ಮೈಸೂರು : ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನ ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದಾರೆ. ಶತಾಯಗತಾಯ 2 ಕ್ಷೇತ್ರಗಳನ್ನ ಕೈ ತೆಕ್ಕೆಗೆ ತೆಗೆದುಕೊಳ್ಳಲು ಸಾಕಷ್ಟು ತಂತ್ರ ರೂಪಿಸಿದ್ದಾರೆ. ಹೀಗಾಗಿ ರೆಸಾರ್ಟ್ನಲ್ಲಿ ಕೂತು ಅನೇಕರಿಗೆ ಗಾಳ ಹಾಕಿ ತನ್ನ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಬೆಂಬಲ ಪಡೆಯಲು ಸಿಎಂ ಮುಂದಾಗಿದ್ದು ರಣತಂತ್ರ ಹೆಣೆಯುತ್ತಿದ್ದಾರೆ. ಆದರೆ ಬಿಜೆಪಿಯನ್ನೂ ಬಿಡಲಾಗದೆ, ಕಾಂಗ್ರೆಸ್ಗೂ ಹೋಗಲಾಗದೆ ಶ್ರೀನಿವಾಸ್ ಪ್ರಸಾದ್ ಧರ್ಮ ಸಂಕಟಕ್ಕೆ ಸಿಲುಕಿದ್ದಾರೆ.
ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದು, ಯಾವ ಪಕ್ಷದ ಪರವು ಪ್ರಚಾರ ಮಾಡಲ್ಲ ಎಂದಿದ್ದಾರೆ. ಆದ್ರೆ, ಶತಾಯಗತಾಯ ಪ್ರಸಾದ್ ಬೆಂಬಲ ಪಡೆಯಲು ಸಿಎಂ ಸಿದ್ದರಾಮಯ್ಯ ತಂತ್ರ ಹೆಣೆಯುತ್ತಿದ್ದಾರೆ. ಇತ್ತ ಬಿಜೆಪಿಯನ್ನು ಬಿಡಲಾಗದೆ, ಅತ್ತ ಕಾಂಗ್ರೆಸ್ಗು ಹೋಗಲಾಗದೆ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕುಟುಂಬ ಹಾಗೂ ಬೆಂಬಲಿಗರು ಧರ್ಮ ಸಂಕಟದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಡಾ.ಮೋಹನ್ ಬಿಜೆಪಿಯಿಂದ ಚಾಮರಾಜನಗರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಮತ್ತೊಂದೆಡೆ ಮತ್ತೊಬ್ಬ ಅಳಿಯ, ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್ ಅವರು ಬಿಜೆಪಿಯಿಂದ ಶಾಸಕರಾಗಿದ್ದರು. ಸದ್ಯ ಓರ್ವ ಅಳಿಯನಿಗೆ ಟಿಕೆಟ್ ಕೈತಪ್ಪಿದ ಬೇಸರದಲ್ಲಿ ಅನ್ಯಾಯ ಆಯ್ತು ಅಂತ ಕಾಂಗ್ರೆಸ್ ಬೆಂಬಲಿಸಿದರೆ ಮತ್ತೊಬ್ಬ ಅಳಿಯನ ಭವಿಷ್ಯ ಏನು ಅನ್ನೋ ಚಿಂತೆ ಕಾಡುತ್ತಿದೆ. ಇಲ್ಲ ಒಂದೇ ಕುಟುಂಬ ಎರಡು ಪಕ್ಷದಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ.