ಪ್ರತಿನಿಧಿ ವರದಿ ಕೋಲಾರ
ಎಕ್ಸಿಡಿ ಕಂಪನಿ ಮಾಲೀಕರ ಶೋಷಣೆ ವಿರುದ್ಧ ಕಾರ್ಮಿಕರ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಸಾಧ್ಯವಿಲ್ಲ. ಕೂಡಲೇ ಕಂಪನಿ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ, ಬೇಡಿಕೆಗಳ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಒತ್ತಾಯಿಸಿದರು.
ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಎಕ್ಸಿಡಿ ಕಂಪನಿ ಎದುರು ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸತತ 5 ನೇ ದಿನದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
ಇದು ಕಾರ್ಮಿಕರ ಬದುಕಿನ ಪ್ರಶ್ನೆಯಾಗಿದೆ. ಕಾನೂನು ಬದ್ಧವಾಗಿ ಕಾರ್ಮಿಕರ ಬೇಡಿಕೆಗಳ ಪಟ್ಟಿಯನ್ನು ಮಾಲೀಕರಿಗೆ ಸಲ್ಲಿಸಿದ್ದಾರೆ. ಮಾಲೀಕರು ಷರತ್ತುಗಳ ಮೇಲೆ ಕಾರ್ಮಿಕರನ್ನು ಬೆದರಿಸುವ ಪ್ರವೃತ್ತಿ ಬಿಟ್ಟು, ಕಾರ್ಮಿಕರು ಕಾನೂನು ಕೈ ತೆಗೆದುಕೊಳ್ಳುವ ಮುಂಚೆ ಮುಖಾಮುಖಿ ಬಗೆಹರಿಸಿಕೊಳ್ಳಬೇಕು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಈ ಕೈಗಾರಿಕಾ ಪ್ರದೇಶದಲ್ಲಿ ಕೃಷಿ ಭೂಮಿಯನ್ನು ಕಳೆದುಕೊಂಡ ಸಾವಿರಾರು ರೈತರು ಉದ್ಯೋಗಕ್ಕಾಗಿ ಕೈಕಟ್ಟಿ ಮಾಲೀಕನ ಮುಂದೆ ನಿಲ್ಲಬೇಕಾಗಿದೆ. ಕಾರ್ಮಿಕರನ್ನು ಎದುರು ಹಾಕಿಕೊಂಡು ಕಂಪನಿ ಅಭಿವೃದ್ಧಿಯಾದ ಉದಾಹರಣೆ ಇಲ್ಲ. ಕಾರ್ಮಿಕರು ಒಗ್ಗಟ್ಟಿನಿಂದ ಮನಸ್ಸು ಮಾಡಿದರೆ ಕಂಪನಿಯಲ್ಲಿನ ಯಂತ್ರೋಪಕರಣಗಳನ್ನು ನಿಲ್ಲಿಸುವ ತಾಕತ್ತು ಅವರಿಗಿದೆ. ಮಾಲೀಕನಿಗೆ ಒಂದೇ ಕಂಪನಿ ಆದರೆ ದುಡಿಯುವ ಕಾರ್ಮಿಕರಿಗೆ ನೂರಾರು ಕಂಪನಿ ಎಂಬುದನ್ನು ಮರೆಯಬಾರದು ಎಂದರು.
ಎಕ್ಷಿಡಿ ಕ್ಲಚ್ ಇಂಡಿಯಾ ಕಂಪನಿ ಯೂನಿಯನ್ ಅಧ್ಯಕ್ಷ ಹರೀಶ್ ಮಾತನಾಡಿ, ಸುಮಾರು ಒಂದುವರೆ ವರ್ಷದಿಂದ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುದ್ದೇವೆ. ಸೌಲಭ್ಯಗಳನ್ನು ಕೊಡದೇ ಇದ್ದರಿಂದ ಅನಿರ್ದಿಷ್ಟಾವಧಿ ಧರಣಿಗೆ ಹೋಗಬೇಕಾಗಿದೆ. ಎಷ್ಟೇ ದಿನವಾದರೂ ನಮ್ಮ ಬೇಡಿಕೆಗಳನ್ನು ಪಡೆದೇ ಪಡೆಯುತ್ತೇವೆ. ಇಲ್ಲಿಯೇ ಅಡಿಗೆ ಮಾಡಿಕೊಂಡು ಧರಣಿ ಮುಂದುವರೆಸುತ್ತೇವೆ ಎಂದರು
ಎಕ್ಷಿಡಿ ಕ್ಲಚ್ ಎಂಪ್ಲಾಯೀಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಪ್ರಮೋದ್, ಉಪಾಧ್ಯಕ್ಷರಾದ ರಮೇಶ್, ಶರತ್, ಖಜಾಂಚಿ ಮಂಜುನಾಥ್, ಸಹಕಾರ್ಯದರ್ಶಿ ಪೃಥ್ವಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಷ, ಖಜಾಂಚಿ ಎಚ್.ಬಿ ಕೃಷ್ಣಪ್ಪ, ಕಾರ್ಯದರ್ಶಿ ಎಂ.ಭೀಮರಾಜ್ ಅಂಗನವಾಡಿ ನೌಕರರ ಸಂಘದ ಲೋಕೇಶ್ವರಿ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.