ಪ್ರತಿನಿಧಿ ವರದಿ ಯಳಂದೂರು
ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಒಂದುವರೆ ತಿಂಗಳಿಂದ ಗ್ರಾಮ ದೇವತೆ ಮಾರಮ್ಮನ ಹಬ್ಬ ಅದ್ದೂರಿಯಾಗಿ ನಡೆಯಿತು. ಯುಗಾದಿ ದಿನ ಮುಂಜಾನೆ ಕಲಿಯೂರು ಗ್ರಾಮದ ಕಾವೇರಿ ನದಿಯಲ್ಲಿ ಕೆಸ್ತೂರು ಮಾರಮ್ಮ, ಬಸವೇಶ್ವರ, ಮಂಟೇಸ್ವಾಮಿ, ದೇವರ ಮೂರ್ತಿಯನ್ನು ಶುಚಿಗೊಳಿಸಿ ವಿವಿಧ ಬಗೆಯ ಹೂ, ಹೊಂಬಾಳೆಗಳಿಂದ ದೇವರುಗಳನ್ನು ಮತ್ತು ಸತ್ತಿಗೆ ಸೂರಪಾನಿ, ದಾಳ, ಹೆಬ್ಬರಗಳಿಗೆ ಅಲಂಕೃತ ಗೊಳಿಸಲಾಯಿತು.
ದೂಪ ದೀಪ ಆರತಿಗಳಿಂದ ದೇವರಿಗೆ ಪೂಜೆ ಮಾಡಲಾಯಿತು. ಗ್ರಾಮದ ಎಲ್ಲ ಕೋಮಿನ ಯಜಮಾನರು ಮತ್ತು ಗ್ರಾಮಸ್ಥರು ಸೇರಿ ಜಾತಿಭೇದ ಮರೆತು ಬೇವು ಬೆಲ್ಲವನ್ನು ಪರಸ್ಪರ ಹಂಚಿಕೊಂಡು ಸೇವಿಸಿ ಐಕ್ಯತೆ ಮೆರೆದರು.
ಕಲಿಯೂರಿನಿಂದ ಕುಂತೂರು, ಕುಂತೂರು ಮೋಳೆ, ಕೆ ಹೊಸೂರು, ಮೂಲಕ ಗ್ರಾಮಕ್ಕೆ ದೇವರನ್ನು ಹೊತ್ತು ಸಾಗಿದರು. ಸುಡುವ ಬಿಸಿಲನ್ನು ಲೆಕ್ಕಿಸಿದೆ ದೇವರನ್ನು ಮೆರವಣಿಗೆ ಮಾಡಿದರು.
ಮಂಗಳವಾದ್ಯ, ಕೊಂಬು ಕಹಳೆ, ನಂದಿಕಬ್ಬದ ಕುಣಿತ, ಮಾರಿಕುಣಿತ, ಹೆಬ್ಬರಗಳ ನಾದದೊಂದಿಗೆ ಮೆರವಣಿಗೆ ಸಾಗಿತು.
ದೇವರ ಉತ್ಸವ ಮೂರ್ತಿಗಳನ್ನು ನದಿಯಿಂದ ಹೊತ್ತು ಕಲಿಯೂರಿಗೆ ಆಗಮಿಸಿದರು. ಕಲಿಯೂರು ಗ್ರಾಮಸ್ಥರು ದೇವರುಗಳಿಗೆ ವಿಶೇಷ ಪೂಜೆ ಮಾಡಿದರು. ನಂತರ ಕುಂತೂರು ಗ್ರಾಮಕ್ಕೆ ಆಗಮಿಸಿ ಶಂಭುಲಿಂಗೇಶ್ವರ ದೇವಾಲಯ, ಮಠ, ಕುಂತೂರು ಮಾರಮ್ಮನ ದೇವಾಲಯಕ್ಕೆ ತೆರಳಿ ಪೂಜೆ ನಂತರ ಕುಂತೂರು ಮೋಳೆ ಗ್ರಾಮಕ್ಕೆ ದೇವರು ಆಗಮಿಸೂತಿದಂತೆ ಅಲ್ಲಿನ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು ಪ್ರತಿ ಮನೆಯ ಮಹಿಳೆಯರು ದೇವರುಗಳಿಗೆ ಹಣ್ಣುಕಾಯಿಗಳಿಂದ ಪೂಜೆಮಾಡಿ ಭಕ್ತಿಯಿಂದ ದೇವರನ್ನು ಸ್ಮರಿಸಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ನೀರು ಮಜ್ಜಿಗೆ ಪಾನಕ, ಕೋಸಂಬರಿಯನ್ನು ನೀಡಿದರು. ನಂತರ ಕೆ ಹೊಸೂರಿಗೆ ಉತ್ಸವ ಮೂರ್ತಿ ಆಗಮಿಸುತ್ತಿದಂತೆ ಅಲ್ಲಿಯೂ ಕೂಡ ದೇವರುಗಳಿಗೆ ವಿಶೇಷ ಪೂಜೆ ಮಾಡಿದರು.
ಮಧ್ಯಾಹ್ನ 2 ಗಂಟೆಗೆ ದೇವರು ಕೆಸ್ತೂರು ಗ್ರಾಮವನ್ನು ತಲುಪಿತು. ರಾತ್ರಿ ಯುಗಾದಿ ಮೆರವಣಿಗೆ ಮಾಡಲಾಯಿತು.
ನಾಡಗೌಡರು, ಗೌಡರು ಗ್ರಾಮದ ಎಲ್ಲ ಕೋಮಿನ ಯಜಮಾನರು ಹಾಜರಿದ್ದರು.