- ಕೆ.ಆರ್. ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಆಗ್ರಹ
ಪ್ರತಿನಿಧಿ ವರದಿ ಕೆ.ಆರ್.ನಗರ
ಪುರಸಭೆಯ 72 ವಾಣಿಜ್ಯ ಮಳಿಗೆಗಳಿಂದ ಲಕ್ಷಾಂತರ ರೂಪಾಯಿಗಳ ಬಾಡಿಗೆ ನಷ್ಟವುಂಟಾಗಿದ್ದು ಇದಕ್ಕೆ ಪುರಸಭೆಯ ಆಡಳಿತ ಮಂಡಳಿ ಹಾಗೂ ಮುಖ್ಯಾಧಿಕಾರಿ ಡಾ.ಜಯಣ್ಣ ಅವರೇ ನೇರ ಹೊಣೆ ಎಂದು ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಆರೋಪಿಸಿದರು.
ಆನ್ಲೈನ್ ಮೂಲಕ ಟೆಂಡರ್ ಆಗಿ ಒಂದು ತಿಂಗಳು ಕಳೆದರೂ ಬಿಡ್ ದಾರರಿಗೆ ಮಳಿಗೆಗಳನ್ನು ಹಸ್ತಾಂತರ ಮಾಡದೇ ಇರುವುದರಿಂದ ಪುರಸಭೆಗೆ 24 ಲಕ್ಷ ರೂಪಾಯಿ ನಷ್ಟವುಂಟಾಗಿದ್ದು, ಈ ನಷ್ಟವನ್ನು ಮುಖ್ಯಾಧಿಕಾರಿಯೇ ಭರಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಗುರುವಾರ ಪಟ್ಟಣದ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಎಚ್ಚರಿಸಿದರು.
ಹಳೆಯ ಹರಾಜಿನ ಮಳಿಗೆಗಳಿಂದ ತಿಂಗಳಿಗೆ 3 ರಿಂದ 4 ಲಕ್ಷ ರೂಪಾಯಿ ಮಾತ್ರ ಆದಾಯ ಬರುತ್ತಿತ್ತು. ಆದರೆ ಈಗಿನ ಹರಾಜಿನಿಂದ ಉತ್ತಮ ಲಾಭ ಬರುವುದಿದ್ದರೂ ಹಳೆಯ ಮಳಿಗೆಯವರ ಮೇಲೆ ಯಾಕೆ ಅತಿಯಾದ ಪ್ರೀತಿ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ ಎಂದರು.
ಶಾಸಕ ಡಿ.ರವಿಶಂಕರ್ ಅವರು ಈ ಪುರಸಭಾ ಮಳಿಗೆಗಳ ವಿಚಾರವಾಗಿ ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ, ನಾನು ಹಣ ಪಡೆದಿಲ್ಲ ಅಂತ ಹೇಳಿದ್ದಾರೆಯೇ ಹೊರತು, ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಮಾಡಿಲ್ಲ. ಅಲ್ಲದೆ, ಮಾಜಿ ಸಚಿವ ಸಾ.ರಾ.ಮಹೇಶ್ ಅವರು 20 ವರ್ಷಗಳಲ್ಲಿ ಸಾರ್ವಜನಿಕರಿಗೆ 400 ಕೋಟಿ ರೂ. ಖರ್ಚು ಮಾಡಿದ್ದೇನೆ ಎಂದು ಹೇಳಿರುವ ಬಗ್ಗೆ ರವಿಶಂಕರ್ ಅವರು ಈ ಬಗ್ಗೆ ಜನರಿಗೆ ಲೆಕ್ಕ ಕೊಡಿ ಅಂತ ಕೇಳಿದ್ದಾರೆ. ಇದು ಸರಿಯೇ ಎಂದು ಪ್ರಶ್ನಿಸಿದರು.
ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಧರ್ಮ, ಪುರಸಭಾ ಮಾಜಿ ಸದಸ್ಯರಾದ ರಂಗಸ್ವಾಮಿ, ಜಿ.ಪಿ.ಮಂಜು, ಬಂಗಾರಿ ತಮ್ಮೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.
12 ಕೆಆರ್ಎನ್-2:- ಕೆ.ಆರ್.ನಗರದ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಮಾತನಾಡಿದರು. ಜೆಡಿಎಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ದ್ರಾಕ್ಷಾಯಿಣಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮ, ಪುರಸಭಾ ಮಾಜಿ ಸದಸ್ಯರಾದ ರಂಗಸ್ವಾಮಿ, ಜಿ.ಪಿ.ಮಂಜು ಇದ್ದರು.