ಪ್ರತಿನಿಧಿ ವರದಿ ಹೊಸೂರು
ನನಗೆ ಜನ್ಮ ನೀಡಿದ ತಂದೆ ತಾಯಿ ಹಾಗೂ ಗ್ರಾಮವನ್ನು ಎಂದು ಮರೆಯುವುದಿಲ್ಲ ಹಾಗೂ ನಾನಿರುವ ತನಕ ಈ ಗ್ರಾಮಕ್ಕೆ ಹಾಗೂ ಗ್ರಾಮದ ಜನತೆಗಾಗಿ ಅಳಿಲು ಸೇವೆಯನ್ನು ಮಾಡುತ್ತಿರುತ್ತೇನೆ ಎಂದು ನಿವೃತ್ತ ಸೈನಿಕ ಶಿವಣ್ಣ ತಿಳಿಸಿದರು.
ಸಾಲಿಗ್ರಾಮ ತಾಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ಯಲ್ಲಮ್ಮ ದೇವಿಯ ಉತ್ಸವದಲ್ಲಿ ಭೋವಿ ಸಮಾಜದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ನೌಕರರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಊಟಕ್ಕೂ ತೊಂದರೆ ಇದ್ದಂತಹ ಸಮಯದಲ್ಲಿ ಕಠಿಣ ವಿದ್ಯಾಭ್ಯಾಸ ಮಾಡುವ ಮೂಲಕ ಸೈನಿಕ ಸೇವೆಗೆ ಸೇರಿ ನಿವೃತ್ತಿ ಹೊಂದಿದ್ದೇನೆ. ಈಗ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ತಿಳಿಸಿದರು.
ಯುವಕರು ಬೇರೆ ಕಡೆ ಗಮನಹರಿಸವುದನ್ನು ಬಿಟ್ಟು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಬೇಕು. ವಿದ್ಯಾರ್ಥಿಯ ಜೀವನ ಬಹಳ ಅತ್ಯಮೂಲ್ಯವಾಗಿದ್ದು, ಆರ್ಥಿಕವಾಗಿ ಸಬಲರಾದ ನಂತರ ನೀವು ನಿಮ್ಮ ಅಕ್ಕಪಕ್ಕದ, ಜತೆಯಲ್ಲಿರುವವರ ಕಷ್ಟಕ್ಕೆ ಸಹಾಯಹಸ್ತ ಚಾಚುವಂತೆ ತಿಳಿಸಿದರು.
ನಾನು ಈಗಾಗಲೇ ಬಡ ಮಕ್ಕಳಿಗಾಗಿ ಪಿರಿಯಾಪಟ್ಟಣದಲ್ಲಿ ಉಚಿತ ಶಿಕ್ಷಣ ಸೈನಿಕ ಶಾಲೆಯನ್ನು ಪ್ರಾರಂಭ ಮಾಡಿದ್ದು ನಮ್ಮಲ್ಲಿ ತರಬೇತಿ ಪಡೆದ ನೂರಾರು ಮಕ್ಕಳು ಇಂದು ಸೈನ್ಯಕ್ಕೆ ಸೇರಿದ್ದಾರೆ. ನಿಮಗೆ ಯಾರಿಗಾದರೂ ಸೇನೆಗೆ ಸೇರುವ ಬಯಕೆ ಇದ್ದಲ್ಲಿ ನಮ್ಮ ಸೈನಿಕ ಶಾಲೆಗೆ ಸೇರಬಹುದಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿವೃತ್ತ ಸೈನಿಕರಿಂದ ಭರಿಸಲಾಗುವುದು ಎಂದು ತಿಳಿಸಿದರು.
ವಡ್ಡರಕೊಪ್ಪಲು ಗ್ರಾಮದ ನಿವೃತ್ತ ನೌಕರರು, ಶಾಬಾಳ್ ಗ್ರಾಮದ ಕಿರಣ್ ಕುಮಾರ್ ಅಂಕನಹಳ್ಳಿ, ಪ್ರಕಾಶ್ ಹರೀಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಲಾಯಿತು. ಈ ಭೋವಿ ಸಮಾಜದ ಮುಖಂಡರಾದ ರಾಮರಾಜ ಭೋವಿ, ನಟರಾಜ ಬೋವಿ, ಕಾಂತರಾಜ ಭೋವಿ, ಜಲೇಂದ್ರ ಬೋವಿ, ಸ್ವಾಮಿ ಬೋವಿ, ಕುಮಾರ, ವೆಂಕಟೇಶ, ಮೋಹನ ಭೋವಿ, ಸತ್ಯ, ಅರಸ ಬೋವಿ ಸೇರಿದಂತೆ ಇನ್ನಿತರರು ಹಾಜರಿದ್ದರು.