ಕದಸಂಸ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ
ಮಂಡ್ಯ: ಕಾವೇರಿ ನೀರನ್ನು ಕಾಲುವೆಗಳಿಗೆ ಹರಿಸಿ, ರೈತರಿಗೆ ಬರ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಸರ್ ಎಂ ವಿ ಪ್ರತಿಮೆ ಎದುರಿನಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಷ್ಟ್ರೀಯ ಜಲ ನೀತಿ ಇಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರ ರಾಜ್ಯದ ಜನತೆ ಮತ್ತು ಜಾನುವಾರುಗಳ ಹಿತ ಬಲಿ ಕೊಟ್ಟಿದೆ. ಜಲಾಶಯಗಳಲ್ಲಿ ಇದ್ದ ನೀರು ನೆರೆ ರಾಜ್ಯಕ್ಕೆ ಹರಿದ ಪರಿಣಾಮ ಇಲ್ಲಿನ ರೈತರು ಬೆಳೆ ಹಾಕದ ಪರಿಸ್ಥಿತಿ ನಿರ್ಮಾಣವಾಯಿತು, ಜಮೀನಿನಲ್ಲಿರುವ ಬೆಳೆ ಬಿರು ಬಿಸಿಲಿಗೆ ಒಣಗಿ ತರಗಾಗುತ್ತಿದೆ. ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದೆ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ, ಆದರೂ ಸಹ ಆಳುವ ಸರ್ಕಾರ ಚುನಾವಣೆಯಲ್ಲಿ ಬಿಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ, ಕೃಷ್ಣ, ಭೀಮಾ ನದಿ ಕರ್ನಾಟಕ ಸುತ್ತುವರದಿದ್ದರೂ ಸಹ ನೆರೆ ರಾಜ್ಯಗಳೊಂದಿಗೆ ಉಂಟಾಗಿರುವ ಜಲ ವಿವಾದಗಳಲ್ಲಿ ಕೇಂದ್ರ -ರಾಜ್ಯ ಸರ್ಕಾರ ಮತ್ತು ಚುನಾಯಿತ ಜನಪ್ರತಿನಿಧಿಗಳ ರಾಜಕೀಯ ಇಚ್ಛಾ ಶಕ್ತಿ ಕೊರತೆಯಿಂದ ಕಾನೂನು ಹೋರಾಟದಲ್ಲಿ ಸಂಪೂರ್ಣ ವೈಫಲ್ಯತೆ ಕಂಡಿದೆ ಇದರಿಂದ ಕರ್ನಾಟಕದ ನೀರಿನ ಪಾಲು ಮರೀಚಿಕೆಯಾಗಿದೆ.
ಭೀಕರ ಬರಗಾಲದಿಂದ ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದ್ದು, ರೈತರ ಮತ್ತು ಜನ ಜಾನುವಾರಗಳ ಪರಿಸ್ಥಿತಿ ಬಿಗಡಾಯಿಸಿದೆ ಆದರೂ ರಾಜ್ಯ ಸರ್ಕಾರ ನಯಾ ಪೈಸೆ ಪರಿಹಾರ ನೀಡಿಲ್ಲ, ಕಾವೇರಿ, ಕೃಷ್ಣ, ಭೀಮ ಹಾಗೂ ಹೇಮಾವತಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕು. ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ ಮುಂದಾಗಬೇಕು, ಜನ–ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸಬೇಕು ಹಾಗೂ ರೈತರು, ಕೃಷಿ ಕಾರ್ಮಿಕರಿಗೆ ತಲಾ ಐವತ್ತು ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಲೋಕಸಭಾ ಚುನಾವಣೆಯನ್ನು ಮುಕ್ತ ನಾಯಸಮ್ಮತ, ಪಾರದರ್ಶಕವಾಗಿ ನಡೆಸಲು ಮುಂದಾಗಬೇಕು, ಚುನಾವಣಾ ಆಯುಕ್ತರಾಗಿದ್ದ ಟಿ ಎನ್ ಶೇಷನ್ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಚುನಾವಣೆ ನಡೆಸಿದ ಇತಿಹಾಸ ಇದೆ, ಅದನ್ನು ಮೀರಿ ಚುನಾವಣೆ ನಡೆಸುವ ಮೂಲಕ ಭಾರತ ಸಂವಿಧಾನದ ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ,ಅನಿಲ್ ಕುಮಾರ್ ಕೆರಗೋಡು, ಕೆಎಂ ಶ್ರೀನಿವಾಸ್, ಎಸ್ ಕುಮಾರ, ಸೋಮಶೇಖರ್, ಭಾಗ್ಯಮ್ಮ, ಗೀತಾ ಮೇಲುಕೋಟೆ, ಸುಕನ್ಯಾ, ಸುರೇಶ್ ಕುಮಾರ್, ಬಿ ಆನಂದ, ಬಸವರಾಜ್, ಬಲರಾಮ ನೇತೃತ್ವ ವಹಿಸಿದ್ದರು.