ಪ್ರತಿನಿಧಿ ವರದಿ ಚಾಮರಾಜನಗರ
ಈ ಲೋಕಸಭೆ ಚುನಾವಣೆಯು ಸಂವಿಧಾನದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಸಂವಿಧಾನ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಅಧಿಕಾರಕ್ಕೆ ತರುವಂತೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮನವಿ ಮಾಡಿದರು.
ನಗರದ ವರ್ತಕರ ಭವನದಲ್ಲಿ ನಡೆದ ಮಾದಿಗ ಸಮುದಾಯದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಮ್ಮದಾಗಿದೆ. ನಿಮ್ಮ ಪರ ಧ್ವನಿ ಮಾಡುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಈ ಚುನಾವಣಾ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಬೇಕು ಎಂದು ಕೋರಿದರು.
ನಾವೆಲ್ಲರು ಅಂಬೇಡ್ಕರ್ ಅನುಯಾಯಿಗಳು. ನಮ್ಮಲ್ಲಿ ಎಡಗೈ, ಬಲಗೈ ಎಂಬ ಭೇದಬಾವ ಇಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ದೊರೆಬೇಕು ಎಂಬುವುದು ನಮ್ಮೆಲ್ಲರ ಒತ್ತಾಸೆಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಆದರೆ, ಬಿಜೆಪಿ ಸಂವಿಧಾನ ವಿರುದ್ದವಾಗಿದ್ದು, ಅದನ್ನು ಬದಲಾಯಿಸುವ ಮಾತನಾಡುತ್ತಿದೆ. ಇದರಿಂದ ಜನರು ಜಾಗೃತರಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಸಂವಿಧಾನದ ಸಂರಕ್ಷಣೆಗೆ ನಿಲ್ಲಬೇಕು ಎಂದು ತಿಳಿಸಿದರು.
ಎಸ್ಇಪಿ, ಟಿಎಸ್ಪಿ ಕಾಯ್ದೆ ಸಂವಿಧಾನಕ್ಕೆ ಪೂರಕವಾಗಿದ್ದು, ಇದನ್ನು 2013ರಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರ ಸಹಕಾರದೊಂದಿಗೆ ಜಾರಿ ಮಾಡಿದೆವು. ಇದರಿಂದ ದಲಿತರ ಕಾಲೋನಿಗಳು ಅಭಿವೃದ್ದಿಯಾದವು. ಇಡೀ ದೇಶದಲ್ಲಿ ಮೊಟ್ಟ ಮೊದಲ ಅಂಬೇಡ್ಕರ್ ಜಾಗೃತಿ ಜಾಥಾವನ್ನು ಆಯೋಜನೆ ಮಾಡಿದ್ದು, ನಮ್ಮ ಸರ್ಕಾರ. ಇದು ಇತರೇ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದೆ. ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಹೆಚ್ಚು ಕೊಡುಗೆ ನೀಡಿದೆ. ನಾನು ವಿಧಾನ ಪರಿಷತ್ ಸದಸ್ಯನಾಗಲು ಕಾಂಗ್ರೆಸ್ ಕಾರಣ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಬ್ಲಾಕ್ ಅಧ್ಯಕ್ಷರಾದ ಎ.ಎಸ್.ಗುರುಸ್ವಾಮಿ, ಮಹಮದ್ ಅಸ್ಗರ್, ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ಒಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎ.ಮಹದೇವಶೆಟ್ಟಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಮಗದ ಮಾಜಿ ನಿರ್ದೇಶಕ ಶಿವಮೂರ್ತಿ, ಮುಖಂಡರಾದ ಎಚ್.ಎಚ್ ನಾಗರಾಜು, ಎನ್.ವಿನೋದ್, ಗುಂಡ್ಲುಪೇಟೆ ದೇವರಾಜು, ಸೇವಾದಳದ ಜಿಲ್ಲಾದ್ಯಕ್ಷ ಹೊಂಗನೂರು ಜಯರಾಜ್ ಇದ್ದರು.
7ಸಿಎಚ್ಎನ್.6:
ಚಿತ್ರವಿದೆ