ಮಂಡ್ಯ: ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾದರೆ ಗೆಲುವು ನಿಶ್ಚಿತ. ಪ್ರೀತಿ, ವಿಶ್ವಾಸದಿಂದ ಕುಮಾರಣ್ಣರನ್ನು ಕೇಂದ್ರ ಸಚಿವರನ್ನಾಗಿ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ಕಾಯಲು ಮೋದಿಜೀ, ಕಾವೇರಿ ಕಾಯಲು ಕುಮಾರಣ್ಣ ಬೇಕು. ನಾವು ಬಿಜೆಪಿ ಕಾರ್ಯಕರ್ತರು ಕುಮಾರಣ್ಣನ ಬೆನ್ನಿಗೆ ನಿಲ್ಲುತ್ತೇವೆ. ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ ಇದು. ನರೇಂದ್ರ ಮೋದಿ ಅವರ ಪುನರಾಯ್ಕೆ ನಿಶ್ಚಿತ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾಲಿಟ್ಟ ಕೂಡಲೇ ರಾಜ್ಯಕ್ಕೆ ಬರ ಬಂದಿದೆ. ಬಿಎಸ್ ಯಡಿಯೂರಪ್ಪ, ಕುಮಾರಣ್ಣ ಸಿಎಂ ಆಗಿದ್ದಾಗ ಮಳೆ, ಬೆಳೆ ಚೆನ್ನಾಗಿತ್ತು. ಕೆಆರ್ಎಸ್ ಬರಿದಾಗುವಾಗ ಸ್ಟಾಲೀನ್ ತಗಾದೆ ತೆಗೆಯಬೇಡಿ ಎನ್ನಲಿಲ್ಲ. ಆದರೆ ಚುನಾವಣೆಗಾಗಿ ಕೈ ಕೈ ಹಿಡಿದು ನಿಂತರು. ಇವತ್ತು ಕುಡಿಯುವ ನೀರಿಗೂ ಹೆಣಗಾಡುವ ಪರಿಸ್ಥಿತಿ ಇದೆ. ಗುತ್ತಿಗೆದಾರನಿಗೆ ಮತ ನೀಡಿದರೆ ಕಾವೇರಿ ಉಳಿಯಲ್ಲ. ಕರುಣೆಯ ಕುಮಾರಣ್ಣನಿಗೆ ಮತ ನೀಡಿ ಎಂದಿದ್ದಾರೆ.
ಅಸೆಂಬ್ಲಿಯಲ್ಲಿ ಜೆಡಿಎಸ್ ಎನ್ನುವ ಕಾರ್ಯಕರ್ತರು ಎಂಪಿ ಚುನಾವಣೆ ಬಂದಾಗ ಮೋದಿ ಪರ ನಿಲುತ್ತಾರೆ. ಮಂಡ್ಯದವರು ಸ್ವಾಭಿಮಾನಿಗಳು. ಮಂಡ್ಯ, ಮೈಸೂರಿಗೆ ಅವಿನಾಭಾವ ಸಂಬಂಧ ಇದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮತ್ತೆ ಮಳೆ ಕೈ ಕೊಡುತ್ತದೆ. KRS ಬರಿದಾಗುತ್ತದೆ, ಎಚ್ಚರಿಕೆಯಿಂದ ಮತಚಲಾಯಿಸಿ ಎಂದು ಹೇಳಿದ್ದಾರೆ.