ಪ್ರತಿನಿಧಿ ವರದಿ ನಾಪೋಕ್ಲು
ಸಂತೆ ಮಾರುಕಟ್ಟೆಯಲ್ಲಿ ವರ್ತಕರಿಂದ ಸುಂಕದ ಜತೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾದ ಹಿನ್ನೆಲೆ ಗ್ರಾಮ ಪಂಚಾಯಿತಿ ವತಿಯಿಂದ ವರ್ತಕರಿಂದ ಮಾಹಿತಿ ಸಂಗ್ರಹಿಸಲಾಯಿತು.
ಗ್ರಾಮ ಪಂಚಾಯಿತಿ ನಿಗದಿಪಡಿಸಿದ್ದಕ್ಕಿಂತ ದುಪ್ಪಟ್ಟು ಸುಂಕ ಪಡೆದಿರುವ ಬಗ್ಗೆ ವರ್ತಕರು ಮಾಹಿತಿ ನೀಡಿದರು. ಹೆಚ್ಚುವರಿ ಸುಂಕ ಪಡೆದುಕೊಂಡರೆ ಪಂಚಾಯಿತಿಗೆ ದೂರು ನೀಡುವಂತೆ ತಿಳಿಸಲಾಯಿತು.
ಸುಂಕ ವಸೂಲಿದಾರ ಮತ್ತು ಪಂಚಾಯಿತಿ ಸದಸ್ಯನ ನಡುವೆ ಹೆಚ್ಚುವರಿ ಸುಂಕ ವಸೂಲಿ ಬಗ್ಗೆ ವಾಗ್ವಾದ ನಡೆಯಿತು. ಸುಂಕ ವಸೂಲಿ ಬಗ್ಗೆ ಕೇಳಿದಾದ ನೀವು ಸಂತೆಯಲ್ಲಿ ವ್ಯಾಪಾರ ಮಾಡುವುದೇ ಬೇಡ ಎಂದು ಬೆದರಿಸುತ್ತಾರೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಮಾತನಾಡಿ, ಮಾಧ್ಯಮದ ಮೂಲಕ ದುಬಾರಿ ಸುಂಕ ವಸೂಲಿ ಮತ್ತು ಶೆಡ್ಡು ನಿರ್ಮಿಸಿರುವುದಾಗಿ ಸುಳ್ಳು ಹೇಳಿರುವ ಬಗ್ಗೆ ಮಾಹಿತಿ ದೊರೆಕಿದೆ. ಮಾಹಿತಿ ಹಕ್ಕು ಕಾರ್ಯಕರ್ತ ಹಾರಿಸ್ ಕೂಡ ಆರೋಪಿಸಿದ್ದಾರೆ. ದುಬಾರಿ ಶುಲ್ಕ ಶೆಡ್ಡು ನಿರ್ಮಿಸಿರುದಾಗಿ ಹೆಚ್ಚುವರಿ ಹಣವಸೂಲಿ ಮಾಡಿರುವುದು ತಿಳಿದು ಬಂದಿದೆ. ಆದರೆ ಪಂಚಾಯಿತಿ ಸದಸ್ಯರ ಹಸ್ತಕ್ಷೇಪ ಇರುವುದು ದೃಢ ಪಟ್ಟಿಲ್ಲ. ಈ ಬಗ್ಗೆ ನಾವು ಸುಂಕ ವಸೂಲಿ ಮಾಡಿದವರನ್ನು ಕರೆಸಿ ವಿಚಾರಣೆ ಮಾಡಿ ಪಂಚಾಯಿತಿ ಸದಸ್ಯರ ಕೈವಾಡವಿದ್ದಲ್ಲಿ, ಖಂಡಿತವಾಗಲೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅನುದಾನದಲ್ಲಿ ಸಂತೆಗೆ ಶೆಡ್ ನಿರ್ಮಾಣ ಮಾಡಲಾಗಿದೆ. ವೈಯಕ್ತಿಕ ಹಣ ವಿನಿಯೋಗಿಸಿಲ್ಲ. ಖಾಸಗಿ ವ್ಯಕ್ತಿಗಳು ನಿರ್ಮಿಸಿದ್ದಲ್ಲ ಎಂದು ದೃಡಪಡಿಸಿದರು.
ಈ ಸಂದರ್ಭ ಉಪಾಧ್ಯಕ್ಷೆ ಕುಲ್ಲೇಟೀರ ಹೇಮ ಅರುಣ್, ಸದಸ್ಯರಾದ ಕನ್ನಂಭೀರ ಸುಧಿ, ಕುರೇಶ್, ಸಾಬಾ ತಿಮ್ಮಯ್ಯ, ಪುಷ್ಪ, ಇದ್ದರು.
ಫೋಟೋ 15 ಎಂಡಿಕೆ 07 ; ನಾಪೋಕ್ಲು ಸಂತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.