– ಲೋಕಸಭಾ ಚುನಾವಣೆಗೆ ಬಿರುಸಿನ ಪ್ರಚಾರ
– ಬಿಜೆಪಿ ಅಭ್ಯರ್ಥಿಗೆ ವಕೀಲರಿಂದ ಅದ್ದೂರಿ ಸ್ವಾಗತ
ಪ್ರತಿನಿಧಿ ವರದಿ ಮೈಸೂರು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಗುರುವಾರ ಮೈಸೂರಿನ ವಕೀಲರ ಸಂಘಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಮೈಸೂರು ವಕೀಲರ ಸಂಘಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ವಕೀಲರ ಸಂಘದಿಂದ ಅದ್ದೂರಿ ಸ್ವಾಗತ ನೀಡಲಾಯಿತು. ನ್ಯಾಯಾಲಯದ ಆವರಣಕ್ಕೆ ಯದುವೀರ್ ಅವರು ಆಗಮಿಸುತ್ತಿದ್ದಂತೆ ನಾದಸ್ವರದ ಹಿಮ್ಮೇಳದೊಂದಿಗೆ ಮೈಸೂರು ಮಹಾರಾಜ ಯದುವೀರ್ಗೆ ಜಯವಾಗಲಿ ಎಂಬ ಘೋಷಣೆ ಕೂಗುವ ಮೂಲಕ ಮೈಸೂರಿನ ವಕೀಲರ ಸಂಘಕ್ಕೆ ಬರಮಾಡಿಕೊಳ್ಳಲಾಯಿತು.
ಬಳಿಕ ವಕೀಲರ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಯದುವೀರ್ ಒಡೆಯರ್, ನಮ್ಮ ಕುಟುಂಬಕ್ಕೂ ವಕೀಲರಿಗೂ ಅವಿನಾಭಾವ ಸಂಬಂಧವಿದೆ. ಅರಮನೆ ಪರಂಪರೆ ಉಳಿಸಿಕೊಳ್ಳಲು ವಕೀಲರ ಶ್ರಮಹೆಚ್ಚಿದ್ದು, ಅವರಿಗೆ ಸದಾ ಖುಣಿಯಾಗಿದ್ದೇನೆ. ಮೈಸೂರಿನ ಪರಂಪರೆಯನ್ನು ನ್ಯಾಯಾಂಗ ವ್ಯವಸ್ಥೆಯನ್ನು ಉಳಿಸುತ್ತಿರುವ ನಿಮಗೂ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಬಗೆಹರಿಸಲು ನಾನು ನಿಮ್ಮೊಟ್ಟಿಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ತಮ್ಮ ಸಂಸದರ ಅನುದಾನದಿಂದ ಹಣ ನೀಡಿದ್ದರಿಂದ ಸಂಘದ ಕಟ್ಟಡ ನಿರ್ಮಾಣವಾಗಿದೆ. ಅವರು ಜನರಿಗೆ ಮಾತುಕೊಟ್ಟರೇ ಅದನ್ನು ಉಳಿಸಿಕೊಳ್ಳಲಿದ್ದು, ಎಂದಿಗೂ ತಪ್ಪುವುದಿಲ್ಲ. ಅವರಂತೆ ಯದುವೀರ್ ಅವರು ಕೂಡ ಸಾಮಾನ್ಯರಂತೆ ಎಲ್ಲರೊಟ್ಟಿಗೆ ಬೆರೆಯುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಮೈಸೂರು ವಕೀಲರ ಸಂಘದಿಂದ ಯದುವೀರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮ ಮುಗಿದ ಬಳಿಕ ಹಲವು ವಕೀಲರು ಯದುವೀರ್ ಒಡೆಯರ್ ಅವರೊಂದಿಗೆ ಸೆಲ್ಫೀ ತೆಗೆಸಿಕೊಳ್ಳಲು ಮುಂದಾದರು. ಎಲ್ಲರಿಗೂ ಸಮಾಧಾನದಿಂದಲೇ ಸ್ಪಂದಿಸಿದ ಯದುವೀರ್ ಅವರು ಸೆಲ್ಫೀ ತೆಗೆಸಿಕೊಂಡರು. ಈ ಸಂದರ್ಭದಲ್ಲಿ ವಕೀಲರ ರಾಜ್ಯ ಸಂಘದ ಸದಸ್ಯ ಚಂದ್ರಮೌಳಿ ಇನ್ನಿತರರಿದ್ದರು.
================