– ಪೋಷಕರಿಗೆ ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಗಿ ಕರೆ
– ನೈಪುಣ್ಯ ಶಿಕ್ಷಣ ಸಂಸ್ಥೆಯ 2ನೇ ವಾರ್ಷಿಕೋತ್ಸವ
ಪ್ರತಿನಿಧಿ ವರದಿ ಮೈಸೂರು:
ಮಕ್ಕಳಿಗೆ ಸಂಸ್ಕಾರ, ಸನ್ನಢತೆ ರೂಪಿಸುವುದು ಪೋಷಕರ ಮೊದಲ ಆದ್ಯತೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ಮಗುವಿನ ತಾಯಿ ವಿಶೇಷ ಗಮನ ಹರಿಸಬೇಕಿದೆ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ್ ಕರ್ಜಗಿ ಹೇಳಿದರು.
ನಗರದ ಕಲಾಮಂದಿರದಲ್ಲಿ ಸಮಗ್ರ ಕರ್ನಾಟಕ, ಸಹೋದರ ಕರ್ನಾಟಕ ಶೀರ್ಷಿಕೆಯಲ್ಲಿ ನಡೆದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಶಿಕ್ಷಣ ಸಂಸ್ಥೆಯ 2ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಫಲಪ್ರದ ಶಿಕ್ಷಣದಲ್ಲಿ ಪೋಷಕರ ಪಾತ್ರ ಅಗಾಧವಾಗಿದ್ದು, ತಮ್ಮ ಮಕ್ಕಳಲ್ಲಿ ಒಳ್ಳೆಯ ಅಭ್ಯಾಸಗಳನ್ನು ಚಿಕ್ಕಂದಿನಿಂದಲೇ ರೂಢಿಸಬೇಕು. ಪೋಷಕರು ಮಕ್ಕಳಿಗೆ ಪ್ರಾಮಾಣಿಕತೆ, ಸಂಸ್ಕಾರವಂತ ನಡವಳಿಕೆಗಳನ್ನು ಕಲಿಸುವತ್ತ ಗಮನಹರಿಸಬೇಕು. ಒಳ್ಳೆಯ ಅಭ್ಯಾಸ ರೂಢಿಸಿದರೆ ಮಹಾನ್ ವ್ಯಕ್ತಿಗಳಾಗುತ್ತಾರೆ. ಪ್ರತಿಯೊಂದು ಮಗುವೂ ವಿಶ್ವ ಪ್ರಜೆ ಎನ್ನುವುದು ಪೋಷಕರು ಹಾಗೂ ಶಿಕ್ಷಕರ ಅರಿವಿನಲ್ಲಿರಬೇಕು ಎಂದರು.
ಅದೇ ರೀತಿಯಾಗಿ ಪೋಷಕರೂ ಸಹ ಮಕ್ಕಳ ಮುಂದೆ ಜವಾಬ್ದಾರಿಯಿಂದ ವರ್ತಿಸಬೇಕು. ಮಕ್ಕಳಿಗೆ ಅವರು ಮಾಡುವ ಕೆಲಸದಲ್ಲಿ ಶೃದ್ಧೆ ಮತ್ತು ನಂಬಿಕೆ ಬೆಳೆಸಬೇಕು ಎಂದ ಅವರು, “ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ, ಚಿತ್ತದೊಳು ಬೆಳೆದರಿವು ತರ ತಳೆದ ಪುಷ್ಪ” ಎಂಬ ಡಿವಿಜಿ ಅವರ ಸಾಲಿನಂತೆ ಪುಸ್ತಕಕ್ಕಿಂತ ಮಸ್ತಕದ ಅರಿವು ಶಾಶ್ವತವಾಗಿದೆ. ಈ ನಿಟ್ಟಿನಲ್ಲಿ ನೈಪುಣ್ಯ ಶಾಲೆಯಲ್ಲಿ ಬಿತ್ತನೆ ಮಾಡಿ, ಬೆಳೆಯುವುದನ್ನು ಪ್ರಾಯೋಗಿಕವಾಗಿ ಕಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಆರ್.ರಘು ಮಾತನಾಡಿ, ಮಕ್ಕಳ ಆಸಕ್ತಿ ವಲಯವನ್ನು ಗುರುತಿಸಿ ಅದನ್ನು ಸಕಾರಾತ್ಮಕವಾಗಿ ಬೆಳೆಸಬೇಕಿದ್ದು, ಇದರಲ್ಲಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಸಮಾನವಾಗಿದೆ. ಮಕ್ಕಳ ಬುದ್ದಿಗೆ ಮಂಕು ತರಿಸುವ ಸ್ಮಾರ್ಟ್ ಫೋನ್ಗಳನ್ನು ದೂರವಿಡಬೇಕಿದೆ. ಪ್ರತಿಯೊಂದು ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಗಿದ್ದು, ಶಿಕ್ಷಣದ ಜೊತೆಗೆ ಸುಪ್ತ ಪ್ರತಿಭೆಗೆ ನೀರೆರೆದು ಪೋಷಿಸುವುದು ನಮ್ಮ ಸಂಸ್ಥೆ ಉದ್ದೇಶ ಎಂದರು.
ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕದ ಗಡಿನಾಡುಗಳ ಸಂಸ್ಕೃತಿಯ ಅನಾವರಣವಾಯಿತು. ವೀರಗಾಸೆ, ಕಂಸಾಳೆ, ಕೋಲಾಟ, ಭರತನಾಟ್ಯ ಸೇರಿದಂತೆ ನಾಡಿನ ಎಲ್ಲ ಕಲಾಪ್ರಕಾರಗಳನ್ನು ಮಕ್ಕಳು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಕಾಡೆಮಿಕ್ ಡೀನ್ ವಿಜಯಾ ಅಯ್ಯರ್, ಪ್ರಾಂಶುಪಾಲರಾದ ಶೋಭಿತಾ ಎಸ್.ಆರಾಧ್ಯ, ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ಭಾವನಾ ಶ್ರೀಕಾಂತ್ ಮತ್ತಿತರರು ಇದ್ದರು.
=================