– ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಮನವಿ
– ಮೈಸೂರು ವಕೀಲರ ಸಂಘದಲ್ಲಿ ಮತಯಾಚನೆ
ಪ್ರತಿನಿಧಿ ವರದಿ ಮೈಸೂರು
ವಕೀಲರು ಸಮಸ್ಯೆಗಳಿಗೆ ತಾವು ಸ್ಪಂದಿಸಲಿದ್ದು, ವಕೀಲರ ಸೇವೆ ಮಾಡಲು ತಮಗೆ ಅವಕಾಶ ನೀಡುವಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮನವಿ ಮಾಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ನ್ಯಾಯಾಲಯದ ಆವರಣದಲ್ಲಿರುವ ಮೈಸೂರು ವಕೀಲರ ಸಂಘಕ್ಕೆ ಭೇಟಿ ನೀಡಿ ಗುರುವಾರ ಮತಯಾಚನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಗೆ ಬೆಂಬಲ ಸೂಚಿಸುವ ಮೂಲಕ ಮತ ನೀಡಿ. ನಾನು ಪಾರ್ಲಿಮೆಂಟ್ನಲ್ಲಿ ಸುಮ್ಮನೆ ಕುಳಿತು ಬರುವುದಿಲ್ಲ, ರಾಜ್ಯದ ಜನತೆಯ ಪರವಾಗಿ, ರಾಜ್ಯದ ಅಭಿವೃದ್ಧಿಯ ಪರವಾಗಿ ಮಾತನಾಡುತ್ತೇನೆ. ತಾವೆಲ್ಲರೂ ಮತ ನೀಡಿ ನನ್ನನು ಗೆಲ್ಲಿಸಿದ್ದಲ್ಲಿ ಸದಾ ಜನರ ಪರವಾಗಿದ್ದು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆಗಿದ್ದ ಅವಧಿಯಲ್ಲಿ ಮೈಸೂರಿಗೆ 3,800 ಕೋಟಿ ರೂ. ಅನುದಾನ ನೀಡಿದ್ದಾರೆ. ನಗರದಲ್ಲಿ ಜಯದೇವ ಆಸ್ಪತ್ರೆ, ನಗರದ ಕಾಂಕ್ರೀಟ್ ರಸ್ತೆ, ಮಹಾರಾಣಿ ಕಾಲೇಜು, ವಿದ್ಯಾರ್ಥಿನಿಲಯ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಮೈಸೂರು-ಕೊಡಗು ಜಿಲ್ಲೆಯನ್ನು ಪ್ರವಾಸೋದ್ಯಮ ಸ್ಥಳವನ್ನಾಗಿ ನಿರ್ಮಿಸಲು ಉತ್ತಮವಾದ ಅವಕಾಶವಿದೆ. ಇದರ ಜೊತೆಗೆ ಒಂದು ಲಕ್ಷ ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ವಾತಾವರಣ ಸಹ ಇದೆ. ಆದರೆ ಈ ಕಾರ್ಯಕ್ಕೆ ಹಿಂದಿನ ಸಂಸದರು ಪ್ರಯತ್ನಿಸಲಿಲ್ಲ. ಈ ಮಹತ್ವದ ಕಾರ್ಯವನ್ನು ಮಾಡುವಲ್ಲಿ ನಾನು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಲಕ್ಷ್ಮಣ್ ಗೆಲುವಿಗೆ ಸಹಕರಿಸಿ: ಶಾಸಕ ತನ್ವೀರ್ ಸೇಠ್ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಸರ್ಕಾರದ ಸೌಲಭ್ಯ ದೊರೆಯಬೇಕು ಎಂಬಂತಹ ಮೂಲ ಉದ್ದೇಶವನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಸರ್ಕಾರವನ್ನು ನಡೆಸುತ್ತಿದೆ. ಸಮಾಜದ ಬಡತನವನ್ನು ನಿರ್ಮೂಲನೆ ಮಾಡಿ, ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಬೇಕು. ಶಿಕ್ಷಣದ ಸೌಲಭ್ಯ ಎಲ್ಲರಿಗೂ ಸಿಗಬೇಕು ಎಂಬಂತಹ ಸಂವಿಧಾನದ ಆಶಯದಂತೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಲಕ್ಷ್ಮಣ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಲಕ್ಷ್ಮಣ್ ಅವರು ಮೈಸೂರಿನ ಹಲವು ಸಮಸ್ಯೆಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿರುವ ಅವರಿಗೆ ಹೆಚ್ಚಿನ ಸಹಕಾರ ನೀಡಿ, ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ವಕೀಲರು ಬೆಂಬಲ ನೀಡೋಣ: ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಮಾತನಾಡಿ, ಲಕ್ಷ್ಮಣ್ ಅವರು ಕಳೆದ 30 ವರ್ಷಗಳಿಂದ ಮೈಸೂರು ನಗರದ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಅವರ ಹೋರಾಟ ಮತ್ತು ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿದ್ದೇನೆ. ಲಕ್ಷ್ಮಣ್ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಅವರಿಗೆ ಮೈಸೂರು ವಕೀಲರ ಸಂಘದಿಂದ ಸಂಪೂರ್ಣ ಬೆಂಬಲ ನೀಡಿ, ಅವರ ಗೆಲುವಿಗೆ ಎಲ್ಲರೂ ಸಹಕರಿಸೋಣ ಎಂದರು.
ಈ ಸಂದರ್ಭದಲ್ಲಿ ಮೈಸೂರು ವಕೀಲ ಸಂಘದ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಮೇಯರ್ ಪುರುಷೋತ್ತಮ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಕಾರ್ಯದರ್ಶಿ ಎ.ಜಿ.ಸುಧೀರ್, ಉಪಾಧ್ಯಕ್ಷ ಚಂದ್ರಶೇಖರ್, ಮಾಜಿ ಕಾರ್ಯದರ್ಶಿ ಎಸ್. ಉಮೇಶ್, ಹಿರಿಯ ವಕೀಲರಾದ ಚಂದ್ರಮೌಳಿ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಇತರರಿದ್ದರು.
ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ: ಯದುವೀರ್ ಒಡೆಯರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಕುರಿತಾಗಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಹೇಳಿದರು. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರು ನಮ್ಮ ಪಕ್ಷದವರಲ್ಲ, ಬಿಜೆಪಿಯಿಂದ ಎಂಎಲ್ಸಿ ಆಗಿದ್ದಾರೆ. ಬಿಜೆಪಿ ಅವರಾಗಿ ಅವರು ಬಿಜೆಪಿ ಅಭ್ಯರ್ಥಿಯ ಪರವಾಗಿ ನಿಲ್ಲುವುದು ಸಹಜ. ನನ್ನ ಪರವಾಗಿ ಸಿಎಂ, ಡಿಸಿಎಂ ಹಾಗೂ ಇತರ ನಾಯಕರು, ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳು, ಜನಪರ ಆಡಳಿತ ನನ್ನ ಕೈಹಿಡಿಯಲಿವೆ ಎಂಬ ನಂಬಿಕೆ ಇದೆ ಎಂದರು.
ನಾನು ಒಕ್ಕಲಿಗ ಅಲ್ಲ ಎನ್ನುವುದಾದರೆ ಪ್ರತಾಪ್ ಸಿಂಹ ಸಾಬೀತುಪಡಿಸಲಿ. ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದಿದ್ದು, ಆದಷ್ಟು ಬೇಗ ನನ್ನನ್ನು ಜೈಲಿಗೆ ಕಳುಹಿಸಿ. ನನ್ನ ಬಗ್ಗೆ ಮಾತನಾಡುವ ಬದಲು ನಿಮಗೆ ಟಿಕೆಟ್ ಮಿಸ್ ಮಾಡಿದ್ದು ಯಾರು ಅಂತ ಹೇಳಿ.
ಎಂ. ಲಕ್ಷ್ಮಣ್, ಕಾಂಗ್ರೆಸ್ ಅಭ್ಯರ್ಥಿ