ಮಡಿಕೇರಿ: ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್ಟಿ ಟ್ಯಾಗ್ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ, ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೋಮವಾರ ಹೈಕೋರ್ಟ್ ನಲ್ಲಿ ನಡೆಯಿತು.
ವಿಚಾರಣೆಯನ್ನು ಜೂ.5 ಕ್ಕೆ ಮುಂದೂಡಿದ ನ್ಯಾಯಾಲಯ ಸಿಎನ್ಸಿ ಬೇಡಿಕೆಯ ಕುರಿತು ಅಫಿಡವಿಟ್ ಸಲ್ಲಿಸುವಂತೆ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ಸೂಚಿಸಿತು. ಅಲ್ಲದೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಿದೆ.
ವಕೀಲರಾದ ಸತ್ಯ ಸಬರ್ವಾಲ್ ಹಾಗೂ ಎಂ.ಎಸ್.ನಾರಾಯಣ ಕಿರಣ್ ಸಿಎನ್ಸಿ ಪರ ವಾದ ಮಂಡಿಸಿದರು. ಕೊಡವರಿಗೆ ನೀಡಿದ ಭರವಸೆಗಳನ್ನು ಸರಕಾರ ಈಡೇರಿಸುತ್ತಿಲ್ಲ ಮತ್ತು ಅಸಡ್ಡೆ ತೋರುತ್ತಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನಿಲಯ್ ಬಿಪಿನ್ ಚಂದ್ರ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕ್ರಿಶಾ ದೀಕ್ಷಿತ್ ಅವರ ಮುಂದೆ ವಕೀಲರು ಪ್ರತಿಪಾದಿಸಿದರು.
ಅರ್ಜಿದಾರರಾದ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ವಿಹೆಚ್ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ರಾಜ್ಯಾಧ್ಯಕ್ಷ ನಿಖುಂಜ್ ಶಾ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಶ್ರೇಯಾ ನಾಚಪ್ಪ, ಸಿಎನ್ಸಿಯ ಪ್ರಮುಖರಾದ ಚಂಬಂಡ ಜನತ್, ಮಂದಪಂಡ ಮನೋಜ್, ಕಿರಿಯಮಾಡ ಶರಿನ್, ವಿಎಚ್ಎಸ್ ಸದಸ್ಯರಾದ ನಟರಾಜ್ ಹಾಗೂ ರವಿಶಂಕರ್ ಇದ್ದರು.