ಬೆಂಗಳೂರು: ಮಗು ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಗಂಡ-ಹೆಂಡತಿ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಲ್ಲಿ ನಡೆದಿದೆ. ಗಿರಿಜಾ(30) ಕೊಲೆಯಾದ ಪತ್ನಿ, ನವೀನ್ ಕೊಲೆ ಮಾಡಿದ ಆರೋಪಿ ಪತಿ. ಭಟ್ಕಳ ಮೂಲದವರಾದ ಗಿರಿಜಾ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ನವೀನ್ ಎಂಬುವವನೊಂದಿಗೆ ಕಳೆದ ಎಂಟು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಮದುವೆ ಬಳಿಕ ಗಂಡ-ಹೆಂಡತಿ ಇಬ್ಬರೂ ಬೆಂಗಳೂರಲ್ಲಿ ನೆಲೆಸಿದ್ದರು. ಆದ್ರೆ, ಮಗು ಮಾಡಿಕೊಳ್ಳುವ ವಿಚಾರದಲ್ಲಿ ಪರಸ್ಪರ ಗಲಾಟೆ ಮಾಡಿಕೊಂಡಿದ್ದು, ಕೊನೆಗೆ ಪತಿ ನವೀನ್, ಪತ್ನಿ ಗಿರಿಜಾಳನ್ನ ಕೊಲೆ ಮಾಡಿದ್ದಾನೆ.
ಮದುವೆ ಬಳಿಕ ಗಿರಿಜಾಗೆ ಗರ್ಭಪಾತ ಆಗಿತ್ತು. ಇದಾದ ಬಳಿಕ ಸದ್ಯಕ್ಕೆ ಮಗು ಬೇಡ ಎಂದು ನವೀನ್ ಎಂದಿದ್ದ. ಆದ್ರೆ ಗಿರಿಜಾ ಮಗು ಬೇಕು ಎಂದು ಪಟ್ಟು ಹಿಡಿದಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ದಿನನಿತ್ಯ ಜಗಳ ನಡೆಯುತ್ತಿತ್ತು. ಅದರಂತೆ ಏಪ್ರಿಲ್ 12 ರಂದು ಮತ್ತೆ ಜಗಳವಾಗಿದ್ದು, ಕೊನೆಗೆ ನವೀನ್ ಮಲಗಿರುವ ಸಮಯ ನೋಡಿ ಉಸಿರುಗಟ್ಟಿಸಿ ಪತ್ನಿ ಗಿರಿಜಾಳನ್ನ ಕೊಲೆ ಮಾಡಿದ್ದಾನೆ. ಈ ಬಗ್ಗೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ನವೀನ್ನನ್ನು ಬಂಧಿಸಿದ್ದಾರೆ.