ಮೈಸೂರು: ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ಟಿವ್ ಆಗಿದ್ದು, ಆಪರೇಷನ್ ಹಸ್ತಕ್ಕೆ ರಿವರ್ಸ್ ಆಪರೇಷನ್ ಮಾಡಿ ಆಪ್ತನನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವಲ್ಲಿ ಸಕ್ಸಸ್ ಆಗಿದ್ದಾರೆ. ಇಂದು ಕಾಂಗ್ರೆಸ್ ಸೇರ್ಪಡೆಯಾಗಬೇಕಿದ್ದ ವರುಣ ಬಿಜೆಪಿ ಮುಖಂಡ ಸದಾನಂದರನ್ನ ಮನವೊಲಿಸುವಲ್ಲಿ ವಿಜಯೇಂದ್ರ ಯಶಸ್ವಿಯಾಗಿದ್ದಾರೆ. ಯಡಿಯೂರಪ್ಪ ಮತ್ತು ವಿಜಯೇಂದ್ರರಿಗೆ ಸದಾನಂದ ಆಪ್ತನಾಗಿದ್ದರು. ಆದರೆ ಎಚ್.ವಿ.ರಾಜೀವ್ ಜತೆ ಕಾಂಗ್ರೆಸ್ ನತ್ತ ಮುಖ ಮಾಡಿ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಮುಂದಾಗಿದ್ದರು. ಇನ್ನೇನು ಒಂದು ಕಾರ್ಯಕ್ರಮ ಏರ್ಪಡಿಸಿ ಸದಾನಂದರನ್ನು ಕಾಂಗ್ರೆಸ್ ಸೇರಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸುವ ಹಂತದಲ್ಲಿ ವಿಜಯೇಂದ್ರ ತಮ್ಮ ಸಂಘಟನಾ ಚಾತುರ್ಯ ಮೆರೆದಿದ್ದಾರೆ. ಸದಾನಂದರ ಮನಸ್ಸು ಪರಿವರ್ತನೆ ಮಾಡಿ ಬಿಜೆಪಿಯಲ್ಲಿ ಉಳಿಯುವಂತೆ ಮಾಡಿ ಕಾಂಗ್ರೆಸ್ ಗೆ ಶಾಕ್ ಕೊಟ್ಟಿದ್ದಾರೆ. ಇನ್ನು ಸದಾನಂದರ ಮನೆಗೆ ವಿಜಯೇಂದ್ರ ತೆರಳಿ ಸದಾನಂದರಿಗೆ ಸಿಹಿ ತಿನ್ನಿಸಿದ್ದಾರೆ.