ಲೋಕಸಭೆ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್ಡಿ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯುವುದು ಖಚಿತವಾದ ಬೆನ್ನಲ್ಲೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂಡ್ಯ ಲೋಕಸಭಾ ಕ್ಷೇತ್ರ ಗೆಲ್ಲಲು ಸಂಧಾನ ಸೂತ್ರಕ್ಕೆ ಕುಮಾರಸ್ವಾಮಿ ಮೊರೆಹೋಗಿದ್ದಾರೆ. ರಾಜಕೀಯವಾಗಿ ಮುನಿಸಿಕೊಂಡಿದ್ದ ಬಿಜೆಪಿ ನಾಯಕ ಕೆ.ಸಿ ನಾರಾಯಣಗೌಡ ಹಾಗೂ ಕುಮಾರಸ್ವಾಮಿ ಇದೀಗ ಒಂದಾಗಿದ್ದಾರೆ. ಅಲ್ಲದೆ, ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ನಿಮ್ಮಿಂದ, ನಿಮ್ಮ ಗೆಲುವಿಗೆ ಶ್ರಮಿಸುವೆ ಎಂದು ಕುಮಾರಸ್ವಾಮಿಗೆ ಮಾಜಿ ಸಚಿವ ಕೆಸಿ ನಾರಾಯಣಗೌಡ ಭರವಸೆ ನೀಡಿದ್ದಾರೆ.
ಜೆಡಿಎಸ್ನ ಸಿಎಸ್ ಪುಟ್ಟರಾಜು, ಅಶ್ವಥ್ ನಾರಾಯಣ್ ಉಭಯ ನಾಯಕರ ನಡುವೆ ಸಂಧಾನ ಮಾಡಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ, ಮಂಡ್ಯದಲ್ಲಿ ಕಾಂಗ್ರೆಸ್ ಓಟಕ್ಕೆ ತಡೆಯೊಡ್ಡಲು ಬಿಜೆಪಿಯ ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. ಇದರ ಮೊದಲ ಭಾಗವಾಗಿಯೇ ಮಾಜಿ ಸಚಿವ ನಾರಾಯಣಗೌಡ ಮನವೊಲಿಕೆ ಮಾಡಲಾಗಿದೆ.