ಕೊನೆಯ ಚುನಾವಣೆ ಅಸ್ತ್ರ ಬಳಸುತ್ತಿರುವ ಮೊಯಿಲಿ
ಅಭ್ಯರ್ಥಿ ಸೂಚಿಸುವಲ್ಲಿ ವಿಳಂಬ
ದೇವನಹಳ್ಳಿ: ಜಿಲ್ಲೆಯ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರಿದಿದ್ದು, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಟಿಕೆಟ್ಗೆ ಬಿಗಿ ಪಟ್ಟು ಹಿಡಿದಿರುವ ಪರಿಣಾಮ ಕಾಂಗ್ರೆಸ್ ಟಿಕೆಟ್ ಕಂಗ್ಗಟ್ಟಾಗಿ ಪರಿಣಮಿಸಿದೆ.
ನಾಲ್ಕು ಬಾರಿ ಸಂಸದ ಆರ್.ಎಲ್.ಜಾಲಪ್ಪ ನಂತರ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿ ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಲಾಗದೇ ಮೋದಿ ಅಲೆಯಲ್ಲಿ ಸೋತ ಎಂ.ವೀರಪ್ಪ ಮೊಯಿಲಿ ಅವರಿಗೆ ಟಿಕೆಟ್ ಒಲಿಯುವುದೇ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.
ಲೋಕಸಭಾ ಚುನಾವಣೆ ಘೋಷಣೆಗೂ ಮೊದಲು ಹಾಗೂ ಆನಂತರ ಮೊಯಿಲಿಗಿಂತ ರಕ್ಷಾ ರಾಮಯ್ಯ ಹೆಸರು ಮುಂಚೂಣಿಗೆ ಬಂದಿತ್ತು. ಆದರೆ, ಹಲವು ದಿನಗಳಿಂದ ಮೊಯಿಲಿ ದೆಹಲಿ ಮಟ್ಟದಲ್ಲಿ ಟಿಕೆಟ್ಗೆ ಕಸರತ್ತು ನಡೆಸುತ್ತಿದ್ದ ಕಾರಣ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅಂತಿಮ ಅಭ್ಯರ್ಥಿ ಆಯ್ಕೆ ಮಾಡುವುದು ಕಾಂಗ್ರೆಸ್ ವರಿಷ್ಠರಿಗೆ ಸವಾಲಾಗಿದೆ.
ಈಗಾಗಲೇ ರಾಜ್ಯದಲ್ಲಿ ಬಹುತೇಕ ಕ್ಷೇತ್ರಗಳಿಗೆ ಸಚಿವರ, ಶಾಸಕರ ಮಕ್ಕಳಿಗೆ ಮಣೆ ಹಾಕಿದ್ದು, ಇದರ ಬಗ್ಗೆ ಮೊಯಿಲಿ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿ ದ್ದರು. ರಾಜ್ಯದಲ್ಲಿ ಹಿರಿಯ ತಲೆಗಳಿಗೆ ಕೊಕ್ ಕೊಡಲಾಗಿದೆ. ಅದೇ ರೀತಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊಯಿಲಿಗೆ ಟಿಕೆಟ್ ಕೊಡಲು ಒಪ್ಪದ ರಾಜ್ಯ ನಾಯಕರು ರಕ್ಷಾ ರಾಮಯ್ಯ ಹೆಸರು ಶಿಫಾರಸು ಮಾಡಿದ್ದಾರೆ.
ಆದರೆ, ಕೊನೆ ಗಳಿಗೆಯಲ್ಲಿ ಜಾಗೃತಗೊಂಡಿರುವ ಮೊಯಿಲಿ ಇದು ನನ್ನ ಕೊನೆ ಚುನಾವಣೆ, ಚಿಕ್ಕಬಳ್ಳಾಪುರ ಟಿಕೆಟ್ ನನಗೆ ಬೇಕೆಂದು ಹಠ ಹಿಡಿದು ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೂಲಕ ಒತ್ತಡ ತರುವ ಕೆಲಸ ಮಾಡುತ್ತಿರುವ ಪರಿಣಾಮ ರಕ್ಷಾ ರಾಮಯ್ಯ ಹೆಸರು ಅಂತಿಮಗೊಳ್ಳುವುದಕ್ಕೆ ಬ್ರೇಕ್ ಬಿದ್ದಿದೆ. ಒಬಿಸಿ ಸಮುದಾಯಕ್ಕೆ ಟಿಕೆಟ್ ಕೊಡುವುದಿದ್ದರೆ ನನಗೆ ಕೊಡಿ ಎಂದು ಮೊಯಿಲಿ ಪಟ್ಟು ಹಿಡಿದಿದ್ದಾರೆ.