ಮೈಸೂರು- ಕೊಡಗು ಕ್ಷೇತ್ರದ ಗೆಲುವಿಗೆ ಸ್ವಜಾತಿ ವ್ಯಾಮೋಹ
ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂ.ಲಕ್ಷ್ಮಣ್ ಗೌಡ ಅವರ ಗೆಲುವಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವಜಾತಿ ಒಕ್ಕಲಿಗ ದಾಳ ಉರುಳಿಸಿದ್ದಾರೆ. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿ ಒಕ್ಕಲಿಗ ಅಭ್ಯರ್ಥಿ ಗೆಲ್ಲಿಸಿ ಎಂಬ ಸಂದೇಶ ರವಾನಿಸಿದರು.
ಜಾತಿ, ಧರ್ಮದ ಆಧಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದಿಲ್ಲ. ಪ್ರತಿಯೊಂದು ಜಾತಿ, ಧರ್ಮದವರನ್ನು ಸಮಾನವಾಗಿ ಪರಿಗಣಿಸುತ್ತದೆ. ಜಾತಿ, ಧರ್ಮ ಇಲ್ಲ ಎಂದು ಹೇಳಿಕೊಂಡರೂ ಜಾತಿ, ಧರ್ಮ ಇದೆ. ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ೨೮ ಕ್ಷೇತ್ರದ ಪೈಕಿ ೮ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ನೀಡಿದೆ ಎಂದು ಹೇಳುವುದರ ಮೂಲಕ ಒಕ್ಕಲಿಗ ದಾಳ ಬಹಿರಂಗವಾಗಿ ಉರುಳಿಸಿದ್ದಾರೆ.
ಡಿ.ವಿ. ಸದಾನಂದಗೌಡ, ಶೋಭಾ ಕರಂದ್ಲಾಜೆಗೆ ಮಾಡಿರುವ ಅವಮಾನದಿಂದ ಒಕ್ಕಲಿಗ ಸಮುದಾಯದವರು ಬಿಜೆಪಿ ಬಗ್ಗೆ ಆಕ್ರೋಶಿತರಾಗಿದ್ದಾರೆ. ಗೋ ಬ್ಯಾಕ್ ಅಭಿಯಾನದಿಂದ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಶೋಭಾ ಕರಂದ್ಲಾಜೆಗೆ ಅವಕಾಶ ಸಿಗಲಿಲ್ಲ. ಸದಾನಂದಗೌಡ, ಶೋಭಾ ಕರಂದ್ಲಾಜೆಗೆ ಬಿಜೆಪಿ ಅವಮಾನ ಮಾಡಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡುವುದಾಗಿ ಒಕ್ಕಲಿಗ ಸಮುದಾಯದವರು ತನ್ನೊಂದಿಗೆ ಹೇಳಿದ್ದಾರೆಂದು ಹೇಳುವುದರ ಮೂಲಕ ಒಕ್ಕಲಿಗ ದಾಳ ಪ್ರಯೋಗಿಸಿದ್ದಾರೆ.
ಜಾತಿ, ಧರ್ಮದ ಆಧಾರದ ಮೇಲೆ ಕಾಂಗ್ರೆಸ್ ಮತ ಕೇಳುವುದಿಲ್ಲ. ನೀತಿ ಮೇಲೆ ಮತ ಕೇಳುತ್ತೇವೆ. ಪ್ರತಿಯೊಬ್ಬರಿಗೂ ಅವಕಾಶ ನೀಡುವ ಉದ್ಧೇಶದಿಂದ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ರಾಜ್ಯದಲ್ಲಿ ೮ ಒಕ್ಕಲಿಗ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದೇವೆ. ಮೈಸೂರು ಕ್ಷೇತ್ರದಲ್ಲಿ ಹಲವು ದಶಕದ ಬಳಿಕ ಒಕ್ಕಲಿಗ ಅಭ್ಯರ್ಥಿಗೆ ಕಾಂಗ್ರೆಸ್ ಅವಕಾಶ ನೀಡಿದೆ. ಸರಳ ವ್ಯಕ್ತಿತ್ವದ, ಜನಪರ ಧ್ವನಿ ಎತ್ತುವ ಹೋರಾಟಗಾರ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ವಿರುದ್ಧ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬ ಕಾರಣಕ್ಕಾಗಿ ೧೪ ಸಂಸದರಿಗೆ ಈ ಬಾರಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಇದೇ ಸಮಯದಲ್ಲಿ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಗ್ಯಾರಂಟಿ ಯೋಜನೆ ಪ್ರತಿಯೊಬ್ಬ ಫಲಾನುಭವಿಗೂ ತಲುಪಿದೆ. ಬಿಜೆಪಿ ಅಭ್ಯರ್ಥಿ ನಿಮ್ಮ ಸಮಸ್ಯೆ ಪರಿಹರಿಸಲು ಬರುವುದಿಲ್ಲ. ತಾಲೂಕು ಕಚೇರಿಗೂ ಬರುವುದಿಲ್ಲ. ನೀವು ಅವರನ್ನು ಭೇಟಿ ಮಾಡಲು ಆಗುವುದಿಲ್ಲ. ಮನೆಯಲ್ಲಿರುವವರನ್ನು ಆಯ್ಕೆ ಮಾಡಬೇಡಿ ಎಂದು ಮನವಿ ಮಾಡಿದರು.
ಸತ್ಯ- ಸುಳ್ಳು
ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯೂ ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅನುಷ್ಠಾನಕ್ಕೆ ತಂದಿರುವ ಪಂಚ ಗ್ಯಾರಂಟಿಗಳು ಸತ್ಯದ ವಿಚಾರವಾಗಿದೆ. ವಿದೇಶದಿಂದ ಕಪ್ಪು ಹಣ ತಂದು, ಪ್ರತಿಯೊಂದು ಕುಟುಂಬಕ್ಕೂ ೧೫ ಲಕ್ಷ ರೂ. ಜಮಾ ಮಾಡಲಾಗುವುದೆಂದು ಮೋದಿ ಸುಳ್ಳು ಭರವಸೆ ನೀಡಿದ್ದರು. ರೈತರ ಆಧಾರ ದ್ವಿಗುಣ ಮಾಡುವುದು, ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡುವುದು ಸೇರಿದ್ದಂತೆ ಕೇಂದ್ರ ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿದೆ. ಈ ವಿಚಾರದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದರು.
======
ಎಚ್ಡಿಕೆ ವಿರುದ್ಧ ಮಹಿಳಾ ಅಸ್ತ್ರ
ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಹಿಳೆಯರ ಸಬಲೀಕರಣಕ್ಕಾಗಿ, ಸ್ವಾವಲಂಬಿ ಬದುಕಿಗಾಗಿ ಗ್ಯಾರಂಟಿ ಯೋಜನೆಗಳ ಮೂಲಕ ನೆರವು ನೀಡಲಾಗುತ್ತಿದೆ. ಆದರೆ, ಗ್ಯಾರಂಟಿ ಯೋಜನೆ ಟೀಕಿಸುವ ಬರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಪ್ರಧಾನ ಮಂತ್ರಿ ಪುತ್ರ ಎಚ್.ಡಿ. ಕುಮಾರಸ್ವಾಮಿ ಮಹಿಳೆಯರು ಸೇರಿದ್ದಂತೆ ಮನುಕುಲಕ್ಕೆ ಅಪಮಾನ ಮಾಡಿದ್ದಾರೆ. ಕರ್ಮದ ಲೆಕ್ಕಚಾರ ಇರುತ್ತದೆ ಎಂದು ಎಚ್ಡಿಕೆಗೆ ಎಚ್ಚರಿಕೆ ನೀಡಿದರು.
ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಮಹಿಳೆಯರಿಗೆ ಅವಮಾನ ಮಾಡಿರುವ ಕುಮಾರಸ್ವಾಮಿ ಅವರನ್ನ ಎನ್ಡಿಎ ಒಕ್ಕೂಟದಲ್ಲಿ ಇಟ್ಟುಕೊಳ್ಳಲು ಲಾಯಕ್ ಆಗಿದ್ದಾರಾ ಎಂಬುದನ್ನು ರಾಜ್ಯಕ್ಕೆ ಭೇಟಿ ನೀಡಿತ್ತಿರುವ ಪ್ರಧಾನಿ ಮೋದಿ ಯೋಚಿಸಬೇಕು. ಕೇಂದ್ರ ಸಚಿವರಾಗಿರುವ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್ ಈ ಬಗ್ಗೆ ಉತ್ತರ ನೀಡಬೇಕೆಂದು ಆಗ್ರಹಿಸಿದರು.
ಇಂದಿರಾ ಗಾಂಧಿ ನಾಯಕತ್ವ ನನಗೆ ತುಂಬಾ ಇಷ್ಟ. ಮಹಿಳೆಯರ ಹಿತಾಸಕ್ತಿ ಕಾಪಾಡಲು ಹೆಚ್ಚಿನ ಮುತುವರ್ಜಿ ತೋರಿದ್ದರು. ದೇಶದಲ್ಲಿ ಮಹಿಳೆಯಗೆ ಪ್ರಮುಖ ಸ್ಥಾನದೊಂದಿಗೆ ಸದಾ ಗೌರವ ನೀಡಲಾಗುತ್ತದೆ. ಮಹಿಳೆಯರನ್ನು ದೇವಿ ಸ್ವರೂಪದಲ್ಲಿ ನೋಡಲಾಗುತ್ತದೆ. ಚಾಮುಂಡೇಶ್ವರಿ ದೇವಿ, ಕಾವೇರಿ ತಾಯಿ, ಶೃಂಗೇರಿ ಶಾರದಾಂಬೆಯನ್ನು ಪೂಜಿಸುವ ನಾಡು ಇದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದ್ದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಮಹಿಳೆಯರನ್ನು ದಾರಿ ತಪ್ಪಿದ ಮಹಿಳೆಯರೆಂದು ಕುಮಾರಸ್ವಾಮಿ ಟೀಕೆ ಮಾಡುವುದರ ಮೂಲಕ ಅವಮಾನ ಮಾಡಿದ್ದಾರೆಂದು ಅಸಮಾಧಾನ ವ್ಯಕ್ತ ಪಡಿಸಿದರು.
ಕುಮಾರಸ್ವಾಮಿ ದಾರಿ ತಪ್ಪಿದ ಹೇಳಿಕೆಯಿಂದ ರಾಜ್ಯದ ಮಹಿಳೆಯರು ತೀವ್ರ ಅಸಮಾಧಾನಗೊಂಡಿದ್ದಾರೆ. ರಾಜ್ಯದ ಮಹಿಳೆಯರು ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು. ಮಹಿಳೆಯರು ಹೋರಾಟ ಮಾಡದಿದ್ದರೂ ಪರವಾಗಿಲ್ಲ. ಮಾರಾಟ ಆಗಬಾರದು. ಕೋಟ್ಯಂತರ ಮಹಿಳೆಯರು ಸರ್ಕಾರದ ಗ್ಯಾರಂಟಿ ಯೋಜನೆ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಒಳ್ಳೆಯ ಯೋಜನೆ ಬಗ್ಗೆ ಟೀಕೆ ಮಾಡುವ ಸಂದರ್ಭದಲ್ಲಿ ಹೆಣ್ಣು ಕುಲಕ್ಕೆ ಕುಮಾರಸ್ವಾಮಿ ಅವಮಾನ ಮಾಡಿದ್ದಾರೆಂದು ಅಸಮಾಧಾನ ವ್ಯಕ್ತ ಪಡಿಸಿದರು.