ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರ್ನಾಟಕವನ್ನು ಪಾಕಿಸ್ತಾನಗಿಂತ ಕಡೆ ಮಾಡಿದ್ದಾರೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹನುಮಾನ್ ಚಾಲೀಸ್ ಪಠಣೆ ಮಾಡಿದವರ ಮೇಲೆ ಎಫ್ಐಆರ್ ಹಾಕುತ್ತೀರಿ. ಇದು ತುಷ್ಟೀಕರಣದ ಪರಾಕಾಷ್ಠೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರು ಬೇಕಾದರೂ 6 ಗಂಟೆಗೆ ಎದ್ದು ನಮಾಜ್ ಮಾಡಬಹುದು. ನೀವು ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದೀರಾ ಅಥವಾ ಇದನ್ನು ಇಸ್ಲಾಮಿಕ್ ರಾಷ್ಟ್ರ ಅಂದ್ಕೊಂಡಿದ್ದೀರಾ? ಸಿಎಂ ಸಿದ್ದರಾಮಯ್ಯ ಅವರ ನಡೆಯನ್ನು ಖಂಡಿಸುತ್ತೇನೆ. ಇದು ವೋಟ್ಬ್ಯಾಂಕ್ ರಾಜಕಾರಣ ಎಂದರು.
ನನ್ನ ಮಕ್ಕಳು ರಾಹುಲ್ ಗಾಂಧಿ ತರ ಆಗಬೇಕೆಂಬ ಸಚಿವ ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ, ಅವರು ಹಾಗೆ ಹೇಳದೆ ಹೋದರೇ ಅವರ ನೌಕರಿ ಹೋಗುತ್ತೆ. 75 ವರ್ಷ ಇವರು ಸುಳ್ಳು ಹೇಳಿದ್ದಾರೆ. ನೀವು ಸತ್ಯಹರಿಶ್ಚಂದ್ರರಾಗಿದ್ದರೆ ಜನರು ಯಾಕೆ ನಿಮ್ಮನ್ನು ಮೂಲೆಗುಂಪು ಮಾಡುತ್ತಿದ್ದರು. ನೀವು ಹುಚ್ಚರ ರೀತಿ ಮಾತಾಡಿದ್ದಕ್ಕೆ ಜನ ಸೋಲಿಸಿದ್ದಾರೆ. ಕಾಂಗ್ರೆಸ್ನವರು ಮೋಸಗಾರರು. ಸುಳ್ಳು ಹೇಳಿ ರಾಹುಲ್ ಗಾಂಧಿ ಫಾರಿನ್ಗೆ ಹೋಗುತ್ತಾರೆ ಎಂದು ಕಿಡಿ ಕಾರಿದರು.
ನಿಮ್ಮ ಪರಸ್ಥಿತಿ ಏನಾಗಿದೆ ಇವತ್ತು, ಉತ್ತರ ಪ್ರದೇಶದಲ್ಲಿ ರಾಬರ್ಟ್ ವಾದ್ರಾ ಸೋಲುತ್ತಾರೆ. ನಿಮ್ಮ ಜೊತೆ ನಮ್ಮ ಓರ್ವ ಕಾರ್ಯಕರ್ತ ಬಹಿರಂಗ ಚರ್ಚೆ ಮಾಡುತ್ತಾನೆ. ನಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನ ಎಷ್ಟು? ಮತ್ತು ನಿಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನ ಬಗ್ಗೆ ಚರ್ಚೆ ಆಗಲಿ. ನೀವು 75 ವರ್ಷಗಳಲ್ಲಿ 65 ವರ್ಷ ಸುಳ್ಳು ಹೇಳಿದ್ದೀರಿ. ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಬೇಡಿ. ದಿಂಗಾಲೇಶ್ವರ ಸ್ವಾಮೀಜಿ ಬಗ್ಗೆ ನನಗೇನೂ ಗೊತ್ತಿಲ್ಲ. ಅದರ ಬಗ್ಗೆ ನಾನು ಏನೂ ಮಾತಾಡಲ್ಲ ಎಂದರು.