ಮಂಡ್ಯ: ತಾಲ್ಲೂಕಿನ ಹೊಳಲು ಗ್ರಾಮದ ಗ್ರಾಮದೇವತೆ ಶ್ರೀದೊಡ್ಡಮ್ಮತಾಯಿಯ ವಾರ್ಷಿಕ ಹಬ್ಬ ಸಡಗರ ಸಂಭ್ರಮ ಮತ್ತು ವಿಜೃಂಭಣೆಯಿಂದ ಜರುಗಿತು.
ಹಬ್ಬದ ಅಂಗವಾಗಿ ಇಡೀ ಗ್ರಾಮವೇ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿದ್ದು, ಪ್ರತಿ ಮನೆಯ ಮುಂದೆಯೂ ಮಹಿಳೆಯರು ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಸಿಂಗರಿಸಿದ್ದರು. ಎಲ್ಲೆಡೆ ತಳಿರು ತೋರಣ, ಬಾಳೆಕಂದು ಹೂಗಳಿಂದ ಶೃಂಗಾರಗೊಂಡ ಬೀದಿಗಳು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಹಬ್ಬದ ಅಂಗವಾಗಿ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ, ತಮಟೆ ನಗಾರಿಯ ಸದ್ದಿನೊಂದಿಗೆ ಗ್ರಾಮದ ಬಲಮುರಿ ಗಣಪತಿ ದೇವಾಲಯ ಪ್ರದಕ್ಷಿಣೆ ಮಾಡಿ ಶ್ರೀದೊಡ್ಡಮ್ಮತಾಯಿ ದೇವಾಲಯದ ಮುಂಭಾಗಕ್ಕೆ ಆಗಮಿಸಿದರು. ಬಳಿಕ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಆರತಿ ಬೆಳಗುವ ಮೂಲಕ ಮಹಿಳೆಯರು ಹರಕೆ ತೀರಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ, ಪ್ರತಿವರ್ಷ ಗ್ರಾಮದಲ್ಲಿ ವಿಜೃಂಭಣೆಯಿಂದ ಶ್ರೀದೊಡ್ಡಮ್ಮತಾಯಿ ಹಬ್ಬ ಆಚರಣೆಯಾಗುತ್ತದೆ. ಆದರೆ, ಮೂರು ವರ್ಷಗಳ ಹಿಂದೆ ಕೊರೊನಾ ಸಂದರ್ಭದಲ್ಲಿ ಹಬ್ಬ ಆಚರಿಸಲು ತಡೆಯಾಗಿತ್ತು. ಈ ಬಾರಿ ಎಲ್ಲೆಡೆ ಬರ ಆವರಿಸಿದೆ. ಆದರೂ ಸಾಂಸ್ಕೃತಿಕವಾಗಿ ಎಲ್ಲ ರೀತಿಯ ಪೂಜಾ ಕಾರ್ಯಕ್ರಮಗಳು ನಡೆದಿವೆ. ಬರದ ತೀವ್ರತೆ ಕಡಿಮೆಯಾಗಿ ಮಳೆ ಬೆಳೆಯಾಗುವ ಮೂಲಕ ರೈತನ ಬಾಳಲ್ಲಿ ಹೊಸ ಬೆಳಕು ಮೂಡಿಸಲಿ ಎಂದು ದೇವರಲ್ಲಿ ಮೊರೆ ಹೋಗುವುದು ಅಗತ್ಯ. ಹಾಗಾಗಿ ದೊಡ್ಡಮ್ಮತಾಯಿ ಎಲ್ಲರಿಗೂ ಒಳಿತು ಮಾಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಎಚ್.ಬಿ.ರಾಮು, ಮುಖಂಡರಾದ ಅಭಿನಂದನ್, ಜಟ್ಟಿ ಕುಮಾರ್, ಲಿಂಗಪ್ಪ, ಎಸ್.ಸಿ.ಲಿಂಗರಾಜು, ವಿಜಯ್ ಕುಮಾರ್, ಶ್ರೀಧರ್, ಎಚ್.ಡಿ.ರವಿ ಇದ್ದರು.