– ಸಚಿವ ಕೆ. ವೆಂಕಟೇಶ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ
ಪ್ರತಿನಿಧಿ ವರದಿ ಮೈಸೂರು
ದೇವೇಗೌಡರಿಗೆ ನಾಯಕರನ್ನು ಬೆಳೆಸಿ ಗೊತ್ತೇ ಹೊರತು, ತುಳಿದು ಗೊತ್ತಿಲ್ಲ, ಅನ್ನ ತಿನ್ನುವ ಬಾಯಲ್ಲಿ ಏನೇನೋ ಮಾತನಾಡಬೇಡಿ ಎಂದು ಸಚಿವ ಕೆ. ವೆಂಕಟೇಶ್ ವಿರುದ್ಧ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಕೆ. ವೆಂಕಟೇಶ್ ಅವರ ಹೇಳಿಕೆ ನೋಡಿ ಅವರ ಮೇಲಿದ್ದ ಎಲ್ಲ ಗೌರವ ಮರೆಯಾಗಿದೆ. ನಿಮಗೆ ರಾಜಕೀಯವಾಗಿ ಬೆಳೆಸಿ, ಶಕ್ತಿ ತುಂಬಿದ್ದು ದೇವೇಗೌಡರು ಎಂಬುದನ್ನು ಮರೆಯಬೇಡಿ. ನನಗೆ ಟಿಕೆಟ್ ಕೊಡಿಸಬೇಕು ಎಂದು ಒಂದು ಗಂಟೆ ಕಾಲ ಕಾದು ಅಮಿತ್ ಶಾ ಅವರ ಜೊತೆ ಪೋನ್ನಲ್ಲಿ ಮಾತನಾಡಿದ್ದರು. ನನಗೆ ಟಿಕೆಟ್ ಕೊಡಿ ಎಂದು ಅಮಿತ್ ಶಾ ಅವರನ್ನು ಕೇಳಿದವರಲ್ಲಿ ದೇವೇಗೌಡರೇ ಪ್ರಮುಖರು. ಇಂತಹ ವ್ಯಕ್ತಿ ನನಗೆ ಟಿಕೆಟ್ ತಪ್ಪಿಸುತ್ತಾರೆ ಅಂತ ಹೇಳಿದರೆ ಹೇಗೆ? ವೆಂಕಟೇಶ್ ಅವರು ಇಂತಹ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು ಎಂದು ಪ್ರತಾಪ್ ಸಿಂಹಗೆ ದೇವೇಗೌಡರೇ ಟಿಕೆಟ್ ತಪ್ಪಿಸಿದರು ಎಂಬ ಸಚಿವ ವೆಂಕಟೇಶ್ ಹೇಳಿಕೆ ತಿರುಗೇಟು ನೀಡಿದರು.
ಒಕ್ಕಲಿಗರಿಗೆ ಟಿಕೆಟ್ ಕೊಡಲಿ: ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಒಕ್ಕಲಿಗ ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಕಾಂಗ್ರೆಸ್ಸಿಗರು ಮೊದಲು ಒಳ್ಳೆಯ ಒಕ್ಕಲಿಗರಿಗೆ ಟಿಕೆಟ್ ಕೊಡಲಿ. ಇನ್ನೂ ಒಂದು ದಿನ ಅವಕಾಶವಿದ್ದು, ಈಗಲೂ ನಿಮಗೆ ಅಭ್ಯರ್ಥಿಯನ್ನು ಬದಲಾಯಿಸಲು ಅವಕಾಶ ಇದೆ. ಅದನ್ನು ಬಳಸಿಕೊಂಡು, ಚುನಾವಣೆ ಗೆಲ್ಲಲು ಒಳ್ಳೆಯ ಅಭ್ಯರ್ಥಿ ಇರಬೇಕು. ನಿಮ್ಮ ಅಭ್ಯರ್ಥಿ ನಾನು ಒಕ್ಕಲಿಗ ಅಂತ ಈಗ ಪ್ರಮಾಣ ಪತ್ರ ಹಿಡಿದುಕೊಂಡು ಬಂದಿದ್ದಾನೆ. ಆ ಪ್ರಮಾಣ ಪತ್ರ ಯಾವುದು?, ಕೆಎಸ್ಒಯುನಲ್ಲಿ ಸಿಗುತ್ತಿದ್ದ ಪ್ರಮಾಣ ಪತ್ರವೇ? ಎಂದು ಪ್ರಶ್ನಿಸಿದರು.
ಅಲ್ಲದೇ ಇಷ್ಟು ದಿನಗಳ ಕಾಲ ಒಕ್ಕಲಿಗರನ್ನು ತುಚ್ಛವಾಗಿ ಬೈಯುತ್ತಿದ್ದ ಹೊಲಸು ಬಾಯಿಯ ವ್ಯಕ್ತಿ ನಿಮ್ಮ ಅಭ್ಯರ್ಥಿಯಾಗಿದ್ದು, ಒಕ್ಕಲಿಗರೆಂದರೆ ನೇರವಂತಿಕೆ ಗಡಸು ಸ್ವಭಾವ ಇರುತ್ತೆ. ನಿಮ್ಮ ಅಭ್ಯರ್ಥಿಗೆ ಈ ಯಾವುದಾದರು ಒಂದು ಲಕ್ಷಣ ಇದೆಯಾ? ಮೊದಲು ಅಭ್ಯರ್ಥಿ ಬದಲಾಯಿಸಿ ಆಮೇಲೆ ಗೆಲ್ಲುವುದಕ್ಕೆ ಒಕ್ಕಲಿಗರ ಕಾರ್ಡ್ ಫ್ಲೇ ಮಾಡುವಿರಿ ಎಂದು ವಾಗ್ದಾಳಿ ನಡೆಸಿದರು.
====================