ಚಿಕ್ಕಮಾಳಿಗೆ ಕೊಳ್ಳೇಗಾಲ
ತಾಲೂಕಿನ ಹರಳೆ ಗ್ರಾಮದ ಪರಿಶಿಷ್ಟಜಾತಿಯ ಹೊಸ ಬೀದಿಯಲ್ಲಿ ಕಾವೇರಿ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆ (ಜೆಜೆಎಂ) ಅನುಷ್ಠಾನ ಅಪೂರ್ಣವಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.
ಎರಡು ವರ್ಷದ ಹಿಂದೆ ಜೆಜೆಎಂ ಯೋಜನೆ ಅನುಷ್ಠಾನಕ್ಕೆ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಿರಾಸಕ್ತಿ ಹೊಂದಿದ್ದರು. ಇದು ಸರಿಯಲ್ಲ, ಸರ್ಕಾರದ ಈ ಯೋಜನೆಯನ್ನು ಪಡೆದುಕೊಳ್ಳಿ ಎಂದು ಕೊಳ್ಳೇಗಾಲ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಅಧಿಕಾರಿಗಳು ಆರಂಭದಿಂದಲೂ ಜನರ ಮನವಲಿಕೆಗೆ ಮುಂದಾಗಿದ್ದರು. ಆದರೆ, ಜೆಜೆಎಂ ಕಾಮಗಾರಿ ಅನುಷ್ಠಾನಕ್ಕೆ ಅವಕಾಶ ಸಿಕ್ಕಿರಲಿಲ್ಲ.
ಈ ನಡುವೆ, ಅದೇಗೋ ಏನೋ ಕೆಲ ತಿಂಗಳಿಂದ ಹರಳೆ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಆರಂಭಗೊಂಡು ವಿವಿಧ ಬೀದಿಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಮಾಡಲಾಗಿದ್ದು, ಸಾಕಷ್ಟು ಮನೆಗೆ ಕುಡಿಯುವ ನೀರು ಪೂರೈಸುವ ನಲ್ಲಿಯನ್ನು ಅಳವಡಿಸಲಾಗಿದೆ. ಆದರೆ, ಗ್ರಾಮದ ಪರಿಶಿಷ್ಟಜಾತಿಯ ಹೊಸ ಬೀದಿಯ 15ಕ್ಕೂ ಹೆಚ್ಚು ಮನೆಗಳಿಗೆ ಇನ್ನೂ ಅಧಿಕಾರಿಗಳು ಜೆಜೆಎಂ ಯೋಜನೆಯಡಿ ನಲ್ಲಿಗಳನ್ನು ಅಳವಡಿಸಿಲ್ಲ.
ಇದರಿಂದ ನಿವಾಸಿಗಳು ಬಿರು ಬೇಸಿಗೆ ವೇಳೆಯಲ್ಲಿ ಕುಡಿಯುವ ನೀರಿನ ಸೌಲಭ್ಯಕ್ಕೆ ಪರದಾಡುವ ಸ್ಥಿತಿಯಲ್ಲಿದ್ದಾರೆ. ಆದರೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಇತ್ತ ಸೂಕ್ತ ಗಮನಹರಿಸದಿರುವುದು ವಿಷಾದನೀಯ ಸಂಗತಿಯಾಗಿದ್ದು, ಇನ್ನಾದರೂ ತಾಲೂಕು ಆಡಳಿತ ಈ ಯೋಜನೆ ಅನುಷ್ಠಾನವನ್ನು ಪೂರ್ಣಗೊಳಿಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ಕೋಟ್:
ಹರಳೆ ಗ್ರಾಮದ ಎಸ್ಸಿ ಸಮುದಾಯದ ಬೀದಿಯ 15 ಮನೆಗಳಿಗೆ ಇನ್ನೂ ಜೆಜೆಎಂ ಯೋಜನೆಯಡಿ ನಲ್ಲಿಗಳನ್ನು ಅಳವಡಿಸಿಕೊಟ್ಟಿಲ್ಲ ಎಂಬುದರ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಹರಳೆ ಪಿಡಿಒ ರಾಜಮಣಿ ಅವರೊಂದಿಗೆ ಸಮಾಲೋಚಿಸಿದ್ದು, ಕೂಡಲೇ ಪಂಚಾಯತ್ ರಾಜ್ ಇಲಾಖೆಯ ಎಇಇ ಹರೀಶ್ ಕುಮಾರ್ ಅವರೊಂದಿಗೆ ಚರ್ಚಿಸಿ ಶೀಘ್ರವೇ ಕುಡಿಯುವ ನೀರು ಪೂರೈಸಲು ಸೂಚನೆ ನೀಡಿದ್ದೇನೆ ಮತ್ತು ಹರೀಶ್ ಕುಮಾರ್ ಅವರಿಗೂ ದೂರವಾಣಿ ಕರೆ ಮಾಡಿ ಯೋಜನೆ ಪೂರ್ಣ ಅನುಷ್ಠಾನಕ್ಕೆ ಕ್ರಮವಹಿಸಲು ತಿಳಿಸಲಾಗಿದೆ.
–ಶ್ರೀನಿವಾಸ್, ಇಒ, ತಾಪಂ ಕಚೇರಿ, ಕೊಳ್ಳೇಗಾಲ ತಾಲೂಕು