ಪ್ರತಿನಿಧಿ ವರದಿ ಕೆ.ಆರ್.ನಗರ
ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಮತ್ತು ಸರಳವಾಗಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ಧಾರ್ ಸಿ.ಎಸ್.ಪೂರ್ಣಿಮಾ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾದಿಗ ಸಂಘಟನೆಗಳು ಮತ್ತು ದಲಿತ ಸಂಘಟನೆಗಳ ಮುಖಂಡರ ಸಲಹೆ ಪಡೆದು ಮಾತನಾಡಿದರು.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಮಹನೀಯರ ಜಯಂತಿಯನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಸರಳವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಏ.5 ರಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ಜಯಂತಿಯನ್ನು ಪಟ್ಟಣದ ಪುರಸಭೆ ಬಳಿ ಇರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಸಮಾಜದ ಎಲ್ಲರ ಸಹಕಾರದಿಂದ ಆಚರಣೆ ಮಾಡಲಾಗುವುದು. ಇದಕ್ಕೆ ಸಮುದಾಯ ಎಲ್ಲ ಮುಖಂಡರು ಸಹಕರಿಸುವಂತೆ ಮನವಿ ಮಾಡಿದರು.
ಅಂದು ಬೆಳಗ್ಗೆ ತಾಲೂಕು ಆಡಳಿತದಿಂದ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರೊಂದಿಗೆ ಪತ್ಥಳಿಗೆ ಮಾಲಾರ್ಪಣೆ ಮಾಡಿ ಮಹನೀಯರ ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ, ಸಿಹಿ ವಿತರಣೆ ಮಾಡುವ ಮೂಲಕ ರಾಷ್ಟ್ರನಾಯಕರಿಗೆ ಗೌರವ ಸಲ್ಲಿಸಲಾಗುವುದು ಎಂದರು.
ಸಹಾಯ ನಿರ್ದೇಶಕರಿಗೆ ತರಾಟೆ: ಬಾಬು ಜಗಜೀವನ ರಾಮ್ ಅವರ ಜಯಂತಿ ಕಾರ್ಯಕ್ರಮ ಏ. 5 ರಂದು ಇದೆ. ಆದರೆ ಕೇವಲ ಒಂದು ದಿನ ಮುಂಚಿತವಾಗಿ ಪೂರ್ವಭಾವಿ ಕರೆಯಲಾಗಿದೆ. ಅಲ್ಲದೆ, ಮುಖಂಡರಿಗೆ ಸಭೆಯ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ. ಇದರಿಂದ ರಾಷ್ಟ್ರ ನಾಯಕರಿಗೆ ಅಗೌರವ ತೋರಿದಂತಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಂ. ಅಶೋಕ್ ಕುಮಾರ್ ಅವರ ಮೇಲೆ ಸಮಾಜದ ಮುಖಂಡರು ಹರಿಹಾಯ್ದು ತರಾಟೆಗೆ ತೆಗೆದುಕೊಂಡರು.
ನಾವು ಜಯಂತಿ ಆಚರಣೆಯಲ್ಲಿ ಭಾಗವಹಿಸುವುದೇ ಇಲ್ಲ. ಬೇರೆ ಜಯಂತಿಗಳಿಗೆ ಬಹಳ ಮುಂಚಿತವಾಗಿ ಸಭೆ ಕರೆದು, ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಆದರೆ ದಲಿತ ಮುಖಂಡರೆಂದು ನೀವು ನಮ್ಮನ್ನು ಕಡೆಗಣಿಸುತ್ತಿದ್ದೀರಿ ಎಂದು ಕಿಡಿಕಾರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಲೋಕೇಶ್, ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ಕುಮಾರ್, ಸಹಕಾರ್ಯದರ್ಶಿ ಕಂಚುಗಾರಕೊಪ್ಪಲುಸ್ವಾಮಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪರಶುರಾಮ್, ಭೂ ನ್ಯಾಯ ಮಂಡಳಿ ಮಾಜಿ ನಿರ್ದೇಶಕ ಸಿದ್ದಾಪುರ ರಮೇಶ್, ಮುಖಂಡರಾದ ಮಾರಗೌಡನಹಳ್ಳಿ ರಾಜೇಶ್, ರವಿಪೂಜಾರಿ, ವಜ್ರೇಶ ಟಿಎಸ್ಡಬ್ಲ್ಯೂ ಎಸ್.ಎಂ.ಅಶೋಕ್ಕುಮಾರ್, ಉಪತಹಸೀಲ್ದಾರ್ ಅಸ್ಲಾಂ ಪಾಷ ಸೇರಿದಂತೆ ಇನ್ನಿತರರು ಹಾಜರಿದ್ದರು.
03 ಕೆಆರ್ಎನ್-1:- ಕೆ.ಆರ್.ನಗರದ ತಾಲೂಕು ಕಚೇರಿಯಲ್ಲಿ ಕರೆಯಲಾಗಿದ್ದ ಡಾ.ಬಾಬು ಜಗಜೀವನ ರಾಮ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್. ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಲೋಕೇಶ್, ಮುಖಂಡ ಕಾಳಯ್ಯ, ಟಿಎಸ್ಡಬ್ಲ್ಯೂ ಎಸ್.ಎಂ.ಅಶೋಕ್ಕುಮಾರ್ ಇನ್ನಿತರರು ಹಾಜರಿದ್ದರು.