ಮಡಿಕೇರಿ: ಪ್ರತಿ ಚುನಾವಣೆ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ನಕ್ಸಲರು ಕಾಣಿಸಿಕೊಳ್ಳುತ್ತಿದ್ದು, ಇದು ರಾಷ್ಟ್ರೀಯ ಆಂತರಿಕ ಭದ್ರತೆ ಮತ್ತು ಸಾರ್ವಭೌಮತೆಗೆ ಬೆದರಿಕೆಯಾಗಿದೆ. ನಕ್ಸಲರ ಉಪಟಳವನ್ನು ಚಿಗುರಿನಲ್ಲೇ ಚಿವುಟಿ ಹಾಕಬೇಕು ಮತ್ತು ನಕ್ಸಲ್ ಸಮಸ್ಯೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ನಮ್ಮ “ಸಂಸ್ಕಾರ”, ವಿಶೇಷ ಗನ್ ವಿನಾಯಿತಿ ಹಕ್ಕುಗಳನ್ನು ತೆಗೆದು ಹಾಕಿದರೆ, ಈ ಪ್ರಾಚೀನ ಭೂಮಿಗೆ ಸುಲಭವಾಗಿ ನುಸುಳಬಹುದು ಮತ್ತು ಅಡಗಿಕೊಳ್ಳಬಹುದು ಎನ್ನುವ ಷಡ್ಯಂತ್ರವಿದ್ದು, ಇದು ನಮ್ಮ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡಲಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.
ಜಿಲ್ಲೆಯ ಕೆಲವು ಮಾಫಿಯಾಗಳು ನಕ್ಸಲಿಸಂ ಜೊತೆ ಕೈಜೋಡಿಸಿರುವ ಬಗ್ಗೆ ಶಂಕೆ ಇದೆ ಎಂದು ತಿಳಿಸಿರುವ ಅವರು, ನಕ್ಸಲರ ಚಟುವಟಿಕೆಗಳ ಕುರಿತು ಸಿಬಿಐ ಅಥವಾ ಎನ್ ಐಎ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಕೇಂದ್ರ ಗೃಹಮಂತ್ರಿಗಳು, ಚುನಾವಣಾ ಆಯೋಗ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.