ಮಂಗಳೂರು : ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಟಿಕೆಟ್ ನೀಡುವಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದ್ದರು. ಆದರೆ ಬಿಜೆಪಿ ಮಾತ್ರ ಟಿಕೆಟ್ ನೀಡಿರಲಿಲ್ಲ. ಇದರಿಂದ ಕೋಪಗೊಂಡು ಪುತ್ತಿಲ ಪರಿವಾರ ಎಂಬ ಸಂಘಟನೆ ಕಟ್ಟಿಕೊಂಡು ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡರು. ಹಾಗಾಗಿ ಬಿಜೆಪಿ ಮತ್ತು ಪುತ್ತಿಲ ಮಧ್ಯೆ ಆಗಾಗ ಶೀತಲ ಸಮರ ನಡೆಯುತ್ತಿತ್ತು. ಇವರ ಜಗಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರು. ಲೋಕಸಭೆ ಚುನಾವಣೆ ಹಿನ್ನೆಲೆ ಪುತ್ತಿಲ ಪರಿವಾರವನ್ನು ಸಂಧಾನದ ಮೂಲಕ ಮತ್ತೆ ಬಿಜೆಪಿಗೆ ಕರೆತರಲಾಗಿದೆ. ಇದೀಗ ಸಂಸದ ಪ್ರತಾಪ್ ಸಿಂಹ ಪುತ್ತಿಲಗೆ ಪಕ್ಷ ನಿಷ್ಠೆಯ ಪಾಠ ಮಾಡಿದ್ದಾರೆ. ಪುತ್ತೂರಿನಲ್ಲಿ ಬಿಜೆಪಿ ವತಿಯಿಂದ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಅರುಣ್ ಕುಮಾರ್ ಪುತ್ತಿಲರವರೇ, ನೀವು ಪುತ್ತೂರಲ್ಲಿ ಮಾಡಿದ ಶಕ್ತಿ ಪ್ರದರ್ಶನವನ್ನು ಮೈಸೂರಲ್ಲಿ ಮಾಡುವಷ್ಟು ಶಕ್ತಿ ನನಗೂ ಇದೆ. ಆದರೆ ನಾವು ನಮ್ಮ ಶಕ್ತಿ ಪ್ರದರ್ಶನ ಮಾಡಲಿಲ್ಲ. ಏಕೆಂದರೆ ನಮಗೆ ಪಕ್ಷ ನಿಷ್ಠೆ ಮುಖ್ಯ ಎಂದು ಹೇಳಿದ್ದಾರೆ.