ಮೈಸೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬರೀ ಸುಳ್ಳು ಹೇಳಿದ್ದಕ್ಕೆ ಬಿಜೆಪಿ ವರಿಷ್ಠರು ಅವರಿಗೆ ಈ ಬಾರಿ ಟಿಕೆಟ್ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಅಭಿಷೇಕ್ ವೃತ್ತದಲ್ಲಿ ಆಯೋಜಿಸಿದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡಿದ ಸಿದ್ದರಾಮಯ್ಯ, ಪ್ರತಾಪ್ ಸ್ಥಳೀಯರಲ್ಲ, ಹಾಸನ ಜಿಲ್ಲೆಯ ಸಕಲೇಶಪುರದವರು, ಆದರೆ ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿರೋದ್ರಿಂದ ಬಿಜೆಪಿ ಅವರನ್ನು ಇಲ್ಲಿಂದ ಎರಡು ಬಾರಿ ಕಣಕ್ಕಿಳಿಸಿತ್ತು. ಆದರೆ ಈ ಬಾರಿ ಬಿಜೆಪಿ ಒಬ್ಬ ಒಕ್ಕಲಿಗೆನಿಗೆ ಟಿಕೆಟ್ ತಪ್ಪಿಸಿ ಒಡೆಯರ್ ಮನೆತನದ ಯದುವೀರ್ ಆವರಿಗೆ ಟಿಕೆಟ್ ನೀಡಿದೆ ಎಂದು ಹೇಳಿದ ಸಿದ್ದರಾಮಯ್ಯ, ಕೊಡಗು-ಮೈಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ ಲಕ್ಷ್ಮಣ್ ಒಕ್ಕಲಿಗರಲ್ಲ ಎಂದು ಪ್ರತಾಪ್ ಸಿಂಹ ಮತ್ತು ಬಿಜೆಪಿ ನಾಯಕರು ಹೇಳುತ್ತಿದ್ದಾರೆ, ಆದರೆ ಲಕ್ಷ್ಮಣ್ ಶೇಕಡ 200 ರಷ್ಟು ಒಕ್ಕಲಿಗ ಎಂದು ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಬದುಕು ಆರಂಭಿಸಿದ ಲಕ್ಷ್ಮಣ್, ಪಕ್ಷದ ಪ್ರಧಾನ ಕಾರ್ಯದರ್ಶಿ, ವಕ್ತಾರನಾಗಿ ಬೆಳೆದು ಈಗ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದರು. ಅಪಾರ ರಾಜಕೀಯ ಜ್ಞಾನ ಹೊಂದಿರುವ ಲಕ್ಷ್ಮಣ್ ಮೈಸೂರು ಕೊಡಗು ಜನತೆಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.