– ರಂಗೇರಿದ ಮೈಸೂರು-ಕೊಡಗು ಲೋಕಸಭಾ ಅಖಾಡ
– ಯದುವೀರ್ ಒಡೆಯರ್ ಅವರ ಭರ್ಜರಿ ರೋಡ್ ಶೋ
– ಸಿಎಂ ಜೊತೆ ಉಮೇದುವಾರಿಕೆ ಸಲ್ಲಿಸಿದ ಎಂ. ಲಕ್ಷ್ಮಣ್
ಪ್ರತಿನಿಧಿ ವರದಿ ಮೈಸೂರು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿತ್ತು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಸಿಎಂ ಹಾಗೂ ಡಿಸಿಎಂ ಸಾಥ್ ನೀಡಿದರೆ. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯದುವೀರ್ ಒಡೆಯರ್ ಅವರ ಉಮೇದುವಾರಿಕೆ ಸಲ್ಲಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಾಥ್ ನೀಡುವ ಮೂಲಕ ಚುನಾವಣೆಯ ಕಾವು ಹೆಚ್ಚುವಂತೆ ಮಾಡಿದರು.
ಯದುವೀರ್ ಭರ್ಜರಿ ರೋಡ್ ಶೋ: ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಯದುವೀರ್ ಒಡೆಯರ್, ಮೈತ್ರಿ ಪಕ್ಷಗಳ ಮುಖಂಡರು, ಸಾವಿರಾರು ಮಂದಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ರಾಜಪುರೋಹಿತರ ಸಲಹೆಯಂತೆ ಸೋಮವಾರ ಮೊದಲ ಸೆಟ್ ನಾಮಪತ್ರ ಸಲ್ಲಿಸಿದ್ದ ಯದುವೀರ್ ಒಡೆಯರ್, ಬುಧವಾರ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದರು. ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಸಂಸದ ಪ್ರತಾಪ್ ಸಿಂಹ ಅವರುಗಳ ನೇತೃತ್ವದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ರೋಡ್ ಶೋ ನಡೆಸಿದರು. ಡೊಳ್ಳು, ನಗಾರಿ ಸೇರಿದಂತೆ ಕಲಾ ತಂಡಗಳನ್ನು ಒಳಗೊಂಡ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿದರು. ಮೆರವಣಿಗೆ ಹಾರ್ಡಿಂಗ್ ವೃತ್ತದ ಬಳಿ ಆಗಮಿಸಿದ ವೇಳೆ ಮುಖಂಡರು ಪ್ರಚಾರ ಭಾಷಣ ಮುಗಿಸಿದ ಬಳಿಕ ಯದುವೀರ್ ಸೇರಿದಂತೆ ಎಲ್ಲ ಮುಖಂಡರು ಪ್ರತ್ಯೇಕ ವಾಹನದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.ಇದರ ಪರಿಣಾಮ ಮೆರವಣಿಗೆಯಲ್ಲಿದ್ದ ಬಹುತೇಕರು ಹಾರ್ಡಿಂಗ್ ವೃತ್ತದಿಂದ ವಾಪಸ್ ತೆರಳಿದರು.
ತಾಯಿಯೊಂದಿಗೆ ವಿಶೇಷ ಪೂಜೆ: ನಾಮಪತ್ರ ಸಲ್ಲಿಕೆಗೂ ಮುನ್ನ ಯದುವೀರ್ ಅವರು ತಾಯಿ ರಾಜವಂಶಸ್ಥೆ ಡಾ. ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ ಸಾಥ್, ಶಾಸಕರಾದ ಜಿ.ಡಿ.ಹರೀಶ್ಗೌಡ, ಟಿ.ಎಸ್.ಶ್ರೀವತ್ಸ, ಮಾಜಿ ಸಚಿವರಾದ ಸಿ.ಎಚ್.ವಿಜಯಶಂಕರ್, ಎಸ್.ಎ.ರಾಮದಾಸ್, ಮಾಜಿ ಶಾಸಕರಾದ ಎಲ್.ನಾಗೇಂದ್ರ, ಮಾರುತಿರಾವ್ ಪವಾರ್, ಅಶ್ವಿನ್ ಕುಮಾರ್, ಕೆ.ಮಹದೇವು, ಕೆ.ಜಿ.ಬೋಪಯ್ಯ, ಮಾಜಿ ಎಂಎಲ್ಸಿ ಗೋ.ಮಧುಸೂದನ್, ಮುಖಂಡರಾದ ಮಾಳವಿಕಾ ಅವಿನಾಶ್, ಎಲ್.ಆರ್.ಮಹದೇವಸ್ವಾಮಿ, ಅಪ್ಪಣ್ಣ, ರಘು ಕೌಟಿಲ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.
ಮಹನೀಯರಿಗೆ ಯದುವೀರ್ ಗೌರವ : ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ನಗರದಲ್ಲಿರುವ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ರಾಜವಂಶಸ್ಥರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಚಾಮರಾಜ ಒಡೆಯರ್, ಜಯಚಾಮರಾಜ ಒಡೆಯರ್, ರೈಲ್ವೆ ನಿಲ್ದಾಣದ ಬಳಿಯ ಬಾಬು ಜಗಜೀವನ್ರಾಮ್, ಮೆಟ್ರೋಪೋಲ್ ವೃತ್ತದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಗನ್ಹೌಸ್ ವೃತ್ತದ ಬಳಿಯ ಕುವೆಂಪು, ಬಸವಣ್ಣ, ಕುರುಬಾರಹಳ್ಳಿ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ, ಟೌನ್ಹಾಲ್ ಮುಂಭಾಗದ ಅಂಬೇಡ್ಕರ್, ಗಾಂಧಿ ವೃತ್ತದಲ್ಲಿನ ಮಹಾತ್ಮ ಗಾಂಧಿ, ಸುಣ್ಣದ ಕೇರಿಯಲ್ಲಿನ ವಾಲ್ಮೀಕಿ , ರಾಜಕುಮಾರ್ ಉದ್ಯಾನವನದಲ್ಲಿನ ಡಾ. ರಾಜಕುಮಾರ್ ಅವರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಎಂ. ಲಕ್ಷ್ಮಣ್ ನಾಮಪತ್ರ ಸಲ್ಲಿಕೆ
ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಲಕ್ಷ್ಮಣ್ ತಮ್ಮ ಅಪಾರ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಶಕ್ತಿ ಪ್ರದರ್ಶನ ಮಾಡುವ ಮೂಲಕ ೨ ಸೆಟ್ ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರದ ಜತೆಗೆ ಮತದಾರರ ಗುರುತಿನಪತ್ರ, ಆದಾಯ ಪ್ರಮಾಣ ಪತ್ರ, ಬಿ ಫಾರ್ಮ್ಗಳನ್ನು ಸಲ್ಲಿಸಿದರು. ಇವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಕೆ.ವೆಂಕಟೇಶ್, ಕಾರ್ಯಾಧ್ಯಕ್ಷ ತನ್ವೀರ್ಸೇಠ್ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಗೂ ಮೊದಲು ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಕಾಂಗ್ರೆಸ್ ಮೆರವಣಿಗೆ ರದ್ದು:
ಎಂ.ಲಕ್ಷ್ಮಣ್ ನಾಮಪತ್ರ ಸಲ್ಲಿಕೆಗೂ ಮೊದಲು ಯರಗನಹಳ್ಳಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಮುಖಂಡರು ಚಾಮರಾಜನಗರದಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಭಾಗಿಯಾಗಿ ಮೈಸೂರಿಗೆ ಬರುವುದು ತಡವಾದ್ದರಿಂದ ಮೆರವಣಿಗೆ ರದ್ದು ಮಾಡಲಾಯಿತು. ವಿಮಾನ ನಿಲ್ದಾಣದಿಂದ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರುಗಳು ಎಂ.ಲಕ್ಷ್ಮಣ್ಗೆ ನಾಮಪತ್ರ ಸಲ್ಲಿಸಲು ಸಾಥ್ ನೀಡಿದರು. ಬಳಿಕ ಟೆರಿಷಿಯನ್ ಕಾಲೇಜು ಬಳಿ ತೆರೆದ ವಾಹನದಲ್ಲೇ ಸಾರ್ವಜನಿಕ ಭಾಷಣ ಮಾಡಿದರು.
ಪತ್ನಿಯಿಂದಲೇ ಸಾಲ ಪಡೆದ ಲಕ್ಷ್ಮಣ್!: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪತ್ನಿಯಿಂದಲೇ ಸುಮಾರು ೨೫ ಲಕ್ಷ ಸಾಲ ಪಡೆದಿದ್ದಾರೆ. ಅವರ ಕೈಯಲ್ಲಿ ೬.೪೫ ಲಕ್ಷ ನಗದು, ವಿವಿಧ ಬ್ಯಾಂಕ್ ಗಳಲ್ಲಿನ ಉಳಿತಾಯ ಖಾತೆ, ಹೂಡಿಕೆ, ವಿಮೆ, ೧೬ ಲಕ್ಷ ಮೌಲ್ಯದ ಒಂದು ಇನ್ನೋವಾ ಕಾರು ಸೇರಿ ಅವರ ಬಳಿ ಸುಮಾರು ೪೬,೬೫,೫೬೩ ಲಕ್ಷ ಆಸ್ತಿ ಚರಾಸ್ಥಿ ಇದೆ. ಯಾದವಗಿರಿಯಲ್ಲಿನ ಮನೆಯ ಆಸ್ತಿ ಮೌಲ್ಯ ೧.೫೦ ಕೋಟಿಯಾಗಿದೆ. ಇನ್ನು ಸಾಲದ ವಿಷಯ ಬಂದರೆ ಲಕ್ಷ್ಮಣ್ ಅವರು ತಮ್ಮ ಪತ್ನಿ ಕೆ.ಎಂ. ರೂಪಶ್ರಿ ಅವರಿಂದಲೇ ೨೪.೩೦ ಲಕ್ಷ ಸಾಲ ಪಡೆದಿದ್ದಾರೆ. ಅಲ್ಲದೆ ರಾಮು ಎಂಬವರ ಬಳಿ ೧೦ ಲಕ್ಷ ಸಾಲ ಪಡೆದಿದ್ದಾರೆ. ಪತ್ನಿ ರೂಪಶ್ರೀ ಅವರ ಬಳಿ ಚಿನ್ನಾಭರಣ, ಬ್ಯಾಂಕಿನ ಮೊಬಲಗು ಸೇರಿ ಒಟ್ಟು ೩೯.೫೦ ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದರೆ. ಮೊದಲ ಮಗಳಾದ ವರ್ಷಿತಾ ಬಳಿ ೪೫.೯೦ ಲಕ್ಷ ಮತ್ತು ದ್ವಿತೀಯ ಪುತ್ರಿ ಆದಿತ್ಯಾ ಬಳಿ ೧೮.೯೬ ಲಕ್ಷದ ಆಸ್ತಿ ಇದೆ ಎಂದು ನಾಮಪತ್ರದಲ್ಲಿ ಸಲ್ಲಿಸಿರುವ ಆದಾಯ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಇಬ್ಬರು ಪಕ್ಷೇತರರಿಂದ ನಾಮಪತ್ರ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬುಧವಾರ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಸೇರಿದಂತೆ ನಾಲ್ವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಿದ್ದಾರೆ. ಸೋಷಿಯಲಿಸ್ಟ್ ಪಕ್ಷದಿಂದ ಎನ್. ಹರೀಶ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕ್ರಿಸ್ಟೋಫರ್ ರಾಜಕುಮಾರ್ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.
===================