ಪ್ರತಿನಿಧಿ ವರದಿ ಮೈಸೂರು
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಮಹಿಷ ದಸರಾ ಆಚರಣಾ ಸಮಿತಿ ಮನವಿ ಮಾಡಿದೆ.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ದಲಿತ ಸಮುದಾಯಗಳು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಚುನಾವಣೆ ವೇಳೆ ಮಹತ್ವದ ಪಾತ್ರವಹಿಸಲಿದ್ದಾರೆ. ಸಂವಿಧಾನ ಜಾರಿಯಾಗಿ ಆಡಳಿತ ಆರಂಭವಾದ ಬಳಿಕ ಇಡೀ ದೇಶವನ್ನು ನಿರುದ್ಯೋಗ, ಭ್ರಷ್ಟಾಚಾರ, ಬಡತನಕ್ಕೆ ತಳ್ಳಿದ ಏಕೈಕ ಪ್ರಧಾನಿ ಮೋದಿ ಅವರಾಗಿದ್ದಾರೆ. ಹೀಗಾಗಿ ಯುವಜನತೆ ಎಚ್ಚರಿಕೆಯಿಂದ ಮತ ನೀಡಬೇಕೆಂದು ಕೋರಿದರು.
ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ದೇಶದಲ್ಲಿ ದಲಿತರು, ಹಿಂದುಳಿದವರು, ಬಡಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇವರ ಜೀವನ ಸುಧಾರಣೆ ಆಗಬೇಕೆಂದರೆ ಕಾಂಗ್ರೆಸ್ಗೆ ಮತ ನೀಡಬೇಕಾದ ಅಗತ್ಯವಿದೆ. ಕಾಂಗ್ರೆಸ್ ಗ್ಯಾರಂಟಿಯಿಂದ ಎಷ್ಟೋ ಬಡಜನರಿಗೆ ಅನುಕೂಲವಾಗಿದೆ. ಹೀಗಾಗಿ ಇಡೀ ದೇಶಾದ್ಯಂತ ಇದೇ ರೀತಿಯ ಗ್ಯಾರಂಟಿ ಜಾರಿಗೊಳಿಸಲು ಹೊರಟಿರುವುದು ಸ್ವಾಗತಾರ್ಹ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರೊ. ಮಹೇಶ್ ಚಂದ್ರಗುರು, ಸಿದ್ದಸ್ವಾಮಿ, ಚಿಕ್ಕಂದಾನಿ ಇದ್ದರು.
=================
ನಿರೀಕ್ಷಿತ ಆಡಳಿತ ನಡೆಸದ ಬಿಜೆಪಿ
ಪ್ರತಿನಿಧಿ ವರದಿ ಮೈಸೂರು
ದೇಶದಲ್ಲಿ ಹತ್ತು ವರ್ಷಗಳ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರ ದೇಶವನ್ನು ಅಧೋಗತಿಗೆ ತಂದು ಸಿಲುಕಿಸಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡುವಂತೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೋಷಿತ ಸಮುದಾಯಗಳು ನಿರ್ಣಾಯಕವಾಗಬೇಕಿದೆ. ಬಿಜೆಪಿ ಸರ್ಕಾರ ಕಳೆದ 10 ವರ್ಷದಲ್ಲಿ ನಿರೀಕ್ಷಿತ ಆಡಳಿತ ನಡೆಸಿಲ್ಲ. ನೀಡಿದ್ದ ಭರವಸೆ ಈಡೇರಿಸುವ ಬದಲಾಗಿ ಜನವಿರೋಧಿಯಾಗಿ ಆಡಳಿತ ನಡೆಸಿದೆ. ಅಲ್ಲದೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸತತ ದ್ರೋಹವೆಸಗಿದ್ದು, ಬಿಜೆಪಿ ಅಕ್ರಮ ಸಂಪತ್ತನ್ನು ಕ್ರೋಢೀಕರಿಸಿಕೊಂಡು ಶ್ರೀಮಂತ ಪಕ್ಷವಾಗಿ ಬೆಳೆದಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಧರ್ಮದ ಹೆಸರಿನಲ್ಲಿ ದ್ವೇಷ, ಗಲಭೆ, ದೌರ್ಜನ್ಯ ಹೆಚ್ಚಿಸಲಾಗಿದೆ. ಹೀಗಾಗಿ ಬಿಜೆಪಿಯನ್ನು ಸೋಲಿಸಲು ಮತದಾರರು ಕಾಂಗ್ರೆಸ್ಗೆ ಮತ ನೀಡಬೇಕೆಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ, ಎನ್. ಅನಂತನಾಯ್ಕ್ ಇದ್ದರು.
==================
12ರಂದು ಮುಗ್ಧ ಮನಸ್ಸು ಚಿತ್ರ ಬಿಡುಗಡೆ
ಪ್ರತಿನಿಧಿ ವರದಿ ಮೈಸೂರು
ನಿರ್ದೇಶಕ ಆರ್.ಸಿ. ರಂಗಶೇಖರ್ ನಿರ್ದೇಶನದಲ್ಲಿ ಮೂಡಿಬಂದಿರುವ ಮುಗ್ಧ ಮನಸ್ಸು ಚಿತ್ರ ಏ.12ರಂದು ರಾಜ್ಯಾಧ್ಯಂತ ಬಿಡುಗಡೆಗೊಳ್ಳಲಿದೆ. ನಾಯಕನಾಗಿ ಮೋಹನ್, ನಾಯಕಿಯಾಗಿ ಮಾನ್ಯ ನಟಿಸಿದ್ದಾರೆ. ಪ್ರೀತಿಯನ್ನು ಕೊನೆವರೆಗೂ ಹೇಗೆ ಉಳಿಸಿಕೊಂಡು ಹೋಗಬಹುದು ಎಂಬ ಎಳೆಯ ಮೇಲೆ ಚಿತ್ರ ಸಾಗುತ್ತದೆ. ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದ್ದು, ಚಿತ್ರದಲ್ಲಿ 5 ಹಾಡುಗಳಿವೆ. ೫೦ಕ್ಕೂ ಹೆಚ್ಚು ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಇದೊಂದು ಕಾಲ್ಪನಿಕ ಕಥೆ ಆಧರಿಸಿದ ಚಿತ್ರ ಎಂದು ನಿರ್ದೇಶಕ ರಂಗಶೇಖರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ನಿರ್ಮಾಪಕ ವೆಂಕಟೇಶ್, ಚಿತ್ರ ತಂಡದ ಭೈರೇಗೌಡ, ಲೋಕೇಶ್ ಹಾಜರಿದ್ದರು.
=================
1. ಮಹಿಷಾ ದಸರಾ ಸಮಿತಿ
2. ಶೋಷಿತ ಸಮುದಾಯಗಳ ಮಹಾ ಒಕ್ಕೂಟ
3. ಮುಗ್ದ ಮನಸ್ಸು ಚಿತ್ರತಂಡ