ಮೈಸೂರು: ಮೋದಿ ಅಧಿಕಾರಕ್ಕೆ ಬರೋದಕ್ಕೂ ಮುನ್ನ 16 ಭರವಸೆ ಕೊಟ್ಟಿದ್ದರು. ಕಾಳ ಧನ ವಾಪಸ್ ತರುತ್ತೇವೆ ಅಂದಿದ್ದರು. ಆದ್ರೆ ಸುಪ್ರೀಂಕೋರ್ಟ್ಗೆ ಸ್ವಿಸ್ ಬ್ಯಾಂಕ್ ಹಣದ ಮಾಹಿತಿಯನ್ನೇ ಕೊಡಲಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ವರುಣ ಕ್ಷೇತ್ರದ ಬಿಳಿಗೆರೆ ಗ್ರಾಮದಲ್ಲಿ ಭಾಷಣ ಮಾಡಿದ ಅವರು, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂತ ಹೇಳಿದ್ದರು. ಆದ್ರೆ ದೆಹಲಿಯಲ್ಲಿ ರೈತರು ವರ್ಷಾನುಗಟ್ಟಲೆ ಪ್ರತಿಭಟನೆ ಮಾಡಬೇಕಾಯ್ತು. ವರ್ಷಕ್ಕೆ 2 ಕೋಟಿ ರೂ. ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂತ ಹೇಳಿದ್ದರು. ಈಗ ಹಿಂದೆ ಯಾವ ಸಂದರ್ಭದಲ್ಲೂ ಇಲ್ಲದಷ್ಟು ನಿರುದ್ಯೋಗ ಇದೆ. ಉದ್ಯೋಗ ಸೃಷ್ಟಿ ಬಗ್ಗೆ ಕೇಳಿದರೆ ಅಮಿತ್ ಷಾ ಅದೆಲ್ಲ ಜುಮ್ಲಾ ಅಂತಾರೆ. ಅಂದರೆ ಬಿಜೆಪಿ ನಾಯಕರೇ ಸುಳ್ಳು ಭರವಸೆ ಅಂತ ಒಪ್ಪಿಕೊಂಡಿದ್ದಾರೆ. ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ.ಮೋದಿ ಸರ್ಕಾರ ಬಂದ ಮೇಲೆ ಕೋಮುಗಲಭೆ ಹೆಚ್ಚಾಗಿದೆ. ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ ಎಂದು ಕಿಡಿಕಾರಿದರು.