ರಘುವೀರ್ ಪಾಂಡವಪುರ
ಮಳೆ ಇಲ್ಲದೆ ತೀವ್ರ ಬರಗಾಲ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಪಾಂಡವಪುರ ಪಟ್ಟಣದ ಹಿರೋಡೆ ಕೆರೆಯಲ್ಲಿ ನೀರು ದಿನನಿತ್ಯ ಕಡಿಮೆಯಾಗುತ್ತಾ ಬತ್ತಿ ಹೋಗುವ ಹಂತಕ್ಕೆ ತಲುಪುತ್ತಿದೆ.
ಕುಂತಿಬೆಟ್ಟದ ತಪ್ಪಲಿನಲ್ಲಿರುವ ವಿಶಾಲವಾದ ಹಿರೋಡೆ ಕೆರೆಯಲ್ಲಿ ಯಾವಾಗಲೂ ನೀರು ಸಂಗ್ರಹವಾಗಿರುವುದು ಈ ಕೆರೆಯ ವಿಶೇಷವಾಗಿದೆ. ಆದರೆ ಕಳೆದ ಒಂದು ತಿಂಗಳಿಂದ ಕೆರೆಯ ನೀರು ಸಾಕಷ್ಟು ಬತ್ತಿಹೋಗಿದೆ.
ಈ ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿದ್ದಾಗ ಪಟ್ಟಣದ ಪ್ರಸಿದ್ಧ ಹಿರೋಡೆ ಕೆರೆ ಸಂಪೂರ್ಣ ಬತ್ತಿ ಹೋಗಿತ್ತು. ಪ್ರಸ್ತುತವಾಗಿ ಬರಗಾಲ ಹಿನ್ನೆಲೆ ಕೆರೆಯಲ್ಲಿ ನೀರು ಖಾಲಿಯಾಗುತ್ತಿರುವ ದೃಶ್ಯ ಕಂಡು ಬಂದಿದೆ.
ಕಳೆದ ಒಂದು ತಿಂಗಳ ಹಿಂದೆ ಹಿರೋಡೆ ಕೆರೆ ನೀರು ತುಂಬಿಕೊಂಡಿತ್ತು. ಮಳೆ ಇಲ್ಲದ ಕಾರಣ ಕೆರೆಯ ನೀರು ಸುಮಾರು ಏಳೆಂಟು ಅಡಿ ಆಳದಷ್ಟು ಕಡಿಮೆಯಾಗಿ, ಕೆರೆ ಒಳಭಾಗದಲ್ಲಿ ಭೂಮಿ ಕಾಣುತ್ತಿದೆ. 22 ವರ್ಷದ ಬಳಿಕ ಮತ್ತೊಮ್ಮೆ ಹಿರೋಡೆ ಕೆರೆ ನೀರು ಕಡಿಮೆಯಾಗುತ್ತಿದೆ.
ವರ್ಷಪೂರ್ತಿ ನೀರು ತುಂಬಿಕೊಂಡು, ಆಗಾಗ ಕೋಡಿ ಬೀಳುತ್ತಿದ್ದ ಹಿರೋಡೆ ಕೆರೆ ನೀರಿನಿಂದ ಕೆರೆ ಭಾಗದ ಸುತ್ತಮುತ್ತಲ ಕಿರು ನಾಲೆ ಹಾಗೂ ಹಳ್ಳ ಕೊಳ್ಳಗಳಿಗೆ ನೀರು ಹರಿಯುತ್ತಾ, ನೂರಾರು ಎಕರೆ ಪ್ರದೇಶದಷ್ಟು ವ್ಯವಸಾಯಕ್ಕೆ ನೀರಿನ ಸೌಲಭ್ಯ ಒದಗಿಸುತ್ತಿತ್ತು.
ಬತ್ತುತ್ತಿರುವ ಹಿರೋಡೆಕೆರೆಯಿಂದ ಈ ಭಾಗದ ರೈತರ ಬದುಕು ಆತಂಕಕ್ಕೆ ಒಳಪಟ್ಟಿದೆ. ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ನಾಲೆಯಲ್ಲೂ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಅಂತರ್ಜಲವೂ ಸಂಪೂರ್ಣ ಕುಸಿತಗೊಂಡಿದೆ.
ತಾಲೂಕಿನ ಪ್ರವಾಸಿಕ್ಷೇತ್ರ ತೊಣ್ಣೂರು ಕೆರೆಯಿಂದ ಪಟ್ಟಣದ ಹಿರೋಡೆ ಕೆರೆಗೆ ನೀರು ಹರಿಸಿದರೆ ಈ ಭಾಗದ ರೈತರು ಬೆಳೆದ ಬೆಳೆಗಳು ರಕ್ಷಿಸಿಕೊಳ್ಳಬಹುದು ಎಂದು ರೈತ ಶ್ರೀನಿವಾಸ ನಾಯ್ಕ ಒತ್ತಾಯಿಸಿದ್ದಾರೆ.
ಕೆರೆಯಲ್ಲಿ ಹೂಳು ತುಂಬಿಕೊಂಡು ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಕೆರೆಯ ಹೂಳು ತೆಗೆದು, ಕೆರೆಯ ಏರಿ ಎತ್ತರಿಸಿ, ನೀರಿನ ಸಂಗ್ರಹ ಹೆಚ್ಚಳ ಮಾಡುವ ಮೂಲಕ ಸಮರ್ಪಕ ನೀರಿನ ಬಳಕೆಗೆ ಅವಕಾಶ ಮಾಡಿಕೊಡಬೇಕೆಂದು ಪಾಂಡವಪುರ ಹಿರೋಡೆಕೆರೆ ನೀರು ಬಳಕೆದಾರರ ಸಂಘದ ಮುಖ್ಯಸ್ಥ ಆರ್.ಚನ್ನಕೇಶವ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.