ಶಾಸಕ ಜಿ.ಡಿ.ಹರೀಶ್ಗೌಡ ಹೇಳಿಕೆ
ಪ್ರತಿನಿಧಿ ವರದಿ ಹುಣಸೂರು
ಕೇಂದ್ರ ಪುರಸ್ಕೃತ ಯೋಜನೆಗಳ ಹೆಚ್ಚಿನ ಪ್ರಮಾಣದ ಸದ್ಬಳಕೆಯ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಎನ್ಡಿಎ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರಿಗೆ ಮತ ನೀಡಬೇಕೆಂದು ಶಾಸಕ ಜಿ.ಡಿ.ಹರೀಶ್ಗೌಡ ಮನವಿ ಮಾಡಿದರು.
ನಗರದ ಆದಿನಾರಾಯಣ ಶೆಟ್ಟಿ ಕನ್ವೆನ್ಷನ್ ಹಾಲ್ನಲ್ಲಿ ಶುಕ್ರವಾರ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಕಸಬಾ ಹೋಬಳಿ ಮತ್ತು ನಗರವ್ಯಾಪ್ತಿಯ ಕಾರ್ಯಕರ್ತರು ಮತ್ತು ಮತದಾರರಲ್ಲಿ ಮತಯಾಚನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿನಕ್ಕೆ ಸತತ ೨೦ ಗಂಟೆಗಳ ಕಾಲ ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ದುಡಿಯುತ್ತಿರುವ ಮಹಾನ್ ನೇತಾರ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾಗುವುದನ್ನು ಯಾರು ತಪ್ಪಿಸಲಾಗದು. ಎನ್ಡಿಎ ಮೈತ್ರಿಕೂಟ ೪೦೦ ಸ್ಥಾನಗಳನ್ನು ಗಳಿಸುವ ಮೂಲಕ ದೇಶದಲ್ಲಿ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದರು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೈಸೂರು ಮಹಾರಾಜರ ಕುಡಿ ಯದುವೀರ್ರ ಸರಳ ಸಜ್ಜನಿಕೆಯ ನಡೆ ಅವರ ಕುರಿತಾಗಿ ಮಾತನಾಡುತ್ತಿದ್ದ ಟೀಕಾಕಾರಿಗೆ ಉತ್ತರವಾಗಿದೆ. ಯದುವಂಶದ ರಾಜರುಗಳ ಕೊಡುಗೆ ಅನನ್ಯ. ರಾಜ್ಯದ ಇಂದಿನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರಲ್ಲಿ ಬೇಸರ ತರಿಸಿವೆ. ರಸ್ತೆಯ ಗುಂಡಿಯನ್ನು ಮಣ್ಣು ಹಾಕಿ ಮುಚ್ಚಲೂ ಸರ್ಕಾರ ಅನುದಾನ ನೀಡುತ್ತಿಲ್ಲ. ನಗರದಲ್ಲಿ ೧೫ ವರ್ಷಗಳಿಂದ ಆಶ್ರಯ ಯೋಜನೆಯಡಿ ಬಡವರಿಗೆ ವಸತಿ ಸೌಲಭ್ಯ ಸಿಕ್ಕಿಲ್ಲ. ಇಂತಹ ಶಾಶ್ವತ ಕಾಂಗ್ರೇಸ್ ಮುಖ್ಯವೇ ಅಥವಾ ಗ್ಯಾರಂಟಿ ಯೋಜನೆ ಮುಖ್ಯವೇ ಎನ್ನುವುದನ್ನು ಮತದಾರರು ಯೋಚಿಸಬೇಕು ಎಂದು ಹೇಳಿದರು.
ನೂತನ ಟಿಸಿ ಅಳವಡಿಕೆಗೆ ಸರ್ಕಾರ ೩ ಲಕ್ಷ ರೂ.ಗಳನ್ನು ಭರಿಸಲು ರೈತರಿಗೆ ಸೂಚಿಸಿದೆ. ಇದು ನ್ಯಾಯವೇ? ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರನ್ನು ಆಯ್ಕೆ ಮಾಡುವ ಮೂಲಕ ಕೇಂದ್ರ ಪುರಸ್ಕೃತ ಯೋಜನೆಗಳ ಸಂಪೂರ್ಣ ಬಳಕೆ ಮಾಡಿಕೊಳ್ಳೋಣ. ಇಬ್ಬರೂ ಒಟ್ಟಾಗಿ ದುಡಿದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಿದ್ದೇವೆ. ಜನತೆ ಆಶೀರ್ವದಿಸಬೇಕು ಎಂದು ಕೋರಿದರು.
ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕಳೆದ ೬೫ ಕಾಂಗ್ರೆಸ್ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳ ಹತ್ತು ಪಟ್ಟು ಕಳೆದ ೧೦ ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದೆ. ೪೦ ವಂದೇಭಾರತ್ ರೈಲು, ಸಾವಿರಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು, ೭೦೦ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು, ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ, ಹೀಗೆ ಮೋದೀಜಿಯವರ ಅಭಿವೃದ್ಧಿ ಕಾರ್ಯಗಳು ಮನೆಮಾತಾಗಿವೆ .೧೦ ವರ್ಷದಿಂದ ಒಂದು ದಿನವೂ ವಿಶ್ರಮಿಸದೇ ದುಡಿಯುತ್ತಿರುವ ನೇತಾರ ಮೋದಿಯವರಾಗಿದ್ದಾರೆ. ಅವರ ಆಸೆಯಂತೆ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ವೈಯಕ್ತಿಕವಾಗಿ ನಾನು ಹುಣಸೂರಿನ ಮೊಮ್ಮಗನಾಗಿದ್ದೇನೆ. ಹಾಗಾಗಿ ನಾನು ನಿಮ್ಮೆಲ್ಲರ ಮನೆಮಗನಾಗಿ ತಾಲೂಕಿನ ಅಭಿವೃದ್ಧಿಗೆ ದುಡಿಯುತ್ತೇನೆ. ಸ್ಥಳೀಯವಾಗಿ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವತ್ತ ಎಲ್ಲರ ಸಹಕಾರದೊಂದಿಗೆ ಮುಂದುವೆರೆಯುತ್ತೇನೆ. ದೇಶದ ಭವಿಷ್ಯಕ್ಕಾಗಿ ಮೋದಿ ಕೈಬಲಪಡಿಸುವ ಸಲುವಾಗಿ ನನಗೆ ಮತ ನೀಡಬೇಕೆಂದು ಕೋರಿದರು.
ಮುಖಂಡರಾದ ನಿಂಗರಾಜ ಮಲ್ಲಾಡಿ, ಶಿವಶೇಖರ್ ಮಾತನಾಡಿದರು. ಮಾಜಿ ಸಚಿವ ಎಸ್.ರಾಮದಾಸ್, ಬಿಜೆಪಿ ನಗರಮಂಡಲ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಬಿಜೆಪಿ ನಗರಾಧ್ಯಕ್ಷ ನಾರಾಯಣ, ತಾಲೂಕು ಅಧ್ಯಕ್ಷ ಕಾಂತರಾಜು, ನಿಕಟಪೂರ್ವ ಅಧ್ಯಕ್ಷ ನಾಗಣ್ಣಗೌಡ, ನಿಕಟಪೂರ್ವ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ದೇವರಾಜ ಒಡೆಯರ್, ದೇವರಳ್ಳಿ ಸೋಮಶೇಖರ್, ನಗರಸಭಾ ಸದಸ್ಯರಾದ ಕೃಷ್ಣರಾಜ ಗುಪ್ತ, ಶರವಣ, ವಿವೇಕ್, ಸತೀಶ್ಕುಮಾರ್ ಇತರರು ಹಾಜರಿದ್ದರು.
ಕ್ರಮಸಂಖ್ಯೆ ಒಂದನ್ನು ಒತ್ತಿ
ಶಾಸಕ ಜಿ.ಡಿ.ಹರೀಶ್ಗೌಡ ಮಾತನಾಡುತ್ತಾ, ಈ ಬಾರಿ ಚುನಾವಣೆಗೆ ೧೮ ಮಂದಿ ಸ್ಪರ್ಧಿಸಿದ್ದು, ನಿಮ್ಮ ಮತಗಟ್ಟೆಯಲ್ಲಿ ಎರಡು ಎಲೆಕ್ಟ್ರಾನಿಕ್ ಮತ ಯಂತ್ರಗಳಿರುತ್ತವೆ. ನೀವು ಮತಯಂತ್ರದಲ್ಲಿನ ಕ್ರಮಸಂಖ್ಯೆ ೧ ರ ಗುರುತಿನ ಕಮಲದ ಹೂವಿಗೆ ಮತ ಚಲಾಯಿಸಬೇಕು ಬೇರೆ ಕಡೆ ನೋಡಬೇಡಿ. ಕಮಲಕ್ಕೆ ಮತ ನೀಡುವ ಮೂಲಕ ಮಹಾರಾಜರನ್ನು ಗೆಲ್ಲಿಸಬೇಕು. ಆ ಮೂಲಕ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸೋಣ ಎಂದು ಕೋರಿದಾಗ ಸಭೆಯಲ್ಲಿ ಎಲ್ಲರೂ ಹೋ ಎಂದು ಕೂಗಿ ಒಪ್ಪಿಗೆ ನೀಡಿದ್ದು ವಿಶೇಷವಾಗಿತ್ತು.
೧೨ಊUಓ೧: ಹುಣಸೂರು ನಗರದಲ್ಲಿ ಆಯೋಜಿಸಿದ್ದ ಎನ್ಡಿಎ ಮೈತ್ರಿಕೂಟದ ಸಭೆಯನ್ನು ಶಾಸಕ ಜಿ.ಡಿ.ಹರೀಶ್ಗೌಡ ಉದ್ಘಾಟಿಸಿದರು. ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖಂಡರಾದ ಮಂಗಳ ಸೋಮಶೇಖರ್, ನಾಗಣ್ಣಗೌಡ, ಸತೀಶ್ಕುಮಾರ್, ಗಣೇಶ್ ಕುಮಾರಸ್ವಾಮಿ, ಕಾಂತರಾಜು ಇತರರಿದ್ದಾರೆ.