ಗುಂಡ್ಲುಪೇಟೆ : ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಜನರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಗುರುವಾರದಂದು ನೆರವೇರಿತು.
ಅಡ್ಡ ಪಲ್ಲಕ್ಕಿಯಲ್ಲಿ ಹಿಮವದ್ ಗೋಪಾಲ ಸ್ವಾಮಿಯ ಉತ್ಸವ ಮೂರ್ತಿಯನ್ನು ಇರಿಸಿ ಮಂಗಳ ವಾದ್ಯ, ತಮಟೆ, ಜಾಗಟೆ ಇತರೆ ಕಲಾತಂಡಗಳೊಂದಿಗೆ ಭಕ್ತರು ರಥವನ್ನು ಎಳೆದರು. ದೇವಾಲಯದಲ್ಲಿ ಉತ್ಸವ ಮೂರ್ತಿಯ ಇರಿಸಿ, ಪೂಜೆ ಸಲ್ಲಿಸಿ, ಧ್ವಜಪತಾಕೆ, ಫಲಪುಷ್ಪ ಮತ್ತು ಹೂಗು ಚ್ಛಗಳಿಂದ ಅಲಂಕೃತಗೊಂಡ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಇರಿಸಿ ಮಂಗಳಾರತಿ ನೆರವೇರಿಸಲಾಯಿತು. ನಂತರ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್ಟರು ಹಾಗೂ ಅವರ ತಂಡ ಬೆಟ್ಟದ ಜಾತ್ರಾ ಮಹೋತ್ಸವ ಹಾಗೂ ಪರಮ ರಥೋತ್ಸವದ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.
ರಥೋತ್ಸವ ಹಿನ್ನೆಲೆ ಕಳೆದ ಒಂದು ವಾರಗಳ ಹಿಂದೆಯಿಂದಲೇ ದೇವಾಲಯದಲ್ಲಿ ಹಲವು ಧಾರ್ಮಿಕ ಕಾರ್ಯಗಳು ನಡೆದುಕೊಂಡು ಬಂದಿದ್ದವು. ಸಂಪ್ರದಾಯದಂತೆ ಭಕ್ತರು ಹರ್ಷೋದ್ಧಾರಗಳೊಂದಿಗೆ ರಥ ಎಳೆದು ಮುಂದೆ ಸಾಗಿದರು.
ಸುರಪಾನಿ ಕಲಾತಂಡಗಳ ಮೆರವಣಿಗೆ ಹಾಗೂ ರಥ ಕ್ಕೆ ಹಣ್ಣುಗಳನ್ನು ಎಸೆಯುವ ಮೂಲಕ ಪ್ರಾರ್ಥಿಸಿದರು. ಒಂದು ಸುತ್ತು ಪ್ರದಕ್ಷಿಣೆ ನಂತರ ಮೂಲ ಸ್ಥಾನದಲ್ಲಿ ರಥೋತ್ಸವವನ್ನು ಕೊನೆಗೊಳಿಸಲಾಯಿತು.
ರಥದ ತಯಾರಿ: ವಾಡಿಕೆಯಂತೆ ತಾಲ್ಲೂಕಿನ ಗೋಪಾಲಪುರ, ಕನ್ನೆಗಾಲ , ಕುಣಗಳ್ಳಿ, ಹೊನ್ನೇಗೌಡನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮದ ಭಕ್ತಾದಿಗಳು ಕಾಡಿನಹಂಬು, ರಥದ ಶೃಂಗಾರಕ್ಕೆ ಬೇಕಾದ ಪಣತಾರು, ಬಿದಿರು ಸೇರಿದಂತೆ ಇತರೆ ಕಡ್ಡಿಗಳನ್ನು ಅರಣ್ಯದಿಂದ ತಂದು ತೇರು ಸಿದ್ದಗೊಳಿಸುವ ಮೂಲಕ ರಥೋತ್ಸವಕ್ಕೆ ಜರುಗಿತು.
ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ : ಈ ವರ್ಷದ ಮಳೆ ತಡವಾದ ಹಿನ್ನಲೆ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು ಬರಡಾಗಿರುವ ಅರಣ್ಯವನ್ನು ರಕ್ಷಿಸಲು ಅರಣ್ಯ ಇಲಾಖೆಯ ವತಿಯಿಂದ ರಥೋತ್ಸವದ ಸಂದರ್ಭದಲ್ಲಿ ಬೆಂಕಿ ಅವಘಡ ಮತ್ತು ವನ್ಯ ಪ್ರಾಣಿಗಳ ಚಲನ ವಲನ ಹಿನ್ನೆಲೆಯಲ್ಲಿ ದೇವಾಲಯದ ಆವರಣ ಹೊರತುಪಡಿಸಿ ಭಕ್ತರಿಗೆ ಅರಣ್ಯದೊಳಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು.
ಸೂಕ್ತ ಸಾರಿಗೆ ವ್ಯವಸ್ಥೆ : ತಾಲೂಕು ಆಡಳಿತ ವತಿಯಿಂದ ಬೆಟ್ಟದಲ್ಲಿ ನಡೆಯುವ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುವ ಅಂಗವಾಗಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶ ಇಲ್ಲದಿರುವುದರಿಂದ ಬೆಟ್ಟದ ತಪ್ಪಲಿನಿಂದ ಭಕ್ತಾದಿಗಳಿಗೆ ಬೆಟ್ಟಕ್ಕೆ ತೆರಳರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಬೆಟ್ಟಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿತ್ತು.
ಪ್ಲಾಸ್ಟಿಕ್ ನಿಷೇಧ: ಬಂಡಿಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುವ ಹಿಮವದ್ ಗೋಪಾಲಸ್ವಾಮಿ ದೇವಾಲಯದಲ್ಲಿ ಜಿಲ್ಲಾಡಳಿತ ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಣೆ ಮಾಡಿರುವ ಹಿನ್ನೆಲೆ ದೇವಾಲಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿತ್ತು.
ಸೂಕ್ತ ಬಂದೂಬಸ್ತ್ ವ್ಯವಸ್ಥೆ : ಪ್ರಸಿದ್ಧ ಗೋಪಾಲ್ ಸ್ವಾಮಿ ಬೆಟ್ಟದಲ್ಲಿ ಜರುಗಿದ ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತಾದಿಗಳು ಹಾಗೂ ತಾಲೂಕಿನ ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾದಿಗಳು ಮತ್ತು ಅರಣ್ಯ ಇಲಾಖೆ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಬ್ರಹ್ಮರಥೋತ್ಸವದಲ್ಲಿ ಭಾಗಿಯಾಗಿದ್ದರು
ಫೋಟೋ ಇದೆ