– ಈ ಕುರಿತು ಚರ್ಚೆ ನಡೆಸಲು ನಾವು ಸಿದ್ದರಿದ್ದೇವೆ
– ಕಾಂಗ್ರೆಸ್ಸಿಗರಿಗೆ ಮಾಜಿ ಸಚಿವ ಸಿ.ಟಿ. ರವಿ ಸವಾಲು
ಪ್ರತಿನಿಧಿ ವರದಿ ಮೈಸೂರು
ದೇಶದ ಇತಿಹಾಸದಲ್ಲಿ ಕರ್ನಾಟಕಕ್ಕೆ ನರೇಂದ್ರ ಮೋದಿ ಸರ್ಕಾರ ನೀಡಿದಷ್ಟು ಅನುದಾನವನ್ನು ಈ ಹಿಂದಿನ ಯಾವ ಸರ್ಕಾರಗಳು ನೀಡಿಲ್ಲ. ಈ ವಿಚಾರವಾಗಿ ಚರ್ಚೆ ನಡೆಸಲು ನಾವು ಸಿದ್ದರಿದ್ದೇವೆ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಸಿ.ಟಿ.ರವಿ ಸವಾಲು ಹಾಕಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ನೀಡಿದ ತೆರಿಗೆ ಪಾಲು ಸೇರಿದಂತೆ ಸಾಕಷ್ಟು ಅನುದಾನ ನೀಡಿದೆ, ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಮುಂದಿಟ್ಟಿದ್ದೇವೆ. ಅಲ್ಲದೇ ಇದರ ಕುರಿತು ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ. ಬೇರೆ ಪ್ರಧಾನಿಗಳಿಗಿಂತ ಹೆಚ್ಚಿನ ಅನುದಾನವನ್ನೇ ಮೋದಿ ಅವರು ನೀಡಿದ್ದಾರೆ. ಒಂದೊಮ್ಮೆ ನಿಮ್ಮ ದೃಷ್ಟಿಯಲ್ಲಿ ಹೆಚ್ಚು ಅನುದಾನ ನೀಡುವ ಅಥವಾ ತೆರಿಗೆ ಪಾಲು ನೀಡುವ ವಿಷಯದಲ್ಲಿ ಅನ್ಯಾಯ ಮಾಡಿದ್ದಾರೆ ಎಂಬುದು ನಿಮ್ಮ ದೃಷ್ಟಿಕೋನವಾದರೆ, ನಿಮ್ಮ ದೃಷ್ಟಿದೋಷವನ್ನು ನಿವಾರಣೆ ಮಾಡಿಸಬೇಕಿದೆ ಎಂದು ಟೀಕಿಸಿದರು.
ಮೂಲಸೌಕರ್ಯ ಕೊಡುತ್ತಿಲ್ಲ: ಎನ್ಡಿಆರ್ಎಫ್, ಎಸ್ಡಿಆರ್ಎಫ್ ಅಡಿಯಲ್ಲಿ ರಾಜ್ಯಕ್ಕೆ 800 ಕೋಟಿ ರೂ. ಮುಂಗಡ ಅನುದಾನ ನೀಡಲಾಗಿದೆ. ನೀತಿ ಸಂಹಿತೆ ಇರುವುದರಿಂದ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೂ ಪರಿಹಾರ ನೀಡಿಲ್ಲ. ಇಷ್ಟು ದಿನ ರಾಜ್ಯ ಸರ್ಕಾರ ಬಿಡುಗಡೆ ಮಾಡಿ ನಂತರ ಹೊಂದಾಣಿಕೆ ಮಾಡಲಾಗುತ್ತಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಆ ರೀತಿ ಮಾಡಿಲ್ಲ. ಬೆಲೆ ಏರಿಕೆಯಿಂದ ಬಡ್ಡಿರಹಿತವಾಗಿ 8 ಸಾವಿರ ಕೋಟಿ ಸಾಲ ನೀಡಿದರೂ, ರಾಜ್ಯ ಸರ್ಕಾರಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ಸರ್ಕಾರ ದಿವಾಳಿ ಆಗಲಿದೆ: ತೆರಿಗೆ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಕೃಷ್ಣಬೈರೇಗೌಡ ಅವರ ಪ್ರಶ್ನೆಗೆ ಸೀತಾರಾಮನ್ ಅವರೇ ಉತ್ತರ ಕೊಟ್ಟಿದ್ದಾರೆ. ಆದರೆ ಅವರು ಚರ್ಚೆ ಮಾಡದೆ ಏಕಪಾತ್ರಾಭಿನಯ ಮಾಡಿದರು. ನಾವು ಅನುದಾನ ಕೊಟ್ಟಿದ್ದು ಸುಳ್ಳಾದರೆ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದೆ, ಆದರೆ ಅದನ್ನು ಯಾರೂ ಸ್ವೀಕರಿಸಲಿಲ್ಲ. ನಂತರದಲ್ಲಿ ಸಂಸತ್ತಿನಲ್ಲೇ ಸ್ಪಷ್ಟನೆ ನೀಡಿದರೂ ಕೋರ್ಟ್ ಮೊರೆ ಹೋಗಿದ್ದಾರೆ. ರಾಜ್ಯ ಸರ್ಕಾರ ಕೇರಳ ಹಾದಿಯಲ್ಲಿ ಸಾಗುತ್ತಿದ್ದು, ಅವರಂತೆ ದಿವಾಳಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.
ವಿಚಾರಗಳ ಚರ್ಚೆ ಆಗಬೇಕು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಯ ವಿಚಾರಗಳು, ಭದ್ರತೆ, ಸುರಕ್ಷತೆ, ಮೂಲ ಸೌಕರ್ಯ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ, ಭವಿಷ್ಯದ ಗುರಿಯ ಬಗ್ಗೆ ಚರ್ಚೆ ಆಗಬೇಕು. ಆದರೆ ಸದ್ಯ ಚರ್ಚೆಯಾಗಬೇಕಿರುವುದು ಜಾತಿಯಲ್ಲ. ಬದಲಾಗಿದೆ ರಾಷ್ಟ್ರಕ್ಕೆ ಯಾರ ನೇತೃತ್ವಬೇಕು, ಯಾವ ಸರ್ಕಾರ ಬೇಕು, ಪ್ರಾಮಾಣಿಕತೆ, ಸಾಮರ್ಥ್ಯ, ಕೊಡುಗೆಗಳು, ಹಗರಣಗಳು, ಅದ್ವಾನಗಳು ಚರ್ಚೆ ಆಗಬೇಕು. ಅಲ್ಲದೇ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಹಗರಣಗಳಿಗೆ ಯಾರು ಕಾರಣೀಭೂತರು? ಎಂಬುದೆಲ್ಲವನ್ನೂ ಚರ್ಚೆ ಮಾಡಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಮೇಯರ್ ಸಂದೇಶ್ ಸ್ವಾಮಿ ಇತರರಿದ್ದರು.
ವಿಭಜನೆ ರೋಗ ಆವರಿಸಿದೆ: ಕಾಂಗ್ರೆಸ್ಗೆ ದೇಶವನ್ನು ವಿಭಜಿಸುವ ರೋಗ ಆವರಿಸಿದೆ. ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರು, ಮುಸ್ಲಿಂ ಲೀಗ್, ಕಾಂಗ್ರೆಸ್ ಸಹಿ ಹಾಕುವ ಮೂಲಕ ಭಾರತವನ್ನು ವಿಭಜಿಸಿದ್ದು, ವಿಭಜಿಸುವ ರೋಗ ಇಂದಿಗೂ ಕಡಿಮೆಯಾಗಿಲ್ಲ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶ ವಿಭಜನೆಯ ರೋಗ ಆವರಿಸಿಕೊಂಡಿದೆ. ಜಾತಿ, ಪ್ರಾದೇಶಿಕತೆ ಹೆಸರಿನಲ್ಲಿ, ಮತೀಯವಾದಕ್ಕೆ ಕುಮ್ಮಕ್ಕು ಕೊಡುವ ಮೂಲಕ ಸಮಾಜದ ವಿಭಜನೆ ಮಾಡುತ್ತಿದ್ದಾರೆ. ಜೊತೆಗೆ ಪ್ರಣಾಳಿಕೆ ಸಿದ್ಧಪಡಿಸಲು ನಗರ ನಕ್ಸಲರ ಸಹಾಯ, ತಾಲೀಬಾನಿಗಳ ಅಜೆಂಡಾ ಪ್ರೇರಣೆ ಪಡೆದಿದ್ದಾರೆ. ಇದು ಸಮಾಧಾನದ ಸಂಗತಿ ಎಂದರೆ ಯಾವ ಸಮೀಕ್ಷೆಯೂ ಕಾಂಗ್ರೆಸ್ ಎರಡಂಕಿ ದಾಟುವ ವಿಶ್ವಾಸ ವ್ಯಕ್ತಪಡಿಸಿಲ್ಲ ಎಂದರು.
=================
ಲೂಸ್ ಟಾಕ್ ಲಕ್ಷ್ಮಣ್!: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರಿಗೆ ಲೂಸ್ ಟಾಕ್ ಲಕ್ಷ್ಮಣ್ ಎಂದು ಬಿರುದು ಕೊಟ್ಟಿದ್ದಾರೆ. ಅಧಿಕಾರದ ಪರಿವರ್ತನೆಗೆ ಬಳಸಿಕೊಂಡ ಅಹಿಂದ ಎಲ್ಲೋಯಿತು ಸಿದ್ದರಾಮಯ್ಯನವರೆ? ಯಾರನ್ನೋ ಕರೆದುಕೊಂಡು ಬಂದು ಒಕ್ಕಲಿಗ ಎಂದರೆ ಜನ ಒಪ್ಪಿಕೊಳ್ಳುತ್ತಾರೆಯೇ? ಒಕ್ಕಲಿಗರು ನೀತಿ ಹಿಂದೆ ಹೋದವರು, ಸಂಸ್ಕಾರ ಇಲ್ಲದವರನ್ನು ಒಕ್ಕಲಿಗ ಎಂದು ಒಪ್ಪಿಕೊಳ್ಳಲ್ಲ. ಕಾಂಗ್ರೆಸ್ ಅವರೇ ಲೂಸ್ ಟಾಕ್ ಲಕ್ಷ್ಮಣ್ ಎಂದು ಬಿರುದು ಕೊಟ್ಟಿದ್ದಾರೆ. ನಿಮಗೆ ಗತಿ ಇಲ್ಲದೆ ನಾಲ್ಕು ಬಾರಿ ಸೋತವನನ್ನು ಅಭ್ಯರ್ಥಿ ಮಾಡಿದ್ದೀರಿ. ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡಿದ್ದೀರಿ. ಸಾಧನೆ ಹೇಳಿಕೊಳ್ಳಲು ಆಗುತ್ತಿಲ್ಲ. ಒಕ್ಕಲಿಗರನ್ನು ಬಳಸಿಕೊಂಡು ಹೇಗೆ ತುಳಿದಿರಿ ಎಂಬುದು ಗೊತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
=================
ಕಮ್ಯುನಲ್ ಕಾಂಗ್ರೆಸ್ ಆಗಿದೆ: ಪ್ರಸ್ತುತ ಕಾಂಗ್ರೆಸ್ ಪಕ್ಷ ಕಮ್ಯುನಲ್ ಆಗಿ ಬದಲಾಗಿದ್ದು, ದೇಶದಲ್ಲಿ ತನ್ನ ನೈತಿಕತೆ ಕಳೆದುಕೊಂಡು ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ. ಹೀಗಾಗಿ ಎಲ್ಲೆಡೆ ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿ ಎಂಬ ಕೂಗು ಅನುರಣಿಸುತ್ತಿದ್ದು, ತಮಿಳುನಾಡಿನಲ್ಲೂ ಈ ಬಾರಿ ಎನ್ಡಿಎ ಎರಡಂಕ್ಕಿ ದಾಟಲಿದ್ದು, ಪರ್ಯಾಯ ರಾಜಕೀಯ ಶಕ್ತಿಯಾಗಿ ಬಿಜೆಪಿ ಬೆಳೆಯಲಿದೆ ಎಂದು ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ಕಾಂಗ್ರೆಸ್ಗೆ ಉತ್ತಮ ನಾಯಕರಿಲ್ಲ. ಸತತ ಸೋಲುಗಳ ನಂತರವೂ ರಾಹುಲ್ ಗಾಂಧಿ ಅವರನ್ನು ಬಿಂಬಿಸುವ ಕೆಲಸ ಕಡಿಮೆ ಆಗಿಲ್ಲ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ ಬಿಜೆಪಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಈ ಚುನಾವಣೆ ಬಳಿಕ ದೇಶದ ಜನರೇ ರಾಹುಲ್ ಗಾಂಧಿಗೆ ಕಡ್ಡಾಯ ನಿವೃತ್ತಿ ನೀಡುತ್ತಾರೆ.
ಸಿ.ಟಿ.ರವಿ, ಮಾಜಿ ಸಚಿವ
=================