ಪ್ರತಿನಿಧಿ ವರದಿ ತಲಕಾಡು
ಮಳೆಯಿಲ್ಲದೆ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಜನತೆ ಎದುರಿಸುತ್ತಿರುವ ಬರದ ಸಂಕಷ್ಟ ನಿವಾರಿಸಲು ಸಕಾಲದಲ್ಲಿ ಮಳೆ ಕೃಪೆ ಕರುಣಿಸುವಂತೆ ತಲಕಾಡಿನ ಮಸೀದಿ ಧರ್ಮಗುರುಗಳು ದೇವರಲ್ಲಿ (ಅಲ್ಲಾ) ಸಾಮೂಹಿಕ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಗುರುವಾರ ತಲಕಾಡಿನಲ್ಲಿ ನಡೆದ ಈದ್-ಉಲ್-ಫಿತರ್ (ರಂಜಾನ್) ಹಬ್ಬದ ಅಂಗವಾಗಿ, ಇಲ್ಲಿನ ವಡೆಯಾಂಡಹಳ್ಳಿ ಈದ್ಗಾ ಮೈದಾನದಲ್ಲಿ ಜರುಗಿದ ವಿಶೇಷ ನಮಾಜ್ ಹಾಗೂ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು, ತಲಕಾಡು, ಬಿ.ಶೆಟ್ಟಹಳ್ಳಿ ವ್ಯಾಪ್ತಿಯ ಸಮಸ್ತ ಮುಸ್ಲಿಂ ಬಾಂಧವರು ಬೆಳಗ್ಗೆ ಜಾಮೀಯ ಮಸೀದಿ ಬಳಿ ಒಗ್ಗೂಡಿ ಮೆರವಣಿಗೆಯಲ್ಲಿ ಸಾಗಿದರು.
ಮಸೀದಿ ಧರ್ಮಗುರುಗಳು ಈದ್ಗಾ ಮೈದಾನದಲ್ಲಿ ನಮಾಜ್ ಹಾಗೂ ಕುರಾನ್ ಅಧ್ಯಾಯ ಪ್ರವಚನ ನೆರವೇರಿಸಿದ ನಂತರ, ನಾಡಿನ ಜನತೆಗೆ ಮಳೆಯಿಲ್ಲದೆ ರಣಬರಗಾಲ ಎದುರಾಗಿದೆ. ಜನ ಸೇರಿದಂತೆ ಪ್ರಾಣಿ ಪಕ್ಷಿಗಳೂ ನೀರಿಲ್ಲದೆ ಸಂಕಷ್ಟಕ್ಕೆ ಗುರಿಯಾಗಿವೆ. ಕರುಣಾಮಯಿ ದೇವರು ನಾಡಿಗೆ ಮಳೆ ಕೃಪೆ ತೋರುವಂತೆ ಪ್ರಾರ್ಥಿಸಿದರು.
ಹಬ್ಬದ ಸಂಭ್ರಮ:
ಇದ್ದವರು ಇಲ್ಲದವರಿಗೆ ನೀಡಬೇಕು ಎಂಬ ಮಹತ್ವದ ಸಂದೇಶ ಸಾರುವ ಹಾಗೂ ತ್ಯಾಗ ಭಾವೈಕ್ಯತೆ ಬಾಂಧವ್ಯದ ಸಂಕೇತಾದ ರಂಜಾನ್ ಹಬ್ಬವನ್ನು ಇಲ್ಲಿಯ ಮನೆ ಮನೆಗಳಲ್ಲಿ ಸಂಭ್ರಮದಿಂದ ಆಚರಿಸಿದರು.
ರಂಜಾನ್ ನಲ್ಲಿ ಒಂದು ತಿಂಗಳ ಕಠಿಣ ರೋಝಾವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ಸಂತಸದಲ್ಲಿ, ಬೆಳಗ್ಗೆ 10ಕ್ಕೆ ಜಾಮಿಯಾ ಮಸೀದಿ ಬಳಿ ಒಗ್ಗೂಡಿದ ಮುಸ್ಲಿಂ ಬಾಂಧವರು, ವಡೆಯಾಂಡಹಳ್ಳಿ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ತಂಪು ನೆರಳಲ್ಲಿ ಪ್ರಾರ್ಥನೆ:
ಲೇಟ್ ಸೈಯದ್ ಅತಾವುಲ್ಲ ಸ್ಥಳೀಯರು, ಇಲ್ಲಿನ ಈದ್ಗಾ ಮೈದಾನದಲ್ಲಿ ಬಿಸಿಲಿನಲ್ಲಿ ಪ್ರಾರ್ಥನೆ ಸಲ್ಲಿಸುವವರಿಗೆ ನೆರಳು ನೀಡಲೆಂದು, ಛತ್ರಿಮರದ ಎರಡು ಗಿಡನೆಟ್ಟು ವರ್ಷಗಳ ಕಾಲ ನೀರು ಹೊತ್ತು ತಂದು ಪೋಷಿಸಿ ಹೆಮ್ಮರವಾಗಿ ಬೆಳೆಸಲು ನೆರವಾಗಿದ್ದರು, ಇದರಿಂದ ಬೇಸಿಗೆ ರಣಬಿಸಿಲಿನಲ್ಲಿ ಈದ್ಗಾ ಮೈದಾನಕ್ಕೆ ತೆರಳಿ ಪ್ರತಿವರ್ಷ ಪ್ರಾರ್ಥನೆ ಸಲ್ಲಿಸುವವರಿಗೆ ತಂಪಾದ ನೆರಳು ನೀಡಲು ನೆರವಾಗಿದೆ.
ದುವಾ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಗ್ರಾಮದ ಎರಡು ಖಬರಸ್ಥಾನಗಳಿಗೆ ಧರ್ಮ ಗುರುಗಳೊಂದಿಗೆ ತೆರಳಿ ಮೃತರ ಆತ್ಮಕ್ಕೆ ಜನ್ನತ್ ಕಿ ಮಕ್ಫಿರತ್ ಶಾಂತಿ ಕರುಣಿಸಲು ಪ್ರಾರ್ಥಿಸಿದರು. ಹಬ್ಬಕ್ಕೆ ಸೂಕ್ತ ಪೊಲೀಸ್ ಭದ್ರತೆಯನ್ನು ತಲಕಾಡು ಆರಕ್ಷಕ ಠಾಣೆಯವರು ಒದಗಿಸಿದ್ದರು. ಹಬ್ಬದ ಉಸ್ತುವಾರಿಯನ್ನು ಇಲ್ಲಿನ ಜಾಮಿಯಾ ಮಸೀದಿ ಕಮಿಟಿ ವಹಿಸಿತ್ತು.
ಚಿತ್ರಶೀರ್ಷಿಕೆ :- 1,2,3,4
ತಲಕಾಡಿನಲ್ಲಿ ಗುರುವಾರ ಜರುಗಿದ ರಮ ಝಾನ್ ಹಬ್ಬದ ಮೆರವಣಿಗೆಯಲ್ಲಿ ಸಾಗುತ್ತಿರುವ ಮುಸ್ಲೀಂ ಬಾಂಧವರು ಹಾಗು ವಡೆಯಾಂಡಹಳ್ಳಿ ಈದ್ಗಾ ಮೈದಾನದಲ್ಲಿ ನಮಾಝ್ ಹಾಗು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.