ಪ್ರತಿನಿಧಿ ವರದಿ ಚನ್ನರಾಯಪಟ್ಟಣ
ಸನಾತನ ಹಿಂದೂ ಧರ್ಮ ಉದ್ದಾರವಾದರೆ ಇಡೀ ಜಗತ್ತೇ ಉದ್ಧಾರವಾದಂತೆ ಎಂದು ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಬ್ರಾಹ್ಮಣ ಸಂಘದಲ್ಲಿ ನಡೆದ ವಿಜಯ ಯಾತ್ರೆ ಮತ್ತು ಪುರ ಪ್ರವೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಶ್ರೀ ಆದಿ ಶಂಕರಾಚಾರ್ಯರು ಸುಮಾರು 1200 ವರ್ಷಗಳ ಹಿಂದೆಯೇ ಭಾರತ ಭೂಮಿಯಲ್ಲಿ ಅವತರಿಸಿ ಸನಾತನ ಹಿಂದೂ ಧರ್ಮವನ್ನು ಈ ಲೋಕಕ್ಕೆ ಪರಮಾನುಗ್ರಹವನ್ನು ಮಾಡಿದ್ದಾರೆ. ಅವರ ಅವತಾರದಿಂದಲೇ ನಾವೆಲ್ಲರೂ ಇಂದು ಪವಿತ್ರವಾದ ಸನಾತನ ಹಿಂದೂ ಧರ್ಮದ ಆಚರಣೆಯನ್ನು ಮಾಡಲು ಸಾಧ್ಯವಾಗಿದೆ. ಜಗತ್ತಿನಲ್ಲಿ ವಿತಂಡವಾದಿಗಳನ್ನೂ ರಕ್ಷಿಸುವ ಯಾವುದಾದರೂ ಒಂದು ಧರ್ಮವಿದ್ದರೆ ಅದು ಸನಾತನ ಹಿಂದೂ ಧರ್ಮವಾಗಿದ್ದು, ಆರಾಧನೆ ಮತ್ತು ಪರೋಪಕಾರಗಳನ್ನು ಅವರವರ ಶಕ್ತ್ಯಾನುಸಾರ ಮಾಡಬೇಕು, ಇದು ಸನಾತನ ಹಿಂದೂ ಧರ್ಮದ ವೈಶಿಷ್ಟ್ಯ, ಭರ್ತೃಹರಿಯವರ ಮಾತಿನಂತೆ ಜಗತ್ತಿನಲ್ಲಿ ಯಾವುದೂ ದೊಡ್ಡದಲ್ಲ ಯಾವುದು ಚಿಕ್ಕದಲ್ಲ ಅವರವರ ಸಾಮರ್ಥ್ಯದ ಅನುಸಾರ ಎಲ್ಲರೂ ಸಮಾನರು ಎಂದರು.
ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಜೋಯಿಸ್, ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗರಾಜ್, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಜಿ ಆರ್ ಮೋಹನ್, ಪುರಸಭಾ ಸದಸ್ಯೆ ಬನಶಂಕರಿ ರಘು ಇತರರು ಉಪಸ್ಥಿತರಿದ್ದರು.
Leave a comment