ರಾಮನಗರ : ನನ್ನನ್ನು ಸೋಲಿಸಬೇಕು ಎಂದು ನಿರ್ದೇಶಕ, ನಿರ್ಮಾಪಕ, ಚಿತ್ರಕತೆ ಬರೆಯುವವರು, ನಟ, ಬಂಡವಾಳ ಹೂಡಿಕೆ ಮಾಡುವವರು ಎಲ್ಲ ಒಂದಾಗಿದ್ದಾರಂತೆ. ಸಿನಿಮಾ ರೀಲ್ ಬಿಟ್ಟಂತೆ ಇಲ್ಲಿ ಬಿಟ್ಟರೇ ಜನ ಒಪ್ಪುವುದಿಲ್ಲ” ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ತಮ್ಮ ರಾಜಕೀಯ ಎದುರಾಳಿ ಕುಮಾರಸ್ವಾಮಿ, ಮುನಿರತ್ನ ಹಾಗೂ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರು ಒಂದಾಗಿದ್ದಾರಂತೆ ಅದಕ್ಕೆ ನನ್ನನ್ನು ಸೋಲಿಸುತ್ತಾರಂತೆ? ಏತಕ್ಕೆ ನನ್ನ ಸೋಲಿಸುತ್ತೀರ? ಬಡವರ ಪರವಾಗಿ, ರೈತರ ಪರವಾಗಿ, ಕನ್ನಡಿಗರ ಪರವಾಗಿ ದನಿ ಎತ್ತಿದಕ್ಕಾ? ನಿಮ್ಮ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದಕ್ಕೆ ನನ್ನನ್ನು ಸೋಲಿಸಲು ಹೊರಟ್ಟಿದ್ದೀರಾ? ಅವರಿಗೆ ನಿಜ ಜೀವನಕ್ಕು, ಸಿನಿಮಾಗೂ ವ್ಯತ್ಯಾಸ ಗೊತ್ತಿಲ್ಲ. ನಿಜ ಜೀವನದಲ್ಲಿ ಸೋಲಿಸಬೇಕೆ ಹೊರತು, ಸಿನಿಮಾದಲ್ಲಿ ಅಲ್ಲ. ನೀವು ಬಿಟ್ಟಿರುವ ಎಲ್ಲಾ ರೀಲುಗಳು ಡಬ್ಬ ಸೇರಿಕೊಂಡಿವೆ ಎಂದರು.
ಯಾರೋ ಹೇಳುತ್ತಿದ್ದರು ಡಿ.ಕೆ. ಶಿವಕುಮಾರ್ ಕಾಲಿಗೆ ಬೀಳಲು ಬಂದಿದ್ದರು ಎಂದು. ಇದೇ ಡಿ.ಕೆ.ಶಿವಕುಮಾರ್ ಅವರ ಕಾಲಿಗೆ ಬಿದ್ದು ಶಾಸಕರಾಗಲು, ಬಿಕ್ಷೆ ಬೇಡಿದವರು, ಆಸ್ತಿ ಉಳಿಸಿಕೊಂಡವರು ಯಾರು ಎಂದು ಈ ಕ್ಷೇತ್ರದ ಜನ ನೋಡಿದ್ದಾರೆ ಎಂದರು.
ರಾಜಕೀಯ ಪ್ರವೇಶ ಮಾಡುವ ಹೊತ್ತಿನಲ್ಲಿ ಶಿವಕುಮಾರ್ ಅವರ ಮನೆ ಬಾಗಿಲನ್ನು ಬೆಳಗ್ಗೆಯಿಂದ ಸಂಜೆಯ ತನಕ ಕಾಯುತ್ತಿದ್ದರು. ಈ ವಿಚಾರ ಎಲ್ಲರಿಗೂ, ಮಾಧ್ಯಮದವರಿಗೂ ಗೊತ್ತು. ಆದರೂ ಅವರ ವಿಚಾರವನ್ನು ಬೆಳಗ್ಗೆಯಿಂದ ಸಂಜೆಯ ತನಕ ತೋರಿಸುತ್ತಾರೆ ಎಂದರು.
ಮುಂದಿನ ಮೂವತ್ತು ದಿನಗಳ ಕಾಲ ಯಾರು, ಯಾರು ಏನು ಮಾತನಾಡುತ್ತಾರೆ ಎಂಬುದನ್ನು ನಾವು, ನೀವು ಕೇಳಬೇಕಾಗಿದೆ. ಅದಕ್ಕೆ ಉತ್ತರ ಕೊಡುವ ಕಾಲ ಮುಂದಿದೆ. ಕಣ್ಣೀರು ಹಾಕುವವರಿಗೆ ಈ ಚುನಾವಣೆಗೆ ಒಂದು ಕರ್ಮಭೂಮಿ, ಇನ್ನೊಂದು ಚುನಾವಣೆಗೆ ಮತ್ತೊಂದು ಕರ್ಮಭೂಮಿ. ಯಾವ, ಯಾವ ಕರ್ಮಭೂಮಿಯಲ್ಲಿ ಏನೇನು ಸುಳ್ಳು ಹೇಳಿದ್ದಾರೋ ಗೊತ್ತಿಲ್ಲ ಎಂದರು.
ಇಂದು ಚುನಾವಣೆ ಸಮಯದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಮೇಕೆದಾಟು ಯೋಜನೆ ಆಗ್ರಹಿಸಿ ಮಾಡಿದ ಹೋರಾಟದ ವೇಳೆ ಒಂದೇ ಒಂದು ದನಿ ಎತ್ತಿದ್ದರೆ, ಯೋಜನೆಗೆ ಅನುಮತಿ ನೀಡಿ ಎಂದು ಪ್ರಧಾನಿಗಳ ಬಳಿ ಮನವಿ ಸಲ್ಲಿಸಿದ್ದರೆ ಅವರ ಬದ್ಧತೆಯನ್ನು ಒಪ್ಪುತ್ತಿದ್ದೆ. ಇಷ್ಟು ದಿನ ಮೌನವಾಗಿದ್ದವರು ಈಗ ಮೇಕೆದಾಟು ಜಪ ಮಾಡುತ್ತಿದ್ದಾರೆ. ಇವರ ನಾಟಕ ಸರಿಯೇ ಎಂದು ರೈತರು, ಬೆಂಗಳೂರಿಗರು ತೀರ್ಮಾನ ಮಾಡಬೇಕು ಎಂದರು.
ಕನ್ನಡಿಗರ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ನೀಡಿ ಲೂಟಿ ಮಾಡಲಾಗುತ್ತಿದೆ ಎಂದು ದನಿ ಎತ್ತಿದ ಕಾರಣಕ್ಕೆ ಬಿಜೆಪಿಯವರು ದೇಶದ್ರೋಹಿ ಪಟ್ಟ ಕಟ್ಟಿದರು. ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ನೀರು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. 4.30 ಲಕ್ಷ ಕೋಟಿ ತೆರಿಗೆ ಹಣವನ್ನು ಕನ್ನಡಿಗರು ಕೇಂದ್ರಕ್ಕೆ ನೀಡಿದ್ದಾರೆ. ರಾಜ್ಯದ ಬಜೆಟ್ 3.71 ಲಕ್ಷ ಕೋಟಿ, ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಿಂದ ಕೇಂದ್ರಕ್ಕೆ 24 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ನೀಡಿದ್ದೇವೆ. ಆದರೆ ಅವರು ನಮಗೆ ಮರಳಿ ಕೊಟ್ಟಿರುವುದು ಕೇವಲ 2.94 ಲಕ್ಷ ಕೋಟಿ ಮಾತ್ರ ಎಂದರು.
ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಕಳೆದ 10 ವರ್ಷಗಳಲ್ಲಿ ಕರ್ನಾಟಕ, ಬೆಂಗಳೂರು ಅಭಿವೃದ್ದಿಗೆ ಬಿಜೆಪಿ ಸರ್ಕಾರದ ಕೊಡುಗೆ ಏನು? ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ನಿರುದ್ಯೋಗ ಸಮಸ್ಯೆ, ನೀರಿನ ಸಮಸ್ಯೆ ಪರಿಹಾರಕ್ಕೆ ಬಿಜೆಪಿಯವರ ಕೊಡುಗೆ ಏನು ಎಂದು ಕೇಳಿದರೆ, ನನಗೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ ಎಂದರು.
ಕನ್ನಡಿಗರ ದನಿಯಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಈ ಹೋರಾಟ ನಿರಂತರ, ಯಾರ ಬೆದರಿಕೆಗೂ ಜಗ್ಗುವ ವ್ಯಕ್ತಿ ನಾನಲ್ಲ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಉದ್ಯೋಗ ಖಾತ್ರಿ ಸೇರಿದಂತೆ ಅನೇಕ ಯೋಜನೆಗಳು ಮನೆ, ಮನೆಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿಗಳಿಂದ ರಾಮನಗರಕ್ಕೆ ರೂ.400 ಕೋಟಿಗೂ ಹೆಚ್ಚು ಅನುದಾನ ತರಲಾಗಿದೆ ಎಂದರು.
ಕರೊನಾ ಸಂದರ್ಭದಲ್ಲಿ ಎಲ್ಲಾ ಮನೆ ಸೇರಿದ್ದರು. ಆದರೆ ನಾನು ನಿಮ್ಮ ಜೊತೆ ನಿಂತು ನಿಮ್ಮ ಕಷ್ಟಗಳಿಗೆ ಹೆಗಲಾಗಿ ಕೆಲಸ ಮಾಡಿದ್ದೇ. ಡಾಕ್ಟರ್ ಗಳು ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಶವಸಂಸ್ಕಾರ ಮಾಡಲು ಜನ ಇರಲಿಲ್ಲ. ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಾಗ ಬಿಜೆಪಿಯವರು ಒಬ್ಬರೂ ನೆರವಿಗೆ ಬರಲಿಲ್ಲ. ಅಂದು ನಿಮ್ಮ ನೆರವಿಗೆ ಬಂದಿದ್ದು ಡಿ.ಕೆ.ಸುರೇಶ್ ಮಾತ್ರ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಕೆ. ಸುರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು