ಕೋಲಾರ: ನಿಮ್ಮ ಕಲ್ಯಾಣ ನಿಮ್ಮಿಂದಲೇ ಸಾಧ್ಯ ಹೊರತು ಬೇರೆಯವರಿಂದ ಸಾಧ್ಯವಾಗುವುದಿಲ್ಲ. ನಿಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯ ನೀವೇ ನೋಡಿಕೊಳ್ಳಿ. ಎಷ್ಟೇ ಕೆಲಸದ ಒತ್ತಡವಿದ್ದರೂ ಸ್ವಲ್ಪ ಸಮಯ ನಿಮಗಾಗಿ ಮೀಸಲಿಟ್ಟುಕೊಳ್ಳಿ ಎಂದು ಪೊಲೀಸ್ ಸಿಬ್ಬಂದಿಗೆ ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಬಿ.ಭಾಸ್ಕರ್ ಸಲಹೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನೀವೆಲ್ಲರೂ ಧ್ವಜದ ಸಂಕೇತವಾಗಿದ್ದು, ಪೊಲೀಸರ ಶ್ರಮ, ಸಾಧನೆ, ಗೌರವ, ಪ್ರೀತಿಯನ್ನು ಸಾರ್ವಜನಿಕರು ಗಮನಿಸುತ್ತಾರೆ. ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಸಂವಿಧಾನ ಉಳಿಯುವಲ್ಲಿ ನಮ್ಮ ಪೊಲೀಸರ ಪಾತ್ರ ಮಹತ್ವದ್ದಾಗಿದ್ದು, ಉತ್ತಮ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಗೆ ಎಂ.ನಾರಾಯಣ ಎಸ್ಪಿ ಆಗಿ ಬಂದ ಬಳಿಕ ಅವರಲ್ಲಿದ್ದ ಕಲ್ಪನೆಯನ್ನು ಬಹಳ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದಾರೆ. ನಾವೂ ಸಹ ಹಲವಾರು ಫೆರೇಡ್ನಲ್ಲಿ ಭಾಗಿಯಾಗಿದ್ದು, ಅಧಿಕಾರಿಗಳ ಪರಿಶೀಲನೆ ಎಲ್ಲದರಲ್ಲೂ ಮೆಚ್ಚುಗೆ ಪಡೆದುಕೊಂಡಿದ್ದೆವು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ್, ನ್ಯಾಯಾಧೀಶರು, ಪೊಲೀಸರಿಗೆ ಅವಿನಾಭಾವ ಸಂಬಂಧ. ಯಾವುದೇ ಘಟನೆ ನಿಭಾಯಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿರುತ್ತದೆ ಎಂದರು.
ನಿಮ್ಮ ಕಷ್ಟವನ್ನು ಸಮಾಜ ಗುರುತಿಸುವುದಿಲ್ಲ. ಹಾಗಾಗಿ ನಮಗೆ ನಾವೇ ಸನ್ಮಾನಿಸಿಕೊಳ್ಳಬೇಕು. ನಾವು ನಡೆಸುವ ತನಿಖೆ, ತೀರ್ಪು ಎಲ್ಲವೂ ತಾತ್ಕಾಲಿಕ ಅಷ್ಟೇ ಅದನ್ನು ಮನಸ್ಸಲ್ಲಿಟ್ಟುಕೊಂಡು ಉತ್ತಮವಾಗಿ ಕೆಲಸ ಮಾಡಿ. ನಿವೃತ್ತಿಯಾದ ಕುಟುಂಬಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಆಶಿಸಿದರು.
೫ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಬಳಿಕ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಕಲ್ಯಾಣ ಕೇಂದ್ರ, ಪೊಲೀಸ್ ಕ್ಯಾಂಟೀನ್, ಪೊಲೀಸ್ ಗ್ರಂಥಾಲಯ, ಪೊಲೀಸ್ ಟೈಪಿಂಗ್ ಇನ್ಸಿಟ್ಯೂಟ್, ಪೊಲೀಸ್ ಬ್ಯಾಂಡ್, ಎ.ಎಸ್.ಸಿ. ತಂಡ. ಪೊಲೀಸ್ ಮೆಡಿಕಲ್ ಸ್ಟೋರ್, ಪೊಲೀಸ್ ಸಮುದಾಯ ಭವನದ ಅಧಿಕಾರಿ, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ, ಸುನೀಲ್ ಹೊಸಮನಿ, ಎಎಸ್ಪಿಗಳಾದ ಸಿ.ಆರ್.ರವಿಶಂಕರ್, ಎಚ್.ಸಿ.ಜಗದೀಶ್, ಡಿವೈಎಸ್ಪಿಗಳಾದ ನಾಗ್ತೆ, ನಂದಕುಮಾರ್ ಉಪಸ್ಥಿತರಿದ್ದರು.