ಚಿಕ್ಕಬಳ್ಳಾಪುರದಲ್ಲಿ ಅಪಾರ ಜನಸ್ತೋಮ । ಹರ್ಷೋದ್ಘಾರದ ನಡುವೆ ಸಾಗಿದ ಮೆರವಣಿಗೆ
ಚಿಕ್ಕಬಳ್ಳಾಪುರ : ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಂದ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಾರ್ವಜನಿಕ ಮೆರವಣಿಗೆ ಆಯೋಜಿಸಲಾಗಿತ್ತು. ಅಪಾರ ಕಾರ್ಯಕರ್ತ ಸಮೂಹದ ನಡುವೆ ಸಂಭ್ರಮ ಜನ ಸಾಗರವೇ ಹರಿದು ಬಂದಿತ್ತು. ಕಾರ್ಯಕರ್ತರಲ್ಲಿ ಸಡಗರ ಮತ್ತು ಸಂಭ್ರಮ, ಅಮಿತೋತ್ಸಾಹ ಮೇರೆ ಮೀರಿತ್ತು.
ರಕ್ಷಾ ರಾಮಯ್ಯ ಅವರಿಗೆ ಏಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್, ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡ, ಬಾಗೇಪೆಲ್ಲಿ ಶಾಸಕರಾದ ಸುಬ್ಬಾರೆಡ್ಡಿ, ಗೌರಿ ಬಿದನೂರು ಶಾಸಕರಾದ ಕೆ.ಎಚ್. ಪುಟ್ಟಸ್ವಾಮಿ ಗೌಡ, ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು, ಮತ್ತಿತರರು ಜೊತೆಯಾದರು. .
ಇದಕ್ಕೂ ಮುನ್ನ ರಕ್ಷಾ ರಾಮಯ್ಯ, ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಸಚಿವರು ಹಾಗೂ ಶಾಸಕರೊಂದಿಗೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಕೈವಾರ ತಾತಯ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಸೀದಿಗೇ ಭೇಟಿ ನೀಡಿದರು. ಕನಕದಾಸರು ಮತ್ತು . ಕೆ.ಬಿ. ಪಿಳ್ಳಪ್ಪ ಮತ್ತು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ನಂತರ ಮೆರವಣಿಗೆಯಲ್ಲಿ ತೆರಳಿದರು.
ನಂತರ ನೆರೆದಿದ್ದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಕ್ಷಾ ರಾಮಯ್ಯ ಮಾತನಾಡಿ, ಬಿಜೆಪಿಯಿಂದ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಪಡೆಯಲು ಕೇಂದ್ರ ಮಟ್ಟದಲ್ಲಿ ಹೋರಾಟ ನಡೆಸುತ್ತೇನೆ. ಕ್ಷೇತ್ರದ ಧ್ವನಿಯಾಗಿ, ರಾಜ್ಯದ ಪರವಾಗಿ ಕೇಂದ್ರದಲ್ಲಿ ಹೋರಾಟ ಮಾಡುತ್ತೇನೆ. ಚುನಾವಣೆಯಲ್ಲಿ ಸೇವೆ ಸ್ಲಲಿಸಲು ತಮಗೆ ಅವಕಾಶ ಕಲ್ಪಿಸಬೇಕು. ಇದು ಅತ್ಯಂತ ಪ್ರಮುಖ ಚುನಾವಣೆ, ಪ್ರತಿಯೊಂದು ಮನೆಗೂ ಗ್ಯಾರೆಂಟಿ ಯೋಜನೆಗಳು ತಲುಪುತ್ತಿವೆ. ರಾಜ್ಯ ಸರ್ಕಾರಕ್ಕೆ ನಾಲ್ಕು ವರ್ಷಗಳ ಅಧಿಕಾರದ ಅವಧಿ ಇದ್ದು. ಸಂಸದರಿಗೆ ಐದು ವರ್ಷಗಳ ಅವಧಿ ಇರಲಿದೆ. ನಿಮ್ಮ ಸೇವೆಗೆ ಇದೊಂದು ಸದಾವಕಾಶ ಎಂದು ಹೇಳಿದರು.
ಬಿಜೆಪಿ ಸರ್ಕಾರಕ್ಕೆ ದಕ್ಷಿಣ ಭಾರತದ ಬಗ್ಗೆ ಒಲವಿಲ್ಲ. ಬಿಜೆಪಿ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಅವರಿಗೆ ದಕ್ಷಿಣ ಭಾರತ ಬೇಕಿಲ್ಲ. ಉತ್ತರ ಭಾರತದ ಬಗ್ಗೆ ಮಾತ್ರ ವಿಶೇಷ ಅಭಿಮಾನ ಹೊಂದಿದೆ. ಕರ್ನಾಟಕದ ತೆರಿಗೆ ಹಣವನ್ನು ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನಕ್ಕೆ ನೀಡುತ್ತಿದೆ. ಕರ್ನಾಟಕಕ್ಕೆ ಕೊಡುಗೆ ನೀಡುವುದಿಲ್ಲ. ಹೀಗಾಗಿ ರಾಜ್ಯದ ಪರ ಹೋರಾಟ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತದಾರರೇ ಅಭ್ಯರ್ಥಿಗಳು, ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ, ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ, ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಿಸಲಿದೆ. ಹೀಗಾಗಿ ಏಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡರಾದ ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕು ಎಂದು ಮನವಿ ಮಾಡಿದರು.
ಕೋವಿಡ್ ಸಮಯದಲ್ಲಿ ಕೋಟ್ಯಾಂತರ ಜನ ನರಳುವಂತಾಯಿತು. ರಾಜ್ಯದ ಜನತೆ ಸಹ ತೀವ್ರ ತೊಂದರೆಗೆ ಸಿಲುಕಿದರು. ಅಷ್ಟೇ ಅಲ್ಲದೇ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹೆಚ್ಚಿನ ದಬ್ಬಾಳಿಕೆಯಾಗಿತ್ತು. ಹಿಂದೆ ಗೆದ್ದು ಬಂದಿದ್ದವರು, ವಿನಾ ಕಾರಣ ಅಮಾಯಕರ ಮೇಲೆ ಪ್ರಕರಣಗಳ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದರು. ಇದನ್ನು ತಪ್ಪಿಸಬೇಕಾಗಿದೆ. ಆಸ್ಪತ್ರೆಗೆ ಹೋದಾಗ ನಾವು ವೈದ್ಯರ ಧರ್ಮ ಕೇಳುವುದಿಲ್ಲ. ವಕೀಲರ ಬಳಿ ತೆರಳಿದಾಗಲೂ ಅವರ ಧರ್ಮದ ಬಗ್ಗೆ ವಿಚಾರಿಸುವುದಿಲ್ಲ. ಆದರೆ ಬಿಜೆಪಿ ಪ್ರತಿಯೊಂದರಲ್ಲೂ ಧರ್ಮದ ವಿಚಾರ ಮುಂದಿಟ್ಟುಕೊಂಡು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಪ್ರತಿಯೊಬ್ಬರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್. ಯುವಕನಾದ ನನಗೆ ಅವಕಾಶ ಮಾಡಿಕೊಟ್ಟರೆ ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಎಂದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಎಂ.ಎಸ್.ರಾಮಯ್ಯ ಕುಟುಂಬ ಸಾಕಷ್ಟು ಸೇವೆ ಸಲ್ಲಿಸಿದ್ದು, ಕಷ್ಟದಲ್ಲಿರುವವರಿಗೆ ನೆರವಾಗುತ್ತಾ ಬಂದಿದೆ. ಹಿಂದುಳಿದ ವರ್ಗಗಳ ಹರಿಹಾರ ದೇವರಾಜ ಅರಸು ಅವರು ಕಷ್ಟ ಕಾಲದಲ್ಲಿದ್ದಾಗ ಈ ಕುಟುಂಬ ಅವರ ನೆರವಿಗೆ ಈ ಕುಟುಂಬ ಧಾವಿಸಿತ್ತು. ರಾಜ್ಯವನ್ನಾಳಿದ ನೀವು ಚೆನ್ನಾಗಿರಬೇಕು ಎಂದು ಅರಸು ಅವರಿಗೆ ಈ ಕುಟುಂಬದವರು ಹೇಳುತ್ತಿದ್ದರು. ನನ್ನನ್ನು ಹೇಗೆ ಆಶೀರ್ವದಿಸಿದ್ದೀರೋ ಅದೇ ರೀತಿ ರಕ್ಷಾ ರಾಮಯ್ಯ ಅವರನ್ನು ಸಹ ಆಶೀರ್ವಾದಿಸಿ, ಪ್ರತಿ ಮನೆಯ ಕುಟುಂಬ ಸದಸ್ಯರಿಗೆ 10 ಕೆ.ಜಿ .ದೊರೆಯುತ್ತಿದೆ. ಶಾಶ್ವತ ನೀರಾವರಿ ಜಾರಿ ಜತೆಗೆ ಕೆ.ಸಿ. ವ್ಯಾಲಿ ಕಣಿವೆಯಿಂದ ಬರುವ ನೀರನ್ನು ಮೂರಹೇ ಹಂತದಲ್ಲಿ ಶುದ್ದೀಕರಣ ಮಾಡಲು ಪ್ರಮಾಣಿಕ ಪ್ರಯತ್ನ ನಡೆಸುತ್ತೇವೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಸಾಧನೆಯಿಂದ ಎತ್ತಿನ ಹೊಳೆ ಯೋಜನೆ ಜಾರಿಗೆ ಬಂದಿದ್ದು, ಒಂದೆರಡು ವರ್ಷಗಳಲ್ಲಿ ನೀರು ಹರಿಯಲಿದೆ ಎಂದರು.
ಬಾಕ್ಸ….
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಿದರು.
ರಕ್ಷಾ ರಾಮಯ್ಯ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್, ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡ, ಬಾಗೇಪೆಲ್ಲಿ ಶಾಸಕರಾದ ಸುಬ್ಬಾರೆಡ್ಡಿ ಜೊತೆಯಾದರು.