– ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ
ಪ್ರತಿನಿಧಿ ವರದಿ ಮೈಸೂರು
ಲೋಕಸಭಾ ಚುನಾವಣಾ ಅಖಾಡದಲ್ಲಿ ಮತಭೇಟೆಗಿಳಿದಿರುವ ಸಿಎಂ ಪುತ್ರನಿಗೆ ಸ್ವಕ್ಷೇತ್ರದಲ್ಲೇ ಪ್ರತಿಭಟನೆ ಬಿಸಿ ತಟ್ಟಿದೆ. ಪ್ರತಿಭಟನಾಕಾರ ಮನವಿ ಆಲಿಸಲು ಬಂದಿದ್ದಕ್ಕೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ನಂಜನಗೂಡು ತಾಲೂಕಿನ ಮಲ್ಲೂಪುರ, ಅಳಗಂಚಿ, ಅಳಗಂಚಿಪುರದ ರೈತರಿಗೆ ಸೇರಿದ್ದ 400 ಎಕರೆ ಜಾಗವನ್ನು ಬಣ್ಣಾರಿ ಅಮ್ಮನ್ ಸುಗರ್ ಕಾರ್ಖಾನೆ ನೀಡಿದ್ದಾರೆ. ರೈತರ ಭೂಮಿ ವಶಕ್ಕೆ ಪಡೆದ ಕಾರ್ಖಾನೆ ರೈತರ ಕುಟುಂಬಕ್ಕೆ ಕೊಡಬೇಕಾದ ಉದ್ಯೋಗ ಕೊಡುವಲ್ಲಿ ಹಿಂದೇಟು ಹಾಕಿದೆ. ಹೀಗಾಗಿ ಸುಮಾರು 120 ರೈತ ಕುಟುಂಬಗಳು ಕಳೆದ ಹಲವು ದಿನಗಳಿಂದಲೂ ಕಾರ್ಖಾನೆ ವಿರುದ್ಧ ಬಿದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ರೈತರ ಸಮಸ್ಯೆ ಆಲಿಸಲು ಹಾಗೂ ಮತಕೇಳಲು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಮ್ಮ ಬೇಡಿಕೆ ಈಡೇರಿಸಿಲ್ಲ, ಹೀಗಾಗಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.
ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಈ ಹಿಂದೆಯೂ ಭೇಟಿ ನೀಡಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ, ಸಿಎಂ ತಂದೆಯ ಗಮನಕ್ಕೆ ತಂದು ಸಮಸ್ಯೆ ಪರಿಹರಿಸೋದಾಗಿ ಭರವಸೆ ನೀಡಿದ್ದರಾದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಸಿಎಂ ಪುತ್ರನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಪ್ರತಿಭಟನಾಕಾರರ ಮನವೊಲಿಸಿ ಮತಯಾಚನೆ ಮಾಡಲು ಮುಂದಾದರೂ, ಚುನಾವಣೆ ಬಂತು ಎಂದು ಈಗ ಬಂದಿದ್ದೀರಾ? ನಮ್ಮ ಬೇಡಿಕೆ ಈಡೇರಿಸದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
==================