ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ಅಭಿಷೇಕ್ ದತ್ತ್ ಟೀಕೆ
ದೇವನಹಳ್ಳಿ: ಹತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ನೀಡಿದ್ದ ಗ್ಯಾರೆಂಟಿಗಳು ಇನ್ನೂ ಜನರನ್ನು ತಲುಪಿಲ್ಲ. ಸುಳ್ಳು, ಅಪಪ್ರಚಾರಗಳ ಮೂಲಕ ಚುನಾವಣೆ ಎದುರಿಸುವುದು ಬಿಜೆಪಿ ಜಾಯಮಾನ ಎಂದು ರಾಷ್ಟ್ರೀಯ ಕಾಂಗ್ರೆಸ್ನ ಕಾರ್ಯದರ್ಶಿ ಅಭಿಷೇಕ್ ದತ್ತ್ ಟೀಕಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ದೇಶದಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎನ್ನುವ ಬಿಜೆಪಿಗರೇ ಅತೀ ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಅಧಿಕಾರಕ್ಕಾಗಿ ಎಂಥಹ ಹೀನಾಯ ಕೃತ್ಯ ಮಾಡಲು ಸಿದ್ಧ ಎಂದು ನಿರೂಪಿಸಿದೆ ಎಂದು ದೂರಿದರು.
ಎಲ್ಲ ವರ್ಗಗಳ ಜನರ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 3 ತಿಂಗಳಲ್ಲಿ ಪಂಚ ಗ್ಯಾರೆಂಟಿ ಯೋಜನೆಯನ್ನು ಜನರಿಗೆ ತಲುಪಿಸಿದೆ. ಆದರೆ ವಿದೇಶದಿಂದ ₹15 ಲಕ್ಷ ಹಣವನ್ನು ಇನ್ನೂ ನರೇಂದ್ರ ಮೋದಿ ಶ್ರೀ ಸಾಮಾನ್ಯರ ಬ್ಯಾಂಕ್ ಖಾತೆಗೆ ಹಾಕಿಲ್ಲ ಎಂದು ಲೇವಡಿ ಮಾಡಿದರು.
ಅಚ್ಚೇ ದಿನ್ ಆಯೇಗಾ ಎಂದು ಬೊಬ್ಬೆ ಹಾಕುವವರು ಏಕಾಂಗಿಯಾಗಿ ಚುನಾವಣೆ ಎದುರಿಸಲು ಸಾಧ್ಯವಾಗದೇ ಮೈತ್ರಿ ಮಾಡಿಕೊಂಡು ಮಿತ್ರ ಪಕ್ಷಗಳ ಸಹಕಾರದಿಂದ ಸರ್ಕಾರ ರಚನೆಗೆ ಹಪ್ಪ ಹಪ್ಪಿಸುತ್ತಿದ್ಧಾರೆ ಎಂದರು.
ಅಭ್ಯರ್ಥಿಗಳ ಮುಖ ನೋಡಿ ಯಾರು ಮತ ಹಾಕುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯನ್ನೇ ಏ.14ರಂದು ದೇವನಹಳ್ಳಿಗೆ ಕರೆ ತಂದು ಚುನಾವಣಾ ಪ್ರಚಾರ ಮಾಡಲು ಹೋರಟ್ಟಿದ್ಧಾರೆ. ಮೋದಿಯನ್ನು ಮುಂದೆ ಇಟ್ಟು ಇನ್ನೊಬ್ಬರಿಗೆ ಮತ ಕೇಳುವ ದುಸ್ಥಿತಿ ಬಿಜೆಪಿಗರದ್ದು ಎಂದರು.
ಕಾಂಗ್ರೆಸ್ನ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ವರಿಷ್ಠರಿದ್ದಂತೆ, ನಿಮ್ಮಲ್ಲಿ ಮತದಾರರು ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಾಣುತ್ತಾರೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ, ಬೆಂ.ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವಿದೆ ಎಂದರು.
ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಚನ್ನಹಳ್ಳಿ ಬಿ.ರಾಜಣ್ಣ, ತಾಲ್ಲೂಕು ಅಧ್ಯಕ್ಷ ಸಿ.ಜಗನ್ನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್ ಗೌಡ ಇದ್ದರು.
ಪೋಟೋ
ದೇವನಹಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ಅಭಿಷೇಕ್ ದತ್ತ್ ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ವೇಳೆ ಗ್ಯಾರೆಂಟಿ ಸಮತಿಯ ಜಿಲ್ಲಾಧ್ಯಕ್ಷ ಚನ್ನಹಳ್ಳಿ ಬಿ.ರಾಜಣ್ಣ, ತಾಲ್ಲೂಕು ಅಧ್ಯಕ್ಷ ಜಗನ್ನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಅರ್.ಗೌಡ ಇದ್ದರು.