ:-
ಮಾಧವಮಂತ್ರಿ ಅಣೆಕಟ್ಟೆ ಬಳಿಯಿಂದ ಹೊರಡುವ ನಾಲೆ ಹೆಮ್ಮಿಗೆ ಮುಖ್ಯರಸ್ತೆ ಸೇರುವವರೆಗೆ ತೀರಾ ದುಸ್ಥಿತಿಗೆ ತಲುಪಿದೆ.
ಇಲ್ಲಿನ ನಾಲಾ ತಡೆಗೋಡೆಗೆ ಬಳಸಿದ್ದ ಹಳೆಯ ತಡೆಗೋಡೆ ಕಲ್ಲುಗಳು ಹಾಗೂ ತಡೆಗೋಡೆ ಮೇಲ್ಭಾಗ ಕಲ್ಲುಗಳ ಉದ್ದಕ್ಕೂ ಕಾಂಕ್ರೀಟ್ ಕೂಪಿಂಗ್ ಕಾಮಗಾರಿ ಶಿಥಿಲಾವಸ್ಥೆಗೆ ತಲುಪಿದೆ. ಇದರ ಜತೆಗೆ ನಾಲಾದಂಡೆಯ ರಸ್ತೆ ಅಭಿವೃದ್ದಿ, ಜಂಗಲ್ ಕಟಿಂಗ್ ನಡೆಸಿ ಮುಂದಿನ ಮುಂಗಾರು ಬೆಳೆ ಅವಧಿಗೆ ಮುನ್ನ ಅಭಿವೃದ್ದಿಪಡಿಸಿ ಕೊಡುವಂತೆ ಅಚ್ಚುಕಟ್ಟು ರೈತರು ಒತ್ತಾಯಿಸಿದ್ದಾರೆ.
ಹೇಳಿಕೆ
ಮಾಧವಮಂತ್ರಿ ಹಾಗೂ ರಾಮಸ್ವಾಮಿ ಮುಖ್ಯನಾಲೆಯ ಅಲ್ಲಲ್ಲಿ ದುರಸ್ತಿ ಸೇರಿದಂತೆ ಉಪನಾಲೆಗಳು, ಅಡ್ಡ ಸೇತುವೆಗಳು, ತೂಬುಗಳು ಹಾಗೂ ನಾಲಾ ದಂಡೆಯ ರಸ್ತೆ ಅಭಿವೃದ್ದಿಗೆ 70 ರಿಂದ 80 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಪ್ರಸ್ತಾವನೆ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ.
ರವೀಂದ್ರನಾಥ್
ಎಇ, ಬನ್ನೂರು ನಾಲಾ ಉಪವಿಭಾಗ
ಚಿತ್ರಶೀರ್ಷಿಕೆ 1,2,3,4
ತಲಕಾಡು ಮಾಧವಮಂತ್ರಿ ಮತ್ತು ರಾಮಸ್ವಾಮಿ ನಾಲೆಗಳ ದುಸ್ಥಿತಿಯ ಚಿತ್ರನೋಟ.