ಐದು ವರ್ಷಗಳಲ್ಲಿ ಸುಮಾರು ಶೇ.47ರಷ್ಟು ವೃದ್ಧಿ * ಚುನಾವಣೆ ಹಿನ್ನೆಲೆ ಆಸ್ತಿ ಘೋಷಣೆ
ಪ್ರತಿನಿಧಿ ವರದಿ ರಾಮನಗರ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಆಸ್ತಿ ಮೌಲ್ಯ ಐದು ವರ್ಷಗಳಲ್ಲಿ ಸುಮಾರು ಶೇ.47ರಷ್ಟು ವೃದ್ಧಿಸಿದೆ. ಪ್ರಸ್ತುತ ಅವರು ಬರೊಬ್ಬರಿ 593,05,25,395 ರೂಪಾಯಿಗಳ ಒಡೆಯರಾಗಿದ್ದಾರೆ.
ಡಿ.ಕೆ.ಸುರೇಶ್ ಅವರ ಸ್ಥಿರಾಸ್ತಿಯ ಸದ್ಯದ ಮಾರುಕಟ್ಟೆ ಮೌಲ್ಯ 486,33,35,604 ರೂ. ಇದ್ದರೆ, ಚರಾಸ್ಥಿಯ ಮೌಲ್ಯ 106,71,89,791 ರೂ.ಇದೆ. ಕಳೆದ 5 ವರ್ಷಗಳಲ್ಲಿ ಶೇ.47ರಷ್ಟು ಹೆಚ್ಚಾಗಿದೆ. ಈ ಪೈಕಿ ಸ್ವಯಾರ್ಜಿತ ಆಸ್ತಿಯ ಮಾರುಕಟ್ಟೆಯ ಮೌಲ್ಯ 276,37,13,811 ರೂ. ಇದೆ. ಪಿತ್ರಾರ್ಜಿತವಾಗಿ ಬಂದ ಆಸ್ತಿಯ ಮೌಲ್ಯ 209,96,21,793 ರೂ. ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿಯು 254 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಸುರೇಶ್ ಅವರು 2014ರ ಚುನಾವಣೆಯಲ್ಲಿ 85.87 ಕೋಟಿ ರೂ. ಹಾಗೂ 2019ರಲ್ಲಿ 338 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಚರಾಸ್ತಿಯ ಮಾರುಕಟ್ಟೆಯ ಮೌಲ್ಯ 2024ರ ವೇಳೆಗೆ 106,71,89,791 ರು.ನಷ್ಟು ವೃದ್ಧಿಸಿದೆ.
ಷೇರುಗಳು ಮುಂತಾದವುಗಳಲ್ಲಿ ಸುರೇಶ್ ಅವರು 2,14,87,182 ರೂ. ಹೂಡಿಕೆ ಮಾಡಿದ್ದಾರೆ. ಡಿ.ಕೆ.ಸುರೇಶ್ ಅವರ ಬಳಿ ಸದ್ಯ 4,77,026 ರೂ. ನಗದು ಇದ್ದು, 2019ರಲ್ಲಿ ನಾಮಪತ್ರ ಸಲ್ಲಿಸಿದ ವೇಳೆ ಅವರ ಬಳಿ ನಗದು 22,35,707 ರೂಪಾಯಿ ಇತ್ತು.
1 ಕೆಜಿ 260 ಗ್ರಾಂ ಚಿನ್ನ , 4ಕೆಜಿ 860 ಗ್ರಾಂ ಬೆಳ್ಳಿ ಹೊಂದಿದ್ದಾರೆ. ಚಿನ್ನ ಮತ್ತು ಬೆಳ್ಳಿ ಆಭರಣಗಳ ತೂಕ ಹೆಚ್ಚಳವಾಗಿಲ್ಲ ಅದರ ಮಾರುಕಟ್ಟೆ ಮೌಲ್ಯ ಮಾತ್ರ ಹೆಚ್ಚಾಗಿದೆ. ಸದ್ಯ ಚಿನ್ನಾಭರಣದ ಮಾರುಕಟ್ಟೆ ಮೌಲ್ಯ 23,45,500 ರೂ. ಆಗಿದೆ. ಕಳೆದ 5 ವರ್ಷಗಳಲ್ಲಿ ಡಿ.ಕೆ.ಸುರೇಶ್ ಅವರ ವಾರ್ಷಿಕ ಆದಾಯ ಏರಿಳಿಕೆ ಕಂಡಿದೆ. 2019ರಲ್ಲಿ 11,21,17,630 ರೂ.ಗಳಿದ್ದರೆ, 2020ರಲ್ಲಿ 37,38,390 ರೂ., 2021ರಲ್ಲಿ 32,51,35,700 ರೂ., 2022ರಲ್ಲಿ 2,29,82,360 ರೂ.ಗಳಿಗೆ ಕುಸಿದಿದೆ. ಆದರೆ 2023ರಲ್ಲಿ ಅವರ ಆದಾಯ 12,30,04,200 ರೂ.ಗಳಿಗೆ ಏರಿಕೆ ಕಂಡಿದೆ.
ಕೋಟಿ ಸಾಲಗಾರ; ಅಣ್ಣ, ಅಣ್ಣನ ಮಕ್ಕಳಿಗೆ ಸಾಲ !
ಡಿ.ಕೆ.ಸುರೇಶ್ ಘೋಷಿಸಿಕೊಂಡಿರುವ ಆಸ್ತಿ ವಿವರದಂತೆ ಅವರು 1,50,06,26,994 ರೂ. ಸಾಲಗಾರರಾಗಿದ್ದು, 86,37,82,124 ರೂ. ಸಾಲ ನೀಡಿದ್ದಾರೆ. ಈ ಪೈಕಿ ಸಹೋದರ ಡಿ.ಕೆ.ಶಿವಕುಮಾರ್ಗೆ 30,08,29,025 ರೂ. , ಅಮ್ಮ ಗೌರವಮ್ಮ ಅವರಿಗೂ 4,75,00,00 ರೂ. ಸಾಲ ನೀಡಿದ್ದಾರೆ. ಸಹೋದರನ ಪುತ್ರಿ ಐಶ್ವರ್ಯ 7,94,42,717 ರೂ.ಗಳನ್ನು ಡಿ.ಕೆ.ಸುರೇಶ್ ಅವರಿಗೆ ಸಾಲದ ರೂಪದಲ್ಲಿ ಮರು ಪಾವತಿಸಬೇಕಿದೆ.
ಭೂಮಿ ಲೆಕ್ಕವೇ ಇಲ್ಲ!
ಬರೊಬ್ಬರಿ 32,75,50,472 ರೂ.ಗಳ ಮೌಲ್ಯದ ಕೃಷಿ ಭೂಮಿಯನ್ನು ಡಿ.ಕೆ.ಸುರೇಶ್ ಹೊಂದಿದ್ದಾರೆ. ಕೃಷಿಯೇತ್ತರ ಭೂಮಿ ಮೌಲ್ಯ 2,10,47,68,159 ರೂ.ಗಳಾಗಿದೆ. ಇವರ ವಾಣಿಜ್ಯ ಭೂಮಿ ಮತ್ತು ಕಟ್ಟಡಗಳ ಮೌಲ್ಯ 2,11,91,41,888 ರೂ.ಗಳಿದೆ.
ಕೃಷಿ ಭೂಮಿ:
ಗರಳಾಪುರದ ವಿವಿಧ ಸರ್ವೇ ಸಂಖ್ಯೆಗಳಲ್ಲಿ 17 ಎಕರೆ, ಮರಳೇಬೇಕುಪ್ಪೆ 2 ಎಕರೆ, ದೆಶುವಳ್ಳಿ ಗ್ರಾಮದಲ್ಲಿ 4 ಎಕರೆ, ಆಲಹಳ್ಳಿಯ ವಿವಿಧ ಸರ್ವೇ ಸಂಖ್ಯೆಗಳಲ್ಲಿ 2 ಎಕರೆ 54 ಗುಂಟೆ, ಕೋಡಿಹಳ್ಳಿಯ ವಿವಿಧ ಸರ್ವೇ ಸಂಖ್ಯೆಗಳಲಿ 6 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಇದಲ್ಲದೆ ಮಹೀಮನಹಳ್ಳಿ, ಸಾತನೂರು ಅರಳಾಲು, ಮಕಲಂದ, ಹರಪನಹಳ್ಳಿ ಗ್ರಾಮಗಳಲ್ಲಿಯೂ ಕೃಷಿ ಭೂಮಿಯನ್ನು ಹೊಂದಿದ್ದಾರೆ.
ಕೃಷಿ ಯೇತರ ಭೂಮಿ:
ಬೆಂಗಳೂರು ವಿಶ್ವೇಶ್ವರಯ್ಯ ಲೇ ಔಟ್, ಕನಕಪುರ ನಗರಗಳಲಿ ಒಟ್ಟು 4 ನಿವೇಶನ -ಕನಕಪುರ ತಾಲೂಕಿನ ವಿವಿಧ ಹೋಬಳಿಗಳಲ್ಲಿ ಕೃಷಿಯೇತರ ಭೂಮಿ, ಬೆಂಗಳೂರು ಹೊಸಕೆರೆ ಹಳ್ಳಿ, ಪಂತಪಾಳ್ಯ, ಯಲ್ಲಿ, ಮೈಸೂರಿನ ನಜರಾಬಾದ್ ಮೊಹಲ್ಲಗಳಲ್ಲಿ ಕೃಷಿಯೇತರ ಭೂಮಿ ಹೊಂದಿದ್ದಾರೆ.
ವಾಣಿಜ್ಯ:
ಬೆಂಗಳೂರು ಗೋಪಾಲಪುರದಲ್ಲಿ ಗ್ಲೋಬಲ್ ಮಾಲ್, ಪಂತರಪಾಳ್ಯದಲ್ಲಿರುವ ಗ್ಲೋಬಲ್ ಮಾಲ್ ಇರುವ ಭೂಮಿ, ಟಿಎನ್ಆರ್-ಇನಿಜಿಯೊ, ತಿರುಪಲಾಯ, ಜಿಗಣಿ ಹೋಬಳಿ, ಆನೇಕಲ್ನಲ್ಲಿ ಭೂಮಿ ಹೊಂದಿದ್ದಾರೆ.
ವಾಸದ ಮನೆ:
ರಾಂಪುರ ದೊಡ್ಡಿ, ಕೋಡಿಹಳ್ಳೀ ಹೋಬಳಿ, ಕನಕಪುರದಲ್ಲಿ 30 ಲಕ್ಷ ರೂ. ಮಾರುಕಟ್ಟೆ ಇರುವ ಮನೆ, ಬೆಂಗಳೂರು ಸದಾಶಿವನಗರದ ಅಪ್ಪರ್ ಪ್ಯಾಲೆಸ್ ಆರ್ಚಡ್ ನಲ್ಲಿ 25,82,11,161 ರೂ.ಗಳ ಮೌಲ್ಯದ ಮನೆ ಹೊಂದಿದ್ದಾರೆ. ಪಂತರಪಾಳ್ಯದ ಸಾಲಾರ್ಪುರಿಯ ಸತ್ವದಲ್ಲಿರುವ ಫ್ಲಾಟ್ ನ ಮಾರುಕಟ್ಟೆ ಮೌಲ್ಯ 1,01,78,124 ರೂ. ಇದೆ.
————————————————————————————————
ಸಂಸದರ ಹೆಸರು: ಡಿ.ಕೆ.ಸುರೇಶ್
ವರ್ಷ 2024 2019 2014
ಸ್ಥಿರಾಸ್ತಿ : 486,33,35,604 305,59,16,927 69,96,18,850
ಚರಾಸ್ತಿ : 106,7189791 33,06,68,208 15,77,44,288
ಮಾಡಿರುವ ಸಾಲ : 1,50,06,26,994 51,93,20,305 18,48,54,756
———————————————————————————–
ಕ್ರಿಮಿನಲ್ ಮೊಕದ್ದಮ್ಮೆ
ಸಂಸದ ಡಿ.ಕೆ.ಸುರೇಶ್ ತಮ್ಮ ವಿರುದ್ಧ ಮೂರು ಕ್ರಿಮಿನಲ್ ಮೊಕದ್ದಮ್ಮೆಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.
2022ರಲ್ಲಿ ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆ ಕನಕಪುರದಲ್ಲಿ ಪ್ರಕರಣ ದಾಖಲಾಗಿದೆ. ಕನಕಪುರ ನ್ಯಾಯಾಲಯದಲ್ಲಿ ಪ್ರಕರಣ ಸಮನ್ಸ್ ಹಂತದಲ್ಲಿದೆ. ಕರ್ನಾಟಕ ಸಾಂಕ್ರಮಿಕ ರೋಗಗಳ ಕಾಯ್ದೆ 2020ರಡಿಯಲ್ಲಿ ಸೆಕ್ಷನ್ 5(3ಎ) ಮತ್ತು ಐಪಿಸಿ ಅಡಿ 141, 143, 290, 336, 149 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೇಕೆದಾಟು ಪಾದಯಾತ್ರೆ ನಡೆಸಿ ಕೋವಿಡ್ 2019 ನಿಯಮಗಳನ್ನು ಉಲ್ಲಂಘಿಸಿ ಅವಿಧಯೇರಾಗಿದ್ದರು ಎಂದು ಬೆಂಗಳೂರು ನಗರದಲ್ಲಿರುವ ಸಂಸದರು, ಶಾಸಕರ ವಿರುದ್ಧ ದಾಖಲಾಗುವ ಕ್ರಿಮಿನಲ್ ಮೊಕದ್ದಮ್ಮೆಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕರ್ನಾಟಕ ಸಾಂಕ್ರಮಿಕ ರೋಗಗಳ ಕಾಯ್ದೆ 2020ರಡಿಯಲ್ಲಿ ಸೆಕ್ಷನ್ 5(3ಎ) ಮತ್ತು ಐಪಿಸಿ ಅಡಿ 141, 143, 290, 336, 149 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
2023ರಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 171ಬಿ, 171ಇ ಮತ್ತು ಪ್ರಜಾಪ್ರತಿನಿಧಿಗಳ ಕಾಯ್ದೆ 1950, 1951, 1989ರ ಸೆಕ್ಷನ್ 123(1), 123(2)ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿರುವ 42ನೇ ಅಡಿಷನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಘೋಷಿಸಿಕೊಂಡಿದ್ದಾರೆ.
ದ್ವಿತೀಯ ಪಿಯುಸಿ ಓದಿರುವ ಅವರು ಮೂಲತಃ ಕೃಷಿಕ. ಅದರೊಂದಿಗೆ ಉದ್ಯಮಿ ಹಾಗೂ ಸಮಾಜ ಸೇವಕ ಎಂದು ಘೋಷಿಸಿಕೊಂಡಿದ್ದು, 31 ಪುಟಗಳಲ್ಲಿ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ.