ಪ್ರತಿನಿಧಿ ವರದಿ ಎಚ್.ಡಿ.ಕೋಟೆ
ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ತಾಲೂಕಿನ ಗಡಿಭಾಗದ ಬಾವಲಿ ಹಾಡಿಯ ನಿವಾಸಿಗಳು ಅಬಕಾರಿ ಜಿಲ್ಲಾಧಿಕಾರಿ ಮಹಾದೇವಿ ಬಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಗುರುವಾರ ಗಡಿಭಾಗದ ಬಾವಲಿ ಚೆಕ್ ಪೋಸ್ಟ್ ನಲ್ಲಿ ಅಬಕಾರಿ ಇಲಾಖೆ ವತಿಯಿಂದ ತೆರೆಯಲಾಗಿರುವ ಚೆಕ್ ಪೋಸ್ಟ್ ಗೆ ಬೇಟಿ ನೀಡಿದ್ದ ಸಂದರ್ಭದಲ್ಲಿ ಆದಿವಾಸಿ ಜನರು ಅಬಕಾರಿ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿ ಹಾಡಿಯಿಂದ 50, 100 ಮೀಟರ್ ದೂರದಲ್ಲಿ ನಿಯಮಬಾಹಿರವಾಗಿ ಅಬಕಾರಿ ಆಯುಕ್ತರಾದ ಮಂಜುನಾಥ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರೆಸಾರ್ಟ್ ನಲ್ಲಿ ಮದ್ಯದ ಅಂಗಡಿ ತೆರೆದು ಹೊರಗಡೆಯಿಂದ ಬರುವವರಿಗೆ ಮದ್ಯ ಮಾರಟ ಮಾಡಿಸುತ್ತಿದ್ದಾರೆ ಎಂದು ಹಾಡಿ ನಿವಾಸಿಗಳು ದೂರಿದರು.
ಮದ್ಯದ ಅಮಲಿನಲ್ಲಿ ಹಾಡಿಯ ಮನೆಯ ಹತ್ತಿರ ಕೂಗಾಟ, ರಂಪಾಟ ಮಾಡುತ್ತಿದ್ದಾರೆ. ಇದರಿಂದ ಹಾಡಿಯ ಹೆಣ್ಣುಮಕ್ಕಳು, ಶಾಲಾ ವಿಧ್ಯಾರ್ಥಿಗಳು ರಸ್ತೆಯಲ್ಲಿ ತಿರುಗಾಡಲು ತುಂಬಾ ತೊಂದರೆ ಆಗಿದೆ. ಅಲ್ಲದೆ ಪಕ್ಕದ ಕೇರಳ ರಾಜ್ಯದ ಜನರು ರೆಸಾರ್ಟ್ ಗೆ ಮದ್ಯ ಕುಡಿಯಲು ಬಂದು ಕುಡಿದ ಮತ್ತಿನಲ್ಲಿ ನಮ್ಮಗಳ ಮೇಲೆ ಈಗಾಗಲೇ ದೈಹಿಕವಾಗಿ ಹಲ್ಲೇ ಮಾಡುತ್ತಿರುತ್ತಾರೆ. ನಮ್ಮ ಜನರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣ ಆಗಿದ್ದು,ಯಾವುದೇ ಕಾರಣಕ್ಕೂ ಗಡಿಭಾಗದಲ್ಲಿ ಮದ್ಯದ ಅಂಗಡಿ ನಡೆಸಲು ಅನುಮತಿ ನೀಡಬಾರದು. ಈಗಾಗಲೇ ಅನುಮತಿ ನೀಡಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು.
ಹಾಡಿಯ ನಿವಾಸಿ ಸುಬ್ರಹ್ಮಣ್ಯ ಮಾತನಾಡಿದರು.
ನಂತರ ಮಾತನಾಡಿದ ಅಬಕಾರಿ ಡಿಸಿ ಮಹಾದೇವಿ ಬಾಯಿ ಅವರು ಈಗಾಗಲೇ ಗಲಾಟೆ ನಡೆದಿರುವ ವಿಚಾರ ಗಮನಕ್ಕೆ ಬಂದಿದ್ದು, ರೆಸಾರ್ಟ್ ನ ಪಕ್ಕದ ಗೇಟ್ ಹೊಡೆದು ಮದ್ಯ ಮಾರಟ ಮಾಡುತ್ತಿರುವ ಬಗ್ಗೆ ನಮ್ಮ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಅಬಕಾರಿ ಡಿವೈಎಸ್ಪಿ ವಿಕ್ರಮ್, ಅಬಕಾರಿ ನಿರೀಕ್ಷಕಿ ದಿವ್ಯ ಶ್ರೀ, ಹಾಡಿಯ ನಿವಾಸಿಗಳಾದ ಜಯಮ್ಮ, ಭಾಗ್ಯ, ಸಿ.ಕೆ.ರಾಜು, ಮಹೇಶ್, ರಾಜೇಶ, ಸಣ್ಣಪ್ಪ, ಸುಬ್ಬು, ಚಂದ್ರು, ಚಿನ್ನಪ್ಪ, ಜಯಮ್ಮ ಸರೋಜಿನಿ, ನಾಗೇಶ್, ಅಮ್ಮಣ್ಣಿ, ಸುಂದ್ರಿ, ರುಕ್ಮಿಣಿ, ದೀಪು, ಜಾನು, ಮಾರೇ, ಕಾಳಿ, ಬಿಂದು ಲೀಲೆ ಇದ್ದರು.