ಬೆಂಗಳೂರು : ಸಚಿವ ಕೆಹೆಚ್ ಮುನಿಯಪ್ಪ ಅಳಿಯನಿಗೆ ಟಿಕೆಟ್ ವಿರೋಧಿಸಿ ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು, ಎಂಎಲ್ಸಿಗಳ ರಾಜೀನಾಮೆಯ ಹೈಡ್ರಾಮಾವೇ ನಡೆದುಗೋಗಿದೆ. ಟಿಕೆಟ್ ಘೋಷಣೆಗೂ ಮುನ್ನವೇ ಕೋಲಾರ ಕಾಂಗ್ರೆಸ್ನಲ್ಲಿ ಬಣ ಬಡಿದಾಟ ಸ್ಫೋಟಗೊಂಡಿದೆ. ಕೋಲಾರ ಕಾಂಗ್ರೆಸ್ನಲ್ಲಿನ ಬಿರುಕು ಮತ್ತೆ ಜಗಜಾಹೀರಾಗಿದ್ದು, ಸದ್ಯ ಕೋಲಾರ ಟಿಕೆಟ್ ಘೋಷಣೆಯನ್ನು ಹೈಕಮಾಂಡ್ ತಡೆ ಹಿಡಿದಿದೆ. ಇದೀಗ ಅಸಮಾಧಾನ ಶಮನಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯರೇ ಮುಂದಾಗಿದ್ದಾರೆ.
ಸಚಿವ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವಿನ ತಿಕ್ಕಾಟವೇ ಟಿಕೆಟ್ ಕಲಹಕ್ಕೆ ಕಾರಣವಾಗಿದೆ. ಸಚಿವ ಮುನಿಯಪ್ಪ, ಕೋಲಾರದಲ್ಲಿ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಎಂದು ರಮೇಶ್ ಕುಮಾರ ಬಣ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಶಾಸಕರ ಮುನಿಸು ಶಮನಕ್ಕೆ ಸಿಎಂ ಸಿದ್ದರಾಮಯ್ಯ ಸಂಜೆ 4 ಗಂಟೆಯ ಹೊತ್ತಿಗೆ ಸಭೆ ಕರೆದಿದ್ದಾರೆ. ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಕೋಲಾರ ಶಾಸಕರು ಭಾಗಿಯಾಗುತ್ತಿದ್ದಾರೆ.