ರಾಜಣ್ಣ ಹೇಳಿಕೆಗೆ ಶ್ರೀಧರಗೌಡ ಬೆಂಬಲಿಗರ ಆಕ್ರೋಶ
ಹಾಸನ: ಬಾಡಿಗೆ ಗಿರಾಕಿಗಳು, ನಿಮ್ಮಂತಹವರನ್ನು ನಾನು ಬಹಳ ನೋಡಿದ್ದೇನೆ, ೩೦ ಸಾವಿರ ಲೀಡ್ ಕೋಡೋ ನೀನು ಯಾಕಪ್ಪ ೩ ನೇ ಸ್ಥಾನಕ್ಕೆ ಹೋದೆ, ಹೇಯ್ ಸುಮ್ನೆ ಕೂರೋ, ಯಾರೋ ನೀನು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರ ಮಾತುಗಳಿಗೆ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರ ಒಂದು ಗುಂಪು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ಬುಧವಾರ ನಡೆಯಿತು.
ಕಾಂಗ್ರೆಸ್ ಭವನ ಆವರಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಸಭೆ ಆಯೋಜಿಸಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಶ್ರೀಧರ್ ಗೌಡ ಅವರು ಮಾತನಾಡಿ, ನಮ್ಮಲ್ಲಿ ಎಷ್ಟೇ ನೋವುಗಳಿದ್ದರೂ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಬೇಕಿದೆ. ನಾನು ನನ್ನ ಕ್ಷೇತ್ರದಿಂದ ೩೦ ಸಾವಿರ ಮತಗಳ ಲೀಡ್ ಕೊಡಿಸುತ್ತೇನೆ ಎಂದು ಹೇಳಿದರು.
ಬಳಿಕ ಮೈಕ್ ಹಿಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು, ಕಾರ್ಯಕರ್ತರಿಗೆ ಒಂದಷ್ಟು ಬುದ್ಧಿಮಾತು ಹೇಳಿದರು. ಮಾತು ಮುಂದುರಿಸಿದ ಅವರು, ೩೦ ಸಾವಿರ ಲೀಡ್ ಕೊಡ್ತೀನಿ ಅಂದೋನು ಯಾರಪ್ಪಾ, ಎಲ್ಲಿದ್ದೀಯಪ್ಪ ಎಂದು ಶ್ರಿಧರ್ಗೌಡ ಕಡೆಗೆ ತಿರುಗಿ, ಅಷ್ಟು ಲೀಡ್ ಕೊಡೋ ನೀನು ಕಳೆದ ಚುನಾವಣೆಯಲ್ಲಿ ಏಕೆ ಮುರನೇ ಸ್ಥಾನಕ್ಕೆ ಹೋದೆ ಎಂದರು. ಈ ಮಾತಿನಿಂದ ಸಿಟ್ಟಿಗೆದ್ದ ಶ್ರಿಧರ್ಗೌಡ ಕಾರ್ಯಕರ್ತರು ಸಚಿವರ ಮೇಲೆ ಮುಗಿ ಬಿದ್ದರು. ರಾಜಣ್ಣ ಅವರ ಭಾಷಣಕ್ಕೆ ಅಡ್ಡಿಪಡಿಸಿ ಆಕ್ರೋಶದ ಮಾತುಗಳನ್ನಾಡಿದರು.
ಈ ವೇಳೆ ಗರಂ ಆದ ಸಚಿವ ಕೆ.ಎನ್.ರಾಜಣ್ಣ ಅವರು, ನೀವೆಲ್ಲ ಶ್ರೇಯಸ್ ಪಟೇಲ್ನನ್ನು ಗೆಲ್ಲಿಸಲು ಬಂದಿದ್ದೀರಾ ಅಥವಾ ಸೋಲಿಸಲು ಮುಂದಾಗಿದ್ದೀರಾ, ನಿಮ್ಮ ನಡವಳಿಕೆ ಶ್ರೀಧರ್ ಅವರ ರಾಜಕೀಯ ಭವಿಷ್ಯಕ್ಕೆ ಮಾರಕವಾಗಲಿದೆ. ಹೇಯ್ ಶ್ರೀಧರ, ನೀನೇನು ಗಲಾಟೆ ಮಾಡಲು ಇವರನ್ನೆಲ್ಲ ಕರೆದುಕೊಂಡು ಬಂದಿದ್ದೀಯಾ, ಇಂತಹ ಬಾಡಿಗೆ ಗಿರಾಕಿಗಳನ್ನು ನಾನು ಬಹಳ ನೋಡಿದ್ದೇನೆ ಎಂದರು. ಈ ಮಾತಿನಿಂದ ಮತ್ತಷ್ಟು ಆಕ್ರೋಶಗೊಂಡ ಕಾರ್ಯಕರ್ತರು ಯಾರಿಗೆ ಎಷ್ಟು ಬಾಡಿಗೆ ಕೊಟ್ಟಿದ್ದೀರಿ, ಏನು ನಿಮ್ಮ ಮಾತಿನ ಅರ್ಥ ಎಂದು ಕೂಗಾಡಿದರು. ಈ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಆಕ್ರೋಶಗೊಂಡಿದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಕೈ ಮುಖಂಡರು ಹರಸಾಹಸ ಪಡುವಂತಾಯಿತು. ನಡುವೆ ಮಾತು ಆರಂಭಿಸಿದ ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಅವರು ತಮ್ಮ ವಿಶೇಷ ಮಾತಿನ ಶೈಲಿಯಲ್ಲಿ ಎಲ್ಲರನ್ನೂ ಸಮಾಧಾನಪಡಿಸಿ ಕೆಲವೊಂದು ತಿಳಿವಳಿಕೆ ಮಾತುಗಳನ್ನಾಡಿದರು. ರಾಜಣ್ಣ ಅವರ ಮಾತಿನ ದಾಟಿಯೇ ಹಾಗೆ. ಅವರನ್ನು ಪೂರ್ತಿ ಮಾತನಾಡಲು ಬಿಡಬೇಕಿತ್ತು. ಅವರು ಆ ರೀತಿ ಮಾತನಾಡುವ ಹಿಂದೆ ಒಳ್ಳೆಯ ಉದ್ದೇಶವೇ ಇರುತ್ತದೆ. ಸಮಾಧಾನವಾಗಿ ಕೇಳಬೇಕಿತ್ತು ಎಂದರು.