ಸಚಿವ ಕೆ.ಎನ್.ರಾಜಣ್ಣ ಎಚ್ಚರಿಕೆ | ಹಾನಸದಲ್ಲಿ ಸಿಎಂ ಕಾರ್ಯಕ್ರಮದ ಪೂರ್ವಭಾವಿ ಸಭೆ
ಹಾಸನ: ಬಹಿರಂಗ ಸಭೆಗಳಲ್ಲಿ ಪರಸ್ಪರ ಕಿತ್ತಾಡುವ ಮನೋಭಾವ ಸಹಿಸುವುದಿಲ್ಲ. ಇನ್ನಾದರೂ ಇವೆಲ್ಲವೂ ನಿಲ್ಲಬೇಕು. ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾ.೩೦ ರಂದು ಆಗಮಿಸುತ್ತಿರುವ ಹಿನ್ನೆಲೆ ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಾಸನದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವ ಎಲ್ಲ ಲಕ್ಷಣಗಳಿವೆ. ಜಿಲ್ಲೆ ಕಂಡ ಮಹಾನ್ ಚೇತನಗಳಾದ ಶ್ರೀಕಂಠಯ್ಯ ಮತ್ತು ಜಿ.ಪುಟ್ಟಸ್ವಾಮಿಗೌಡರ ಕುಟುಂಬದ ಕುಡಿಯಾಗಿರುವ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಬೇಕಿರುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಡುವೆ ಏನೇ ಗೊಂದಲಗಳಿದ್ದರೂ ಬದಿಗೊತ್ತಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಪರಸ್ಪರ ಕಚ್ಚಾಡಿಕೊಂಡು ಪಕ್ಷದ ಹಿತಕ್ಕೆ ಧಕ್ಕೆ ತರುವ ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.
ನಾವುಗಳು ಮಾಡುವ ತಪ್ಪುಗಳಿಂದ ಶ್ರೇಯಸ್ ಪಟೇಲ್ ಅವರಿಗೆ ತೊಂದರೆ ಆಗಬಹುದು. ಕಳೆದ ಚುನಾವಣೆಗಳಲ್ಲಿ ಕೈ ತಪ್ಪಿದ ಮತಗಳನ್ನು ಈ ಬಾರಿ ಪಡೆಯಲು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕಿದೆ. ಮುಂಬರುವ ಚುನಾವಣೆಗಳಲ್ಲಿ ಕಾರ್ಯಕರ್ತರು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಈ ಚುನಾವಣೆಯಲ್ಲಿ ವೈಶಮ್ಯ, ಮನಸ್ತಾಪ ಮರೆತು ಒಗ್ಗೂಡಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಒಮ್ಮೆ ಬಂದು ಹೋಗಿದ್ದರೂ ಶ್ರೇಯಸ್ ಪಟೇಲ್ ಅವರು ಗೆಲ್ಲುತ್ತಿದ್ದರು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ. ಆ ಸಹಾನುಭೂತಿ ಈ ಬಾರಿ ಮತಗಳಾಗಿ ಪರಿವರ್ತನೆ ಆಗಬೇಕು. ಜಿಲ್ಲಾ ಮಟ್ಟದ ಮುಖಂಡರು ಮಾಡುವ ತಪ್ಪುಗಳು ನಮ್ಮ ಅಭ್ಯರ್ಥಿಯ ಹಿನ್ನಡೆಗೆ ಕಾರಣ ಆಗಬಾರದು. ರಾಜ್ಯವೇ ತಿರುಗಿ ನೋಡುವ ಫಲಿತಾಂಶ ಈ ಕ್ಷೇತ್ರದಿಂದ ಹೊರ ಬರಬೇಕು ಎಂದರು.
ಗೃಹಮಂಡಳಿ ಅಧ್ಯಕ್ಷರಾದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಹಾಸನ ಲೋಕಸಭಾ ಕ್ಷೇತ್ರದ ಪ್ರತಿ ತಾಲೂಕುಗಳಲ್ಲೂ ಗುಪ್ತ ಸಭೆಗಳನ್ನು ನಡೆಸಿ ಭಿನ್ನಾಭಿಪ್ರಾಯ ಶಮನ ಮಾಡುವ ಕೆಲಸ ಮಾಡಬೇಕು. ಕಾರ್ಯಕರ್ತರಿಗೆ ಶಿಸ್ತಿನ ಪಾಠ ಹೇಳಿ ಗಟ್ಟಿಗೊಳಿಸಬೇಕು. ಪಕ್ಷದೊಳಗಿನ ಗುಂಪುಗಾರಿಕೆ ಇನ್ನಿಲ್ಲವಾಗಿಸಿ ಒಗ್ಗೂಡಿ ಕೆಲಸ ಮಾಡಿದರೆ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಶ್ರೇಯಸ್ ಪಟೇಲ್ ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ ಎಂದರು.
ದಯಮಾಡಿ ನನ್ನನ್ನು ಕೈ ಬಿಡಬೇಡಿ: ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆ ಇರಲಿಲ್ಲ. ಎಲ್ಲರ ಒತ್ತಾಸೆಯಂತೆ ಕಣಕ್ಕಿಳಿದಿದ್ದೇನೆ. ನೀವೇ ಚುನಾವಣೆಗೆ ನಿಲ್ಲಿಸಿದ್ದೀರಿ. ದಯಮಾಡಿ ನನ್ನನ್ನು ಕೈ ಬಿಡಬೇಡಿ. ನಿಮ್ಮ ಸಹಕಾರ ಲಭಿಸಿದರೆ ರಾಜ್ಯವೇ ತಿರುಗಿ ನೋಡುವ ಫಲಿತಾಂಶ ಕೊಡಬಹುದಾಗಿದೆ. ಈ ಬಾರಿ ನಮಗೆ ಹಿನ್ನಡೆಯಾದರೆ ರಾಜ್ಯ ನಾಯಕರ ಮುಂದೆ ಬೆಲೆ ಕಳೆದುಕೊಳ್ಳಬೇಕಾಗುತ್ತದೆ. ಬೂತ್ ಮಟ್ಟದ ಕಾರ್ಯಕರ್ತರನ್ನು ಸರಿಯಾದ ರಇತಿಯಲ್ಲಿ ಬಳಸಿಕೊಂಡು ಅವರನ್ನು ಬೆಳೆಸುವ ಕೆಲಸ ಮಾಡೋಣ ಎಂದು ಮನವಿ ಮಾಡಿದರು.
ಹಾಸನ, ಮಂಡ್ಯದ ಜನ ಒರಟರು: ಲೋಕಸಭಾ ಚುನಾವಣೆ ಉಸ್ತುವಾರಿಯಾಗಿರುವ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೆಖರ್ ಮಾತನಾಡಿ, ಹಾಸನ, ಮಂಡ್ಯದ ಜನರು ಒರಟರು. ಆದರೆ ಹೃದಯವಂತರು. ಕೋಪದಲ್ಲಿ ಮಾತನಾಡಿ ಬಳಿಕ ಮರುಗುತ್ತಾರೆ. ಆದರೆ ಬುದ್ಧಿ ಉಪಯೋಗಿಸುವವನು ರಾಜಕಾರಣದಲ್ಲಿ ಬೆಳೆಯುತ್ತಾನೆ. ಬಾಯಿ ಮಾಡುವವನು ಇದ್ದಲ್ಲಿಯೇ ಉಳಿಯುತ್ತಾನೆ ಎಂಬುದನ್ನು ಅರಿತು ನಡೆದರೆ ದೇಶವೇ ತಿರುಗಿ ನೋಡುವಂತೆ ಹಾಸನದಲ್ಲಿ ಕಾಂಗ್ರೆಸ್ ಹೆಜ್ಜೆ ಗುರುತುಗಳನ್ನು ಮುಡಿಸಲು ಸಾಧ್ಯವಿದೆ ಎಂದರು.
ಹಾಸನವನ್ನು ಜೆಡಿಎಸ್ನವರಿಗೆ ಜೀತಕ್ಕೆ ಇಟ್ಟಿಲ್ಲ: ಜಿಲ್ಲೆಯಲ್ಲಿ ಕೆ.ಎಂ.ಶಿವಲಿಂಗೇಗೌಡರು ನಮ್ಮ ಪಕ್ಷದ ಮಾನ ಉಳಿಸಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಾಗಬೇಕು. ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಗೊಂದಲಗಳಿದ್ದರೂ ಎಲ್ಲರೂ ಸಹ ಶ್ರೇಯಸ್ ಪಟೇಲ್ ಅವರನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ಗೆಲ್ಲಿಸುತ್ತೇವೆ ಎಂಬ ಛಲ ವ್ಯಕ್ತಪಡಿಸಿದ್ದಾರೆ. ಶ್ರೇಯಸ್ ಜನಮನ ಗೆದ್ದ ನಾಯಕ. ಕಳೆದ ಚುನಾವಣೆಯಲ್ಲಿಯೇ ಆತನ ತಾಕತ್ತು ಏನೆಂಬುದನ್ನು ತೋರಿಸಿದ್ದಾರೆ. ಜೆಡಿಎಸ್ನವರಿಗೆ ಈ ಜಿಲ್ಲೆಯನ್ನು ಯಾರೂ ಜೀತಕ್ಕೆ ಇಟ್ಟಿಲ್ಲ ಎನ್ನುವುದನ್ನು ಈ ಬಾರಿ ಮತದಾರರು ತೋರಿಸಿಕೊಡಬೇಕು. ಸ್ವಾಭಿಮಾನದ ಸಂಕೇತವಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಬೇಕು ಎಂದು ಜಿ.ಸಿ.ಚಂದ್ರಶೇಖರ್ ಕರೆ ನೀಡಿದರು.
ಸಭೆಯಲ್ಲಿ ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕೆಪಿಸಿಸಿ ಸದಸ್ಯ ಸಲೀಂ ಕೊಲ್ಲಹಲ್ಳಿ, ಮುಖಂಡರಾದ ವಿಜಯ್ ಕುಮಾರ್, ಬಾಗೂರು ಮಂಜೇಗೌಡ, ಬನವಾಸೆ ರಂಗಸ್ವಾಮಿ, ಎಚ್.ಕೆ.ಮಹೇಶ್, ಡಿ.ಸಿ.ಸಣ್ಣಸ್ವಾಮಿ, ದೇವರಾಜೇಗೌಡ, ಶ್ರೀಧರಗೌಡ ಇತರರು ಭಾಗವಹಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇತರ ನಾಯಕರು ಮಾ.೩೦ ರಂದು ಶನಿವಾರ ಜಿಲ್ಲೆಗೆ ಆಗಮಿಸಲಿದ್ದು ಅರಕಲಗೂಡು, ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರದ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಎಲ್ಲ ತಾಲೂಕಿನವರನ್ನು ಒಂದೆಡೆ ಸೇರಿಸಿ ಸಭೆ ಮಾಡಬೇಕೇ ಅಥವಾ ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜಿಸಬೇಕೆ ಎಂಬ ಬಗ್ಗೆ ತೀರ್ಮಾನಿಸುತ್ತೇವೆ.
ಕೆ.ಎನ್.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ
ಫೊಟೋ:
ಹಾಸನದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಕಾರ್ಯರ್ತರ ಸಭೆಯಲ್ಲಿ ಲೋಕಸಭೆ ಚುನಾವನೆ ಪ್ರಚಾರದ ಪೋಸ್ಟರ್ಗಳನ್ನು ಪಕ್ಷದ ಮುಖಂಡರು ಬಿಡುಗಡೆಗೊಳಿಸಿದರು.