ತುಮಕೂರು: ನರೇಂದ್ರಮೋದಿ ನೇತೃತ್ವದ 10 ವರ್ಷಗಳ ಎನ್ ಡಿಎ ಆಡಳಿತ ಜನಸಾಮಾನ್ಯರಿಗೆ ಅಚ್ಚೆ ದಿನ್ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರೈತ, ಬಡವರ, ದೀನ ದಲಿತರು, ಹಿಂದುಳಿದ ವರ್ಗಗಳ ವಿರೋಧಿಯಾಗಿರುವ ಬಿಜೆಪಿ ಪಕ್ಷವನ್ನು ಸೋಲಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ಕಳೆದ ಹತ್ತುವರ್ಷಗಳಲ್ಲಿ ಎನ್ ಡಿಎ ಒಕ್ಕೂಟ ನೀಡಿದ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆರಿವೆ.ನಿರುದ್ಯೋಗ ತಾಂಡವವಾಡುತ್ತಿದೆ. ಸೈನಿಕರ ನೇಮಕಾತಿ ಯಲ್ಲಿಯೂ ಅಗ್ನಿಪಥ್ ಹೆಸರಿನಲ್ಲಿ ಹೊರಗುತ್ತಿಗೆ ಪದ್ದತಿಯನ್ನು ಜಾರಿಗೆ ತರಲಾಗಿದೆ.ಕರ್ನಾಟಕದಲ್ಲಿ ಸದೃಢ ವಾಗಿದ್ದ ಬ್ಯಾಂಕುಗಳನ್ನು ಗುಜರಾತ್ನ ನಷ್ಟದಲ್ಲಿರುವ ಬ್ಯಾಂಕಿನೊಂದಿಗೆ ವಿಲೀನ ಮಾಡಿ,ಕನ್ನಡಿಗರ ಅಸ್ವಿತ್ವವೇ ಇಲ್ಲದಂತೆ ಮಾಡಲಾಗಿದೆ ಎಂದರು.
ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕ ರಾಮಚಂದ್ರಪ್ಪ ಮಾತನಾಡಿ, ಕಳೆದ 10 ವರ್ಷಗಳಲ್ಲಿ ನರೇಂದ್ರಮೋದಿ ಸರಕಾರ ಶೋಷಿತರ ಏಳಿಗೆಗೆ ಒಂದೇ ಒಂದು ಕಾರ್ಯಕ್ರಮ ನೀಡಿಲ್ಲ. ಆರ್.ಎಸ್.ಎಸ್.ಸೇರಿದಂತೆ ಬಿಜೆಪಿಯ ಮಿತ್ರ ಪಕ್ಷಗಳು ಮಿಲ್ಲರ್ ಆಯೋಗದಿಂದ ಇದುವರೆಗಿನ ಎಲ್ಲಾ ಆಯೋಗದ ಶಿಫಾರಸ್ಸಗಳನ್ನು ಜಾರಿ ಮಾಡಲು ಬಿಡುತ್ತಿಲ್ಲ.ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡಿದ್ದ ಸಾಮಾಜಿಕ, ಆರ್ಥಿಕ ವರದಿಯನ್ನು ಸಹ ಜಾರಿಗೆ ತರಲು ಅಡ್ಡಿ ಮಾಡುತ್ತಿದೆ. ಬಿಜೆಪಿ ಪಕ್ಷಕ್ಕೆ ಆರ್.ಎಸ್.ಎಸ್ ಹೇಳಿದ ಕೆಲಸಗಳಿಗಷ್ಟೇ ಮನ್ನಣೆ ನೀಡುತ್ತಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಅವರ ಬಳಿ ಉತ್ತರವು ಇಲ್ಲ, ಪರಿಹಾರವೂ ಇಲ್ಲ. ಹಾಗಾಗಿ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಬೆಂಬಲಿಸಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅನಂತನಾಯಕ್ , ಮುಖಂಡರಾದ ಎಸ್.ನಾಗಣ್ಣ,ವಿರೂಪಾಕ್ಷ ಡ್ಯಾಗೇರಹಳ್ಳಿ, ಪ್ರತಾಪ್, ನರಸಿಂಹಣ್ಣ, ಕೊಳಗೇರಿ ನರಸಿಂಹಮೂರ್ತಿ, ಆರ್.ಕಾಮರಾಜು, ಮೈಲಪ್ಪ, ಜೋಸೇಫ್, ಎಣ್ಣೆಗೆರೆ ವೆಂಕಟರಾಮಯ್ಯ, ಡಾ.ರಫೀಕ್ ಅಹಮದ್ ಉಪಸ್ಥಿತರಿದ್ದರು.