ಆದರ್ಶವಾಗಿ ಬದುಕಿದ ಕೂತಂಡ ಪಾರ್ವತಿ ಪೂವಯ್ಯ
ಹಿರಿಯ ಪತ್ರಕರ್ತ ಕಲ್ಯಾಟಂಡ ಬಿ.ಗಣಪತಿ ಅಭಿಪ್ರಾಯ
ಮಡಿಕೇರಿ: ಗಾಂಧೀಜಿ ಅನುಯಾಯಿಯಾಗುವುದು ಸುಲಭವಲ್ಲದ ದಿನಗಳಲ್ಲಿ ಗಾಂಧೀಜಿ ತತ್ವಾದರ್ಶಗಳನ್ನು ಜೀವನದಲ್ಲಿ ಹಾಸುಹೊಕ್ಕಾಗಿಸಿ ಸರಳವಾಗಿ ಮತ್ತು ಆದರ್ಶ ಪ್ರಾಯವಾಗಿ ಬದುಕಿದ ಹಿರಿಮೆ ಸಾಹಿತಿ ಕೂತಂಡ ಪಾರ್ವತಿ ಪೂವಯ್ಯ ಅವರಿಗೆ ಸಲ್ಲಬೇಕೆಂದು ಹಿರಿಯ ಪತ್ರಕರ್ತ ಕಲ್ಯಾಟಂಡ ಬಿ.ಗಣಪತಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಭಾರತೀಯ ವಿದ್ಯಾಭವನದಲ್ಲಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಆಯೋಜಿತ ಸಾಹಿತಿ ಕೂತಂಡ ಪಾರ್ವತಿ ಪೂವಯ್ಯ ಅವರ ಕುರಿತಾದ ‘ಅವ್ವ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಪಂದ್ಯಂಡ ಬೆಳ್ಯಪ್ಪ ಅವರು ಅಂದಿನ ಕಾಲದಲ್ಲಿ ‘ಕೊಡಗಿನ ಗಾಂಧಿ’ ಎಂದು ಖ್ಯಾತರಾಗಿದ್ದರೆ, ಸಾಹಿತಿ ಕೂತಂಡ ಪೂರ್ವತಿ ಪೂವಯ್ಯ ಅವರು ‘ಕೊಡಗಿನ ಸರೋಜಿನಿ ನಾಯ್ದು’ ಎಂದು ಹೆಸರು ವಾಸಿಯಾಗಿದ್ದರು ಎಂದು ಸ್ಮರಿಸಿದರು. ಕೂತಂಡ ಪಾರ್ವತಿ ಅವರನ್ನು ಪ್ರತ್ಯಕ್ಷ ಕಂಡವರು ಕೆಲವೇ ಕೆಲವರಾದರೂ ಪಾರ್ವತಿ ಅವರ ಜೀವನಾದರ್ಶಗಳನ್ನು ಅರಿತವರು ಅನೇಕರಿದ್ದಾರೆ. ತನ್ನ ಬರವಣಿಗೆ ಮೂಲಕ ಕೊಡವರಂತಹ ಸಣ್ಣ ಸಮುದಾಯವನ್ನು ಭಾರತಾದ್ಯಂತ ಪ್ರಚುರಪಡಿಸಿದ ಕೀರ್ತಿ ಅಂದಿನ ಕಾಲದ ಅಗ್ರ ಮಹಿಳಾ ಲೇಖಕಿಯಾಗಿದ್ದ ಪಾರ್ವತಿ ಪೂವಯ್ಯ ಅವರಿಗೆ ಸಲ್ಲುತ್ತದೆ ಎಂದು ಗಣಪತಿ ಶ್ಲಾಘಿಸಿದರು.
ಮಡಿಕೇರಿಯ ಹಿರಿಯ ವೈದ್ಯ ಡಾ. ಎಂ.ಜಿ. ಪಾಟ್ಕರ್ ಮಾತನಾಡಿ, ‘ಅವ್ವ’ ಎಂಬುದು ಸರಳ ಶಬ್ದವಾಗಿದ್ದರೂ ಅವ್ವ ಪದ ನೀಡುವ ಅರ್ಥ ವಿಶಾಲವಾದದ್ದು ಎಂದರಲ್ಲದೇ, ಕೂತಂಡ ಪಾರ್ವತಿ ಪೂವಯ್ಯ ಅವರು ಜೀವಿಸಿದ್ದ ಕಾಲದಲ್ಲಿ ಭಾರತ ಅತ್ಯಂತ ಸಂಕಷ್ಟದ ದಿನಗಳನ್ನು ಕಂಡಿತ್ತು, ಬಡತನ ಎಲ್ಲಾ ಕಡೆ ತಾಂಡವವಾಡಿತ್ತು. ಇಂತಹ ದಿನಗಳಲ್ಲಿಯೂ ಕೂತಂಡ ಪಾರ್ವತಿ ಸಾಹಿತ್ಯ ಶ್ರೀಮಂತಿಕೆ ಮೆರೆದಿದ್ದರು ಎಂದು ಹೇಳಿದರು. ಪ್ರಕೃತಿ ನಾಶ ಇಂದಿನ ಸಮಾಜದ ಮುಂದಿರುವ ಬಹಳ ದೊಡ್ಡ ಸವಾಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಡಾ. ಪಾಟ್ಕರ್, ನಿಸರ್ಗದ ನಾಶದೊಂದಿಗೆ ಮನುಷ್ಯತ್ವ, ಮಾನವೀಯತೆಯ ನಾಶ ಕೂಡ ಉಂಟಾಗುತ್ತದೆ ಎಂದೂ ಎಚ್ಚರಿಸಿದರು.
‘ಅವ್ವ’ ಕೃತಿಯ ಲೇಖಕಿ ಡಾ.ನಯನ ಕಶ್ಯಪ್ ಮಾತನಾಡಿ, ಕೂತಂಡ ಪೂರ್ವತಿ ಪೂವಯ್ಯ ಅವರ ಜೀವನ ಮತ್ತು ಲೇಖನ ಎರಡೂ ಸರಳವಾಗಿತ್ತು. ಹೀಗಾಗಿಯೇ ಅವರು ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿದರು ಎಂದರಲ್ಲದೇ, ಆ ಕಾಲದ ಆಶೋತ್ತರಗಳನ್ನು ಅರ್ಥ ಮಾಡಿಕೊಂಡು ಲೇಖನಗಳನ್ನು ಬರೆದದ್ದು ಕೂತಂಡ ಪಾರ್ವತಿ ಪೂವಯ್ಯ ಅವರ ಹೆಗ್ಗಳಿಕೆಯಾಗಿದೆ ಎಂದು ಹೇಳಿದರು. ಸಾಹಿತ್ಯ ಎಂದಿಗೂ ಘನ ಗಾಂಭೀರ್ಯದಿAದ ಕೂಡಿರಬೇಕಾಗಿಲ್ಲ. ಸರಳ ರೂಪದಲ್ಲಿಯೂ ಓದುಗನನ್ನು ಚಿಂತನೆಗೆ ಒಳಪಡಿಸುವುದೇ ನಿಜವಾದ ಸಾಹಿತ್ಯ ಎಂದು ನಯನ ಕಶ್ಯಪ್ ಹೇಳಿದರು.
ತನ್ನ ತಾಯಿ ಪಾರ್ವತಿ ಕುರಿತಂತೆ ಕೂತಂಡ ಉತ್ತಪ್ಪ ಕೆಲವೊಂದು ನೆನಪುಗಳನ್ನು ಸಭಿಕರ ಮುಂದೆ ತೆರೆದಿಟ್ಟರು. ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೊಂಗAಡ ಎಸ್. ದೇವಯ್ಯ ಸಭೆಯಲ್ಲಿ ಮಾತನಾಡಿದರು. ದೀಪಿಕಾ ಅಪ್ಪಯ್ಯ ನಿರೂಪಿಸಿ, ಬಾಲಾಜಿ ಕಶ್ಯಪ್ ವಂದಿಸಿದರು.
ಈಗಿನ ಕವಿತೆಗಳಲ್ಲಿ ಮೌಲ್ಯ ಕುಸಿಯುತ್ತಿದೆ, ತೋಚಿದ್ದು ಗೀಚಿದಂತೆ ಕಂಡು ಬರುತ್ತಿದೆ. ಹೀಗಾಗಿಯೇ ಅರ್ಥ ಹೀನ ಕವಿತೆಗಳು ಹೆಚ್ಚಾಗುತ್ತಿದೆ. ಹೀಗಿರುವಾಗ ಅಂದಿನ ಕಾಲ ಮಾನದಲ್ಲಿಯೇ ಮೌಲ್ಯ, ಸತ್ವಯುತ ಕವನ, ಲೇಖನಗಳನ್ನು ಬರೆದ ಕೂತಂಡ ಪಾರ್ವತಿ ಪೂವಯ್ಯ ಸದಾ ಆದರ್ಶಪ್ರಾಯರಾಗುತ್ತಾರೆ.
ಡಾ.ಎಂ.ಜಿ. ಪಾಟ್ಕರ್, ಹಿರಿಯ ವೈದ್ಯರು, ಮಡಿಕೇರಿ. (ಫೋಟೋ :: ಬುಕ್)